UNO: UN ಸಭೆಯಲ್ಲಿ ನಿತ್ಯಾನಂದನ ಪ್ರತಿನಿಧಿಗಳು ಭಾಗಿಯಾಗಿದ್ದು ಸುಳ್ಳು! ಪ್ರಚಾರಕ್ಕಾಗಿ ಈತನೇ ಕಟ್ಟಿದ ಸುಳ್ಳು ಪುರಾಣವೀಗ ಬಯಲು!

UNO: ನಿನ್ನೆ ದಿನ ಸೋಷಿಯಲ್ ಮೀಡಿಯಾಗಳಲ್ಲಿ(Social media) ‘ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸಕ್ಕೆ(United state of Kailasa)ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ, ನಮ್ಮ ಕೈಲಾಸದೇಶಕ್ಕೆ ಮಾನ್ಯತೆ ದೊರಕಲಿದೆ’ ಎಂದು ನಿತ್ಯಾನಂದ ಹೇಳಿದ್ದ ವಿಚಾರ ಭಾರೀ ಸದ್ಧು ಮಾಡಿತ್ತು. ಅವನ ಮಹಿಳಾ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ ಫೋಟೋಗಳು ಕೂಡ ಸಖತ್ ವೈರಲ್ ಆಗಿದ್ವು. ಆದರೆ ಇದೆಲ್ಲವೂ ಸುಳ್ಳಂತೆ! ಈ ಪುಣ್ಯಾತ್ಮ ನಿತ್ಯಾನಂದನೇ ಈ ರೀತಿಯ ಸುಳ್ಳು ಪುರಾಣದ ಕತೆ ಹೇಳಿದ್ದಾನಂತೆ!

ಹೌದು, ವಿಶ್ವಸಂಸ್ಥೆಯ (United Nations)(UNO) ಅಂಗಸಂಸ್ಥೆಯ ಸಭೆಯೊಂದರಲ್ಲಿ ಭಾಗಿಯಾಗಿದ್ದ ನಿತ್ಯಾನಂದನ (Nityananda) ಶಿಷ್ಯೆ ವಿಜಯಪ್ರಿಯ ನಿತ್ಯಾನಂದ ಮತ್ತು ಇಯಾನ್‌ ಕುಮಾರ್‌ ಎಂಬುವವರು, ‘ನಿತ್ಯಾನಂದ ಸ್ವಾಮಿಯು, ಪುರಾತನ ಹಿಂದೂ (Hindu) ನೀತಿ ಮತ್ತು ದೇಶೀಯ ಪರಿಹಾರಗಳನ್ನು ಕೈಲಾಸ ದೇಶದಲ್ಲಿ (Kailasa Country) ಜಾರಿಗೊಳಿಸುತ್ತಿದ್ದಾರೆ. ಈ ಮೂಲಕ ಸುಸ್ಥಿರ ಅಭಿವೃದ್ಧಿ ಕೈಗೊಂಡಿದ್ದಾರೆ. ಕೈಲಾಸ ದೇಶದಲ್ಲಿ ಎಲ್ಲರಿಗೂ ಆಹಾರ, ವಸತಿ, ಬಟ್ಟೆ, ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ ಇದೇ ಕಾರಣಕ್ಕಾಗಿಯೇ ನಿತ್ಯಾನಂದನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಕಿರುಕುಳ ನೀಡಲಾಯಿತು. ಅವರಿಗೆ ಬೋಧನೆ ಮಾಡಲು ಅವಕಾಶ ನಿರಾಕರಿಸಿದ ಕಾರಣ ಅವರು ತಾವು ಹುಟ್ಟಿದ ದೇಶ ಬಿಡುವಂತಾಯಿತು’ ಎಂದು ಸಭೆಯ ಮುಂದೆ ವಾದಿಸಿದ್ದಾರೆ’ ಎನ್ನಲಾದ ವಿಚಾರ ನಿನ್ನೆ ಎಲ್ಲರ ಗಮನ ಸೆಳೆದಿತ್ತು.

ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಸದ್ದು ಮಾಡಿದ್ವು. ಆದರೆ ವಿಶ್ವ ಸಂಸ್ಥೆ ಸಭೆಯಲ್ಲಿ ಕೈಲಾಸದ ಪ್ರತಿನಿಧಿಗಳು ಭಾಗವಹಿಸಿದ್ದರು ಎನ್ನಲಾದ ಆ ಎಲ್ಲಾ ಫೋಟೋಗಳು ಸುಳ್ಳಂತೆ! ಅರ್ಥಾತ್ ಅದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಅಥವಾ ಇನ್ನಾವುದೇ ಸದಸ್ಯ ರಾಷ್ಟ್ರಗಳ ಪ್ರಮುಖ ಸಭೆ ಅಲ್ಲಂತೆ! ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ನಿತ್ಯಾನಂದ ಹಾಗೂ ಆತನ ಶಿಷ್ಯರು, ಇದು ವಿಶ್ವಸಂಸ್ಥೆಯ ಸಭೆ (United Nations Meeting) ಎಂದು ಬಿಂಬಿಸುವ ಯತ್ನ ಮಾಡಿದ್ದಾರೆ.

ಇದು ವಿಶ್ವಸಂಸ್ಥೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತಾದ ಸಮಿತಿಯು ಇತ್ತೀಚೆಗೆ ಜಿನೇವಾದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಅಭಿವೃದ್ಧಿ ಕುರಿತಾದ ಸಾಮಾನ್ಯ ಸಮಾಲೋಚನಾ ಸಭೆಯಾಗಿತ್ತು. ಇದರಲ್ಲಿ ಸಾರ್ವಜನಿಕರಿಗೂ ಭಾಗಿಯಾಗಲು ಮುಕ್ತ ಅವಕಾಶ ನೀಡಲಾಗಿತ್ತು. ಈ ಸಭೆಯಲ್ಲಿ ಭಾಗಿಯಾಗಿದ್ದ ನಿತ್ಯಾನಂದನ ಶಿಷ್ಯರು, ಇದನ್ನೇ ವಿಶ್ವಸಂಸ್ಥೆ ಸಭೆ, ಇದರಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವ ಮೂಲಕ ನಮ್ಮ ಕೈಲಾಸ ದೇಶಕ್ಕೆ ಮಾನ್ಯತೆ ನೀಡಲಾಗಿದೆ. ಇದರೊಂದಿಗೆ ಭಾರತದಲ್ಲಿ ನಿತ್ಯಾನಂದನಿಗೆ ಕಿರುಕುಳ ಎಂದು ಸಭೆಯಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಮುಕ್ತವಿದ್ದ ಸಭೆಯಲ್ಲಿ ಪಾಲ್ಗೊಂಡು ನಿತ್ಯನ ಭಕ್ತರು ಸುಳ್ಳು ಹರಡಿದ್ದಾರೆ.

Leave A Reply

Your email address will not be published.