ರಾಜ್ಯ ರಾಜಕೀಯದಲ್ಲಿ ನಾಳೆಯಿಂದ ಹೊಸ ಪರ್ವ ಆರಂಭವಾಗಲಿದೆ. ಎಲ್ಲರೂ ನಿರೀಕ್ಷೆ ಮಾಡಿರುವಂತೆ ಡಿಕೆ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆಶಿ ಅವರಿಗೆ ಸುಮ್ಮಸುಮ್ಮನೆ ಈ ಪಟ್ಟ ಸಿಗುತ್ತಿಲ್ಲ. ಅವರ ಪಕ್ಷಕ್ಕಾಗಿ ಮಾಡಿರುವ ತ್ಯಾಗ, ಪಕ್ಷ ಕಟ್ಟಲು ಶ್ರಮಿಸಿರುವ ಶ್ರಮ, ಅವರ ಕೆಚ್ಚೆದೆಯ ನಾಯಕತ್ವ, ನೇರ ನಡೆನುಡಿಯ ವ್ಯಕ್ತಿತ್ವ ಎಲ್ಲವೂ ಅವರನ್ನು ಈ ಪಟ್ಟಕ್ಕೆ ತಂದು ಕೋರಿಸುತ್ತಿವೆ. ಇದರ ಜೊತೆಗೆ ದೇವರ ಆಶೀರ್ವಾದವೂ ಕೂಡ ಇದೆ ಎಂಬುದು ಅಷ್ಟೇ ಸತ್ಯ.


ಡಿಕೆ ಶಿವಕುಮಾರ್ ಅವರಿಗೆ ಎಷ್ಟು ದೇವರ ಮೇಲೆ ಭಕ್ತಿ ಇದೆ ಎಂಬುದನ್ನು ನಾವೆಲ್ಲರೂ ಈಗಾಗಲೇ ನೋಡಿದ್ದೇವೆ. ತುಮಕೂರು ಬಳಿ ಇರುವ ನೊಣವಿನಕೆರೆ ಅಜ್ಜಯ್ಯನನ್ನು ಅವರು ಎಷ್ಟು ನೆನೆಯುತ್ತಾರೆ, ಆ ದೇವರಿಗೆ ಎಷ್ಟು ನಡೆದುಕೊಳ್ಳುತ್ತಾರೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಇಷ್ಟಿದ್ದರೂ ಕೂಡ ಡಿಕೆ ಶಿವಕುಮಾರ್ ಅವರು ಆ ಒಂದು ದೇವಸ್ಥಾನಕ್ಕೆ ಭೇಟಿ ಕೊಟ್ಟ ಕಾರಣ ಅವರ ಅದೃಷ್ಟವೇ ಬದಲಾಯಿತು ಎನ್ನಲಾಗುತ್ತದೆ. ಅದುವೆ ರಾಯಚೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ.
ಹೌದು, ರಾಯಚೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಮತ್ತು ಕರ್ನಾಟಕದ ಮುಖ್ಯಮಂತ್ರಿ ಪಟ್ಟಕ್ಕೂ ಇರುವ ಅವಿನಾಭಾವ ಸಂಬಂಧ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಡಿ ಕೆ ಶಿವಕುಮಾರ್ ಅವರು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ರಾಯಚೂರಿನ ಶ್ರೀ ಪಂಚಮುಖಿ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿದ್ದರು. ಈ ಭೇಟಿಯ ನಂತರ ಅವರ ರಾಜಕೀಯ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆದುಕೊಂಡಿದೆ ಮತ್ತು ಅವರ ಲಕ್ ಸಂಪೂರ್ಣವಾಗಿ ಬದಲಾಗಿದೆ ಎಂದು ಹೇಳಲಾಗುತ್ತಿದೆ. ಪಂಚಮುಖಿ ಆಂಜನೇಯನ ದರ್ಶನ ಪಡೆದ ಬಳಿಕ ಅವರ ರಾಜಕೀಯ ಹಾದಿಯಲ್ಲಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿ, ಮುಖ್ಯಮಂತ್ರಿ ಹುದ್ದೆಯು ಅವರನ್ನು ಹುಡುಕಿಕೊಂಡು ಬಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಶ್ರೀ ಪಂಚಮುಖಿ ಆಂಜನೇಯ ದೇಗುಲದ ಇತಿಹಾಸವನ್ನು ಗಮನಿಸಿದರೆ, ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಪ್ರಮುಖ ರಾಜಕೀಯ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿರುವ ಐತಿಹಾಸಿಕ ನಿದರ್ಶನಗಳು ಇವೆ. ಈ ಹಿಂದೆ ರಾಜ್ಯವನ್ನು ಆಳಿದ ಪ್ರಭಾವಿ ನಾಯಕರಾದ ಆರ್ ಗುಂಡೂರಾವ್, ಎಸ್ ಬಂಗಾರಪ್ಪ, ಎಂ ವೀರಪ್ಪ ಮೊಯಿಲಿ ಮತ್ತು ಬಿ ಎಸ್ ಯಡಿಯೂರಪ್ಪ ಅವರುಗಳು ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿ ಮಾರುತಿಯ ಆಶೀರ್ವಾದ ಪಡೆದಿದ್ದರು. ಅದಾದ ನಂತರ ಈ ಎಲ್ಲ ನಾಯಕರಿಗೂ ಕರ್ನಾಟಕದ ಮುಖ್ಯಮಂತ್ರಿ ಆಗುವ ಸೌಭಾಗ್ಯ ಲಭಿಸಿತ್ತು. ಇದೀಗ ಇದೇ ಹಾದಿಯಲ್ಲಿ ನಡೆದಿರುವ ಡಿ ಕೆ ಶಿವಕುಮಾರ್ ಅವರು ಪಂಚಮುಖಿ ಆಂಜನೇಯನ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ನಂತರ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸುತ್ತಿರುವ ಐದನೇ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಈ ಧಾರ್ಮಿಕ ಕಾಕತಾಳೀಯವು ಸದ್ಯಕ್ಕೆ ಇಡೀ ರಾಜ್ಯದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

