ಬೆಳ್ತಂಗಡಿ: ಕಣಿಯೂರು ಪ್ರವೀಣ್ ಮೇಲೆ 28-07-2024 ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಪ್ರಜ್ವಲ್ ಕೆ ವಿ ಹಾಗೂ ರಾಧಾಕೃಷ್ಣರವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ಒಟ್ಟು 20,000 ದಂಡ ವಿಧಿಸಲಾಗಿದೆ. ಪ್ರಕರಣ ವಿಚಾರಣೆ ನಡೆಸಿದ ಬೆಳ್ತಂಗಡಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾದೀಶರಾದ ಮನು ಬಿ ಕೆರವರು ಜೂ.2ರಂದು ಆರೋಪಿತರಾದ ಪ್ರಜ್ವಲ್ ಕೆ ವಿ ಮತ್ತು ರಾಧಾಕೃಷ್ಣ ರವರನ್ನು ದೋಷಿಯೆಂದು ನಿರ್ಣಯಿಸಿ ಶಿಕ್ಷೆ ವಿಧಿಸಿರುತ್ತಾರೆ.


ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿ ಕಿರಣ್ ಶಿಶಿಲರವರ ವಿರುದ್ಧ ಪ್ರತ್ಯೇಕ ವಿಚಾರಣೆ ನಡೆಯಲಿದೆ.
ಘಟನೆಯ ವಿವರ:
28-07-2024 ರಂದು ಮಧ್ಯಾಹ್ನ ಕಣಿಯೂರಿನ ನಿವಾಸಿ ಪ್ರವೀಣ ಎಂಬವರು ಬೆಳ್ತಂಗಡಿ ತಾಲೂಕಿನ ಕಣಿಯೂರಿನ ಅಂಗಡಿಯ ಹೊರಗೆ ಸಿಟ್ ಔಟ್ ನಲ್ಲಿ ಕುಳಿತಿದ್ದಾಗ ಅಲ್ಲಿಗೆ ಕೆ ಎ 21 ಝಡ್ 9630 ನೀಲಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ರಾಧಾಕೃಷ್ಣ, ಪ್ರಜ್ವಲ್ ಕೆ ವಿ, ಕಿರಣ್ ಶಿಶಿಲರವರು ಪ್ರವೀಣರವರ ಅಂಗಡಿಗೆ ಅಕ್ರಮ ಪ್ರವೇಶಗೈದು,ತುಳು ಭಾಷೆಯಲ್ಲಿ “ಈ ಮಹೇಶ್ ಶೆಟ್ಟಿ ತಿಮರೋಡಿ ಬಗ್ಗೆ ಬಾರೀ ಪಾತೆರುವನಾ, ನೀನು ಪಂಚಾಯತ್ ಮೆಂಬರ್ ಆದರೆ ನಿನಗಾಯಿತು, ನೀನು ಬಾರೀ ಹಾರಾಡ್ತಿಯಾ”ಎಂದು
ಹೇಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರವೀಣನಿಗೆ ಶಿಶಿಲದ ಆರೋಪಿ 1 ಕಿರಣ್ ಕುಮಾರ್ ಡಿ ರಾಡ್ ನಿಂದ ಮುಖಕ್ಕೆ ಹೊಡೆದು, ಪ್ರವೀಣನ ಬಲಬದಿಯ ಮೂಗಿಗೆ ರಕ್ತಗಾಯವಾಗಿರುತ್ತದೆ.
ಕಲ್ಮಂಜ ಗ್ರಾಮದ ಪ್ರಜ್ವಲ್ ಕೆ ವಿ ಮತ್ತು ಕಣಿಯೂರು ಗ್ರಾಮದ ರಾಧಾಕೃಷ್ಣ ಬಿ ರವರು ಪ್ರವೀಣರವರಿಗೆ ಮುಖಕ್ಕೆ, ಮೂಗಿಗೆ ಮೈ ಕೈಗೆ ಕೈಯಿಂದ ಹಲ್ಲೆ ನಡೆಸಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರು. ಕಿರಣ್ ಶಿಶಿಲ ಮತ್ತು ಪ್ರಜ್ವಲ್ ಕೆ ವಿರವರು ಪ್ರವೀಣನನ್ನು ಉದ್ದೇಶಿಸಿ ಇಂತಹ ಕೇಸ್ ಗಳು ಈ ಮೊದಲು ನಾವು ತುಂಬಾ ನೋಡಿದ್ದೇವೆ ಎಂದು ಹೇಳಿ,ಮುಂದಕ್ಕೆ ಬಾಲ ಬಿಚ್ಚಿದರೆ ತಲವಾರಿನಿಂದ ಕಡಿಯುತ್ತೇವೆಂದು ಬೆದರಿಕೆ ಹಾಕಿದ್ದರು. ಈ ಬಗ್ಗೆ ಪ್ರವೀಣ ಉಪ್ಪಿನಂಗಡಿ ಠಾಣೆಯಲ್ಲಿ ಪ್ರವೀಣ್ ರವರು ಆರೋಪಿಗಳ ವಿರುದ್ಧ ದೂರು ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಆರೋಪಿಗಳ ವಿರುದ್ಧ ಕಲಂ: 329(4), 352, 115(2), 118(1), 351(2), 3 3(5) BNS 2023 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆಗಿನ ಉಪ್ಪಿನಂಗಡಿ ಸಹಾಯಕ ಉಪನಿರೀಕ್ಷಕರಾದ ಲಾರೆನ್ಸ್ ಪಿ ಆರ್ ರವರು ಬೆಳ್ತಂಗಡಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಶಿಕ್ಷೆಯ ಪ್ರಮಾಣ: ವಿಚಾರಣೆ ನಡೆಸಿದ ನ್ಯಾಯಾದೀಶರಾದ ಮನು ಬಿ ಕೆ ರವರು ಆರೋಪಿತರಾದ ಪ್ರಜ್ವಲ್ ಕೆ ವಿ ಮತ್ತು ರಾಧಾಕೃಷ್ಣ ರವರನ್ನು ದೋಷಿಯೆಂದು ನಿರ್ಣಯಿಸಿ ಈ ಕೆಳಗಿನಂತೆ ಶಿಕ್ಷೆ ವಿಧಿಸಿರುತ್ತಾರೆ.115(2), 329(4) ಬಿಎನ್ ಎಸ್ ನಡಿ ಅಪರಾಧಕ್ಕಾಗಿ ಆರು ತಿಂಗಳು
ಸಾದ ಕಾರಾಗೃಹ ವಾಸ ಮತ್ತು ಐದು ಸಾವಿರ ದಂಡ,ಮತ್ತು ದಂಡ ತರಲು ತಪ್ಪಿದ್ದಲ್ಲಿ ಹೆಚ್ಚುವರಿ ಮೂರು ತಿಂಗಳು ಕಾರಾಗೃಹ ವಾಸ ಹಾಗೂ 351(2), 352 ಬಿ ಎನ್ ಎಸ್ ನಡಿ ಅಪರಾಧಕ್ಕಾಗಿ ಆರೋಪಗಳಿಗೆ ಆರು ತಿಂಗಳು ಸಾದ ಕಾರಾಗೃಹ ವಾಸ ಮತ್ತು ಐದು ಸಾವಿರ ದಂಡ,ಮತ್ತು ದಂಡ ತರಲು ತಪ್ಪಿದ್ದಲ್ಲಿ ಹೆಚ್ಚುವರಿ ಆರು ತಿಂಗಳು ಕಾರಾಗೃಹ ವಾಸ,ದಂಡ ಮೊತ್ತವನ್ನು ಸಂತ್ರಸ್ತರ ಪರಿಹಾರಾರ್ಥವಾಗಿ ಗಾಯಾಳು ಪ್ರವೀಣ್ ರವರಿಗೆ ನೀಡಲು ಆದೇಶಿಸಲಾಗಿದೆ.
ಒಂದನೇ ಆರೋಪಿ ಕಿರಣ್ ಶಿಶಿಲ ಸಾಕ್ಷಿ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರತ್ಯೇಕ ವಿಚಾರಣೆ ನಡೆಯಬೇಕಾಗಿರುತ್ತದೆ. ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದರು.

