Shocking news : ಮದುವೆಗೆ ಬಂತು ಕಾಂಗ್ರೆಸ್ ‘ಪ್ರಜಾಧ್ವನಿ’ ಬಸ್! ಸಿದ್ದು, ಡಿಕೆಶಿ ಬಂದ್ರೆಂದು ಜೋಶ್ ನಲ್ಲಿ ಓಡಿದ ಜನ!

ಚುನಾವಣೆ ನಿಮಿತ್ತ ರಾಜ್ಯದಲ್ಲಿ ಎಂತಹ ಅಚ್ಚರಿ ಬೇಕಾದರೂ ನಡೆಯಬಹುದು. ಇದರಲ್ಲಿ ಅಚ್ಚರಿ ಪಡಬೇಕಾದುದೇನು ಇರುವುದಿಲ್ಲ. ಆದರೆ ಇಲ್ಲೊಂದು ಸನ್ನಿವೇಶ ಮಾತ್ರ ಜನರನ್ನು ಅಚ್ಟರಿಗೊಳಿಸಿದೆ. ರಾಜ್ಯಾದ್ಯಂತ ಪ್ರಚಾರಕ್ಕಾಗಿ ಪಕ್ಷಗಳು ತಮ್ಮದೇ ಆದ ಸಾಧನೆ ಹಾಗೂ ನಾಯಕರ ಭಾವಚಿತ್ರಗಳನ್ನು ಹೊಂದಿರುವ ಬಸ್ ಗಳನ್ನು ವಿನ್ಯಾಸಗೊಳಿಸಿ ಯಾತ್ರೆಗಳನ್ನು ಆರಂಭಿಸಿವೆ. ಇದರಲ್ಲಿ ಕಾಂಗ್ರೆಸ್ ಪಾರ್ಟಿಯ ಪ್ರಜಾಧ್ವನಿ ಯಾತ್ರೆಯು ಒಂದು. ಇದೀಗ ಈ ಕಾಂಗ್ರೆಸ್ ಪಾರ್ಟಿಯ ಪ್ರಜಾಧ್ವನಿ ಯಾತ್ರೆ ಬಸ್, ಮದುವೆ ಸಮಾರಂಭವೊಂದರಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದೆ.

ಹೌದು, ಕಾಂಗ್ರೆಸ್ ಪಕ್ಷ ಜನರನ್ನು ಸೆಳೆಯಲು, ತಮ್ಮ ಪಕ್ಷದ ಪ್ರಣಾಳಿಕೆಯನ್ನ ಜನರ ಬಳಿ ತಲುಪಿಸಲು ಪ್ರಜಾಧ್ವನಿ ಬಸ್ ಯಾತ್ರೆಯ ಮೂಲಕ ಮುಂದಾಗಿದೆ. ಸದ್ಯ ರಾಜ್ಯದ ಹಲವೆಡೆ ತಮ್ಮದೇ ಬಸ್ಸಿನ ಮೂಲಕ ಪ್ರಚಾರ ಕಾರ್ಯವನ್ನು ಸಂಪೂರ್ಣ ಮುಗಿಸಿದೆ. ಆದರೀಗ ಈ ಬಸ್ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡು ಜನರ ಅಚ್ಚರಿಗೆ ಕಾರಣವಾಗಿದೆ. ಬೆಂಗಳೂರು ಹೊರವಲಯ, ನೆಲಮಂಗಲ ನಗರದ ಕುಣಿಗಲ್ ಬೈಪಾಸ್‍ನ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಈ ಬಸ್ ಆಗಮಿಸಿದೆ.

ಈ ಬಸ್ ಬಂದ ವೇಳೆ ಕೆಲಕಾಲ ಮದುವೆ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಸೇರಿದಂತೆ ನಾಯಕರು ಬಂದ್ರಾ ಎಂದು ಜನರು ಜೋಶ್ ನಲ್ಲಿ ಎದ್ದು ಓಡಿಬಂದಿದ್ದಾರೆ. ಮದುವೆ ನಡೆಯುತ್ತಿದ್ದೆಡೆ ಇದ್ದ ಕಾಂಗ್ರೆಸ್ ಕಾರ್ಯಕರ್ತರಿಗೇ ಈ ಬಸ್ ನೋಡಿ ಒಮ್ಮೆಲೆ ಶಾಕ್ ಆಗಿದೆ. ಒಟ್ಟಿನಲ್ಲಿ ಈ ಬಸ್ ಮದುವೆ ದಿಬ್ಬಣಕ್ಕೆ ಹಾಜರಾಗಿದ್ದು ಕೆಲವು ಸಮಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ನಂತರ ಇದರ ಕುರಿತು ವಿಚಾರಿಸಿದಾಗ ನಿಜಾಂಶ ತಿಳಿದಿದೆ. ಕಾಂಗ್ರೆಸ್ ಒಂದು ತಿಂಗಳ ಹಿಂದೆ ಚಾಲನೆ ನೀಡಿದ್ದ ಪ್ರಜಾಧ್ವನಿಯ ಕೆಎ 02 ಎಜಿ 0855 ಬಸ್ ಬಾಡಿಗೆಗೆ ಬಂದಿದ್ದು ಎಂದು ತಿಳಿದು ಎಲ್ಲರೂ ಸುಮ್ಮನಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಜೋಡೆತ್ತುಗಳಂತೆ ಆರಂಭಿಸಿದ ಬಸ್ ಯಾತ್ರೆ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸಂಚಾರ ಮಾಡಿದೆ. ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಸಮಾರಂಭ ಮಾಡಲು ದಿನಾಂಕ ನಿಗದಿಯಾಗಿದೆ. ಆದರೆ ಕಾಂಗ್ರೆಸ್ ಪ್ರಜಾಧ್ವನಿಯ ಸಮಾರಂಭದ ಬಿಡುವಿನ ವೇಳೆಯಲ್ಲಿ ಬಸ್ ಮದುವೆ ಕಾರ್ಯಕ್ರಮಕ್ಕೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದೆ.

Leave A Reply

Your email address will not be published.