ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಮೂರು ವರ್ಷಗಳಿಂದ ತಲೆಕೂದಲು, ಗಡ್ಡ ತೆಗೆಯದೆ ಹರಕೆ ಹೊತ್ತಿರುವ ರಾಮನಗರದ ಈಶ್ವರಪ್ಪ ಅವರ ಆಸೆ ಈಡೇರಿದೆ. ಕುಂಭಮೇಳದಲ್ಲಿ ಈ ಸಂಕಲ್ಪ ಮಾಡಿದ್ದ ಇವರು ಇದೀಗ ಮಂತ್ರಾಲಯಕ್ಕೆ ಹೋಗಿ ಹರಕೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.


ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದ ಈಶ್ವರಪ್ಪ ಎಂಬ ಅಭಿಮಾನಿಯ ಕಥೆ ಇದು. ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂಬ ಒಂದೇ ಒಂದು ಆಸೆಗೆ ಮೂರು ವರ್ಷಗಳ ಹಿಂದೆ ಅಪರೂಪದ ಹರಕೆಯನ್ನು ಹೊತ್ತಿದ್ದರಂತೆ.
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳಕ್ಕೆ ತೆರಳಿದ್ದ ಈಶ್ವರಪ್ಪ ಅಲ್ಲಿ ತ್ರಿವೇಣಿ ಸಂಗಮದಲ್ಲಿ ಡಿಕೆ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಸ್ನಾನ ಮಾಡಿದ್ದರು. ಈ ವೇಳೆ ನಾನು ಡಿಕೆಶಿ ಮುಖ್ಯಮಂತ್ರಿ ಆಗುವವರೆಗೂ ತಲೆಕೂದಲು ಮತ್ತು ಗಡ್ಡ ತೆಗೆಯುವುದಿಲ್ಲ ಎಂದು ದೇವರ ಮುಂದೆ ಸಂಕಲ್ಪ ಮಾಡಿದ್ದರು.
ಇದೀಗ ಡಿಕೆಶಿ ಸದ್ಯದಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸುದ್ದಿ ಹೊರಬಿದ್ದ ತಕ್ಷಣ ಈಶ್ವರಪ್ಪ ಅವರಿಗೆ ಆದ ಖುಷಿಗೆ ಪಾರವೇ ಇಲ್ಲ. ಮೂರು ವರ್ಷಗಳ ತಪಸ್ಸಿಗೆ ಫಲ ದೊರಕಿದಂತಾಯಿತು. ಡಿಕೆಶಿ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿ, ತಮ್ಮ ಹರಕೆಯ ಕುರಿತು ಹೇಳಬೇಕೆಂಬ ಆಸೆಯಿದೆ ಅಂತೆ ಈಶ್ವರಪ್ಪನವರಿಗೆ.

