ಸರಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ | ರಜೆಗಳ ಸರಮಾಲೆ, ಈ ರಾಜ್ಯದ ಉದ್ಯೋಗಿಗಳಿಗೆ ಖುಷಿಯೋ ಖುಷಿ

ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನವರು ಕೆಲಸದ ಒತ್ತಡದಲ್ಲಿ ಸೆಣಸಾಡುತ್ತ ಇರುವವರು ಒಮ್ಮೆ ವಿರಾಮ ಸಿಕ್ಕಿದರೆ ಸಾಕು ಎಂದು ಬಯಸುವುದು ಸಹಜ. ಈ ಕೆಲಸದ ನಡುವೆ ಹೆಚ್ಚಿನವರಿಗೆ ಮನೆಯವರ ಜೊತೆಗೆ ಸಮಯ ಕಳೆಯಲು ಕೂಡ ಸಾಧ್ಯವಾಗದೆ ಪರದಾಡುವವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೀಗ, ವರ್ಕ್ ವರ್ಕ್ ಎಂದು ಸಿಸ್ಟಮ್ ಮುಂದೆ ಕೂರುವವರಿಗೆ ಕೊಂಚ ರಿಲ್ಯಾಕ್ಸ್ ನೀಡುವ ನಿಟ್ಟಿನಲ್ಲಿ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಸರ್ಕಾರಿ ಉದ್ಯೋಗಿಗಳು ಕೆಲಸದ ನಡುವೆ ತಮ್ಮ ಕುಟುಂಬದವರ ಜೊತೆಗೆ ಅಲ್ಲದೆ, ಪ್ರೀತಿ ಪಾತ್ರರ ಜೊತೆಗೆ ಕಾಲ ಕಳೆಯುವುದು ಕೂಡ ಅನಿವಾರ್ಯ. ಹಾಗಾಗಿ, ಇದೀಗ, ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಪೋಷಕರೊಂದಿಗೆ ಸಮಯ ಕಳೆಯುವ ಸಲುವಾಗಿ ವಿಶೇಷ ಕ್ಯಾಶುಯಲ್ ರಜೆಯನ್ನು ನೀಡಲಿದೆ.
ಕಳೆದ 2021ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಸ್ವಾತಂತ್ರ್ಯ ದಿನದಂದು ತಮ್ಮ ಮೊದಲ ಭಾಷಣದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯ ಸರ್ಕಾರಿ ನೌಕರರು ತಮ್ಮ ಪೋಷಕರು ಮತ್ತು ಕುಟುಂಬದವರೊಂದಿಗೆ ಸಮಯ ವಿನಿಯೋಗಿಸಲು ಕ್ಯಾಶುವಲ್ ರಜೆಯ ಬಗ್ಗೆ ಘೋಷಣೆ ಮಾಡಿದ್ದರು. ಈ ಬಳಿಕ, ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದ್ದು, ಅಂತಹ ಮೊದಲ ರಜೆಗಳನ್ನು ಈ ವರ್ಷ ಜನವರಿ 6 ಮತ್ತು 7ರಂದು ನೀಡಲಾಗಿದೆ.
ವಿಶೇಷ ರಜೆಗಳನ್ನು ಮುಂದಿನ ಎರಡು ದಿನಗಳಲ್ಲಿ ಎರಡನೇ ಶನಿವಾರ ಮತ್ತು ಭಾನುವಾರದ ನಿಯಮಿತ ರಜಾದಿನಗಳೊಂದಿಗೆ ಜೋಡಣೆ ಮಾಡಲಾಗಿದ್ದು, ಹೀಗಾಗಿ ಉದ್ಯೋಗಿಗಳಿಗೆ ಒಟ್ಟು ನಾಲ್ಕು ದಿನಗಳ ಕಾಲ ರಜೆಯ ಮಜಾ ಪಡೆಯಬಹುದು. ಸರ್ಕಾರಿ ಉದ್ಯೋಗಿಗಳು ಮುಂದಿನ ವರ್ಷ ಫೆಬ್ರವರಿ 9 ಮತ್ತು 10 ರಂದು ಎರಡು ದಿನಗಳ ವಿಶೇಷ ರಜೆ ಪಡೆಯಬಹುದು ಎಂಬುದಾಗಿ ಅಧಿಕೃತ ಪ್ರಕಟಣೆ ಶುಕ್ರವಾರ ಹೊರಡಿಸಲಾಗಿದೆ. ಈ ವಿಶೇಷ ರಜೆಯನ್ನು ಪಡೆಯಲು ಅದಕ್ಕೆ ಸಂಬಂಧ ಪಟ್ಟ ನಿಯಮಗಳು ಜೊತೆಗೆ ವಿಧಾನಗಳನ್ನು ವಿಶೇಷ ವೆಬ್ ಪೋರ್ಟಲ್ ಮೂಲಕ ತಿಳಿಸಲಾಗುವ ಕುರಿತು ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ಹೊರತುಪಡಿಸಿ ಸಚಿವರು ಸೇರಿದಂತೆ ಎಲ್ಲರೂ ಈ ರಜೆಯ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.