BJP ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಭೀಕರ ಕೊಲೆ!

Crime News: ಒಂದೆಡೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಜನರ ಮನವೊಲಿಸಲು ರಾಜಕೀಯ ಪಕ್ಷಗಳು ನಾನಾ ತಂತ್ರಗಳನ್ನು ಬಳಕೆ ಮಾಡುವುದನ್ನು ಕಾಣುತ್ತಿದ್ದೇವೆ. ಕರಾವಳಿಯ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಪ್ರವೀಣ್ ನೆಟ್ಟಾರ್ ಹತ್ಯೆಯ ಕಾವು ತಣ್ಣಗಾಗುತ್ತಿದ್ದಂತೆ ಇದೀಗ, ಮತ್ತೊಂದು ಭೀಕರ ಹತ್ಯೆ ನಡೆದಿರುವ ಕುರಿತು ವರದಿಯಾಗಿದೆ. ಧಾರವಾಡ ಜಿಲ್ಲೆಯ ಬಿಜೆಪಿ (BJP) ಯುವ ಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ ಕಮ್ಮಾರ ಅವರನ್ನು ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ (crime news) ನಡೆದಿದೆ.

ಧಾರವಾಡದ ಕೋಟೂರು ಗ್ರಾಮದಲ್ಲಿ ಎರಡು ಬಣಗಳ ನಡುವೆ ಅಸಮಾಧಾನ ಭುಗಿಲೆದ್ದ ಪರಿಣಾಮ ಜಗಳ ಆಡುತ್ತಿದ್ದವರ ಜಗಳ ನಿಲ್ಲಿಸಿ ಕಳುಹಿಸಿದ ಪ್ರವೀಣ್​ ಕಮ್ಮಾರ(36) ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರವೀಣ್​ ಅವರು ಗ್ರಾಮ‌ ಪಂಚಾಯತ್ ಉಪಾಧ್ಯಕ್ಷರಾಗಿದ್ದು ಇದರ ಜೊತೆಗೆ, ಬಿಜೆಪಿ ಯುವ ಮೋರ್ಚಾ ಮುಖಂಡರಾಗಿದ್ದರು. ಗ್ರಾಮದಲ್ಲಿ ನಡೆದಿದ್ದ ಉಡಚಮ್ಮ ದೇವಿ ಜಾತ್ರೆಯ ಪ್ರಸಾದದ ಸಂದರ್ಭ ಕೆಲವರು ಕುಡಿದು ಜಗಳವಾಡಿಕೊಳ್ಳಲು ಆರಂಭಿಸಿದ್ದು, ಈ ವೇಳೆ ಪ್ರವೀಣ್ ಜಗಳವನ್ನ ಬಿಡಿಸಿ ಎರಡು ಬಣಗಳನ್ನು ಕಳುಹಿಸಿದ್ದಾರೆ.

ಇದರ ನಡುವೆ, ಜಗಳವಾಡುತ್ತಿದ್ದ ಒಂದು ಗುಂಪಿನ ಕಡೆಯವರು ಪುನಃ ಖ್ಯಾತೆ ಶುರು ಮಾಡುತ್ತಾ ಮರಳಿ ಜಗಳವಾಡಲು ಬಂದಿದ್ದು, ಈ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಮತ್ತೊಮ್ಮೆ ಜಗಳವಾಡಲು ಬಂದ ಒಂದು ಬಣದವರು ಪ್ರವೀಣ್​ಗೆ ಚಾಕುವಿನಿಂದ ಇರಿದು ಕಾಲ್ಕಿತ್ತಿದ್ದಾರೆ. ಇನ್ನು ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡ ಪ್ರವೀಣ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಕೂಡ ಇಂದು(ಏ.19) ಮುಂಜಾನೆ ವೇಳೆಗೆ ಚಿಕಿತ್ಸೆ ಫಲಿಕಾರಿಯಾಗದೇ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು, ಚಾಕು ಇರಿದಿದ್ದ ರಾಘವೇಂದ್ರ ಪಟಾತ್ ಅವರನ್ನೊಳಗೊಂಡ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.