ಭಾರಿ ಕುತೂಹಲ ಕೆರಳಿಸಿರುವ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಇಂದು ಚುನಾವಣೆ ನಡೆಸಲಾಗಿದೆ. ಅಡ್ಡ ಮತದಾನದ ಭೀತಿಯಲ್ಲಿ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಇಟ್ಟು ತಾವೇ ಬಸ್ ಮುಖಾಂತರ ವಿಧಾನಸೌಧಕ್ಕೆ ಕರೆತಂದು ಮತ ಚಲಾಯಿಸಿದ್ದಾರೆ. ಈ ವೇಳೆ ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮತ ಚಲಾಯಿಸುವ ವೇಳೆ ಬಾರಿ ಹೈಡ್ರಾಮ ನಡೆದಿದೆ ಎಂದು ವರದಿಯಾಗಿದೆ


ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತಗಟ್ಟೆಗೆ ಬಂದಾಗ ಅಲ್ಲಿ ಹೈವೋಲ್ಟೇಜ್ ಡ್ರಾಮಾ ಸೃಷ್ಟಿಯಾಯಿತು. ಯತ್ನಾಳ್ ಅವರು ತಾವು ಯಾರಿಗೆ ಮತ ಹಾಕುತ್ತಿದ್ದೇವೆ ಎಂದು ಬಹಿರಂಗವಾಗಿ ಪತ್ರ ಬರೆದು ನಿಯಮ ಉಲ್ಲಂಘಿಸಿದ್ದಾರೆ, ಹೀಗಾಗಿ ಅವರ ಮತವನ್ನು ಮತಪೆಟ್ಟಿಗೆಗೆ ಹಾಕಲು ಬಿಡಬೇಡಿ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮತಗಟ್ಟೆಯಲ್ಲೇ ಆಕ್ಷೇಪ ವ್ಯತ್ತಪಡಿಸಿದರು. ತಕ್ಷಣ ರಂಗಕ್ಕಿಳಿದ ಬಿಜೆಪಿಯ ಏಜೆಂಟರಾದ ಎನ್. ರವಿಕುಮಾರ್ ಮತ್ತು ಕೆ.ಎಸ್. ನವೀನ್ ಕಾಂಗ್ರೆಸ್ ನಡೆಗೆ ಪ್ರತಿರೋಧ ಒಡ್ಡಿದರು. ಉಭಯ ನಾಯಕರ ನಡುವಿನ ವಾಕ್ಸಮರದ ನಂತರ, ಅಂತಿಮವಾಗಿ ಉಗ್ರಪ್ಪ ಅವರ ಆಕ್ಷೇಪವನ್ನು ತಿರಸ್ಕರಿಸಿದ ಚುನಾವಣಾಧಿಕಾರಿ, ಯತ್ನಾಳ್ ಅವರಿಗೆ ಮತ ಚಲಾಯಿಸಲು ಮುಕ್ತ ಅವಕಾಶ ನೀಡಿದರು.
