Home » ಸ್ನೇಹಿತನ ಹೆಂಡತಿಗೆ ಮೆಸೇಜ್ ಮಾಡಿದಕ್ಕೆ ಕೊಲೆ- ಬೈಕ್‌ನಲ್ಲಿ ಶವ ಸಾಗಿಸುವಾಗ ಪೆಟ್ರೋಲ್ ಖಾಲಿಯಾಗಿ ಸಿಕ್ಕಿಬಿದ್ದ ಪಾಪಿಗಳು!!

ಸ್ನೇಹಿತನ ಹೆಂಡತಿಗೆ ಮೆಸೇಜ್ ಮಾಡಿದಕ್ಕೆ ಕೊಲೆ- ಬೈಕ್‌ನಲ್ಲಿ ಶವ ಸಾಗಿಸುವಾಗ ಪೆಟ್ರೋಲ್ ಖಾಲಿಯಾಗಿ ಸಿಕ್ಕಿಬಿದ್ದ ಪಾಪಿಗಳು!!

0 comments

ಸ್ನೇಹಿತನ ಹೆಂಡತಿಗೆ ಮೆಸೇಜ್ ಮಾಡುತ್ತಿದ್ದಾನೆ ಎಂಬ ದ್ವೇಷದಿಂದ ವ್ಯಕ್ತಿ ಒಬ್ಬನನ್ನು ಹತ್ಯೆಮಾಡಿ, ಕೊಲೆಗಡುಕರು ಶವವನ್ನು ಬೈಕ್‌ನಲ್ಲೇ ಸಾಗಿಸುವಾಗ, ಪೆಟ್ರೋಲ್ ಖಾಲಿಯಾಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಗ್ರಾಮದ ಮಹೇಶ್ (34) ಕೊಲೆಯಾದ ವ್ಯಕ್ತಿ. ರಾಮನಾಥಮೋಳೆ ಗ್ರಾಮದ ರಾಜೇಶ್ ಎಂಬಾತನೇ ತನ್ನ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ಎಸಗಿರುವ ಆರೋಪಿ. ತನ್ನ ಸ್ನೇಹಿತನ ಹೆಂಡತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ. 

ಮಂಗಳವಾರ ರಾತ್ರಿ ಮಹೇಶ್ ತನ್ನ ಅಕ್ಕನ ಮನೆಯಲ್ಲಿ ಊಟ ಮಾಡುತ್ತಿದ್ದಾಗ ರಾಜೇಶ್ ಆತನಿಗೆ ಫೋನ್ ಮಾಡಿ ಹೊರಗೆ ಕರೆಸಿಕೊಂಡಿದ್ದಾನೆ. ನಂತರ ಮುಂಚಿತವಾಗಿಯೇ ಹೊಂಚು ಹಾಕಿದ್ದ ಸ್ನೇಹಿತರ ಗುಂಪು ಮಹೇಶ್ ಮೇಲೆ ಚಾಕು ಹಾಗೂ ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದೆ. ಕೊಲೆಯ ಬಳಿಕ ಸಿಕ್ಕಿಬೀಳುವ ಆತಂಕದಲ್ಲಿದ್ದ ಆರೋಪಿಗಳು, ಮಹೇಶ್ ದೇಹವನ್ನು ಬೈಕ್‌ನ ಮಧ್ಯದಲ್ಲಿ ಕೂರಿಸಿಕೊಂಡು ಭೀಮನಹಳ್ಳಿಯಿಂದ ಸುಲ್ತಾನ್ ರಸ್ತೆ ಮಾರ್ಗವಾಗಿ ಕೊಳ್ಳೇಗಾಲದ ಕಡೆಗೆ ಸಾಗಿಸಲು ಯತ್ನಿಸಿದ್ದಾರೆ. 

ಆದರೆ ಮಳವಳ್ಳಿ ಪಟ್ಟಣದ ಸೆಸ್ಕಾಂ ಕಚೇರಿ ಮುಂಭಾಗಕ್ಕೆ ಬರುತ್ತಿದ್ದಂತೆ ದುಷ್ಕರ್ಮಿಗಳ ಬೈಕ್‌ನಲ್ಲಿದ್ದ ಪೆಟ್ರೋಲ್ ಇದ್ದಕ್ಕಿದ್ದಂತೆ ಖಾಲಿಯಾಗಿದೆ. ರಸ್ತೆ ಮಧ್ಯದಲ್ಲೇ ಬೈಕ್ ನಿಂತಾಗ ಸಾರ್ವಜನಿಕರು ಈ ಬಗ್ಗೆ ಪ್ರಶ್ನಿಸಿದಾಗ, ಅಪಘಾತದಲ್ಲಿ ಗಾಯಗೊಂಡಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ ಮಹೇಶ್ ಮೈಮೇಲಿದ್ದ ತೀವ್ರವಾದ ಗಾಯಗಳು ಮತ್ತು ಅತಿಯಾದ ರಕ್ತಸ್ರಾವವನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಮಹೇಶ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. 

banner

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳದಲ್ಲಿದ್ದ ಪ್ರಮುಖ ಆರೋಪಿ ರಾಜೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

You may also like