ಬೆಳ್ತಂಗಡಿ: ಬ್ಲಾಕ್ ಯುವಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾವೂರಿನ ಅಝರುದ್ದೀನ್ ಎಂಬವರು ಮಂಗಳೂರಿನ ಮಂಗಳಾದೇವಿಗೆ ತನ್ನ ಮಗಳನ್ನು ನೋಡಲು ಹೋಗುತ್ತಿರುವಾಗ ಹಳೆಯ ವೈಷ್ಯಮ್ಯದಿಂದ ಹಾರೀಸ್ ಅಹಮ್ಮದ್ ಪರಪ್ಪು ಎಂಬವರು ಪಂಚ್ನಿಂದ ಹಲ್ಲೆ ನಡೆಸಿ, ತುಳಿದು ಜೀವ ಬೆದರಿಕೆ ಹಾಕಿದ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಜೂ.೧೫ರಂದು ಸಂಜೆ ೫.೩೦ ಗಂಟೆಗೆ ನಡೆದಿದ್ದು ಜೂ.೧೬ರಂದು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಠಾಣೆಯಲ್ಲಿ ದಾಖಲಾದ ದೂರಿನ ವಿವರ: ಜೂ.೧೫ರಂದು ನಾವೂರಿನ ಅಝರುದ್ದೀನ್ ಅವರು ಮಂಗಳೂರು ನಗರದ ಮಂಗಳಾದೇವಿ ಬಳಿ ಇರುವ ತನ್ನ ಹೆಂಡತಿಯ ತಾಯಿ ಮನೆಯಲ್ಲಿ ವಾಸವಿರುವ ತನ್ನ ಮಗಳನ್ನು ನೋಡಲು ಬೆಳ್ತಂಗಡಿ ಬಸ್ ನಿಲ್ದಾಣದಿಂದ ಕೆಎ ೧೯ಎಫ್ ೩೪೩೭ಸರಕಾರಿ ಬಸ್ನಲ್ಲಿ ಸಂಜೆ ಸಮಯ ಸುಮಾರು ೪ ಗಂಟೆಗೆ ಮಂಗಳೂರಿಗೆ ಹೊರಟಿದ್ದರು. ಬಸ್ಸಿನ ಮಧ್ಯಭಾಗದ ಬಲಬದಿಯಲ್ಲಿ ಮೂರು ಜನರು ಕುಳಿತುಕೊಳ್ಳವ ಸೀಟಿನಲ್ಲಿ ಕಿಟಕಿಯ ಬದಿಯಲ್ಲಿ ಅವರು ಕುಳಿತಿದ್ದು ಬಸ್ ಸಂಜೆ ಸುಮಾರು ೫.೩೦ ಗಂಟೆಗೆ ಮಂಗಳೂರಿನ ಪಡೀಲ್ ಜಂಕ್ಷನ್ ನಿಂದ ಸ್ವಲ್ಪ ಮುಂದಕ್ಕೆ ಬರುವಾಗ ಪರಿಚಯವಿರುವ ಬೆಳ್ತಂಗಡಿ ಗೇರುಕಟ್ಟೆ ಪರಪ್ಪು ನಿವಾಸಿ ಹಾರೀಸ್ ಅಹಮ್ಮದ್ ಪರಪ್ಪು ಎಂಬವರು ಸೀಟಿನ ಬಳಿ ಬಂದು ಏಕಾಏಕಿ ಕೈಯ್ಯಲ್ಲಿ ಹಿಡಿದಿದ್ದ ಪಂಚ್ನಿಂದ ಅಝರುದ್ದೀನ್ ಅವರ ಎಡ ಕೆನ್ನೆಗೆ ಹಾಗೂ ಎದೆಯ ಮಧ್ಯ ಭಾಗಕ್ಕೆ ಗುದ್ದಿ ಆತ ಧರಿಸಿದ ಶೂ ಇದ್ದ ಕಾಲಿನಿಂದ ಎದೆಗೆ ಮತ್ತು ಎಡ ಕೆನ್ನೆಗೆ ತುಳಿದು, ಬ್ಯಾರಿ ಭಾಷೆಯಲ್ಲಿ ಕೆಟ್ಟ ಪದಗಳಿಂದ ಬೈದು ನಿಂದಿಸಿ, ಮುಂದಕ್ಕೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ, ಮುಂದೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟರಲ್ಲಿ ಬೊಬ್ಬೆ ಕೇಳಿ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಹಾಗೂ ನಿರ್ವಾಹಕರು ಬರುತ್ತಿದ್ದಂತೆ ಚಾಲಕ ಬಸ್ಸು ನಿಲ್ಲಿಸಿದಾಗ ಹಾರೀಸ್ ಅಹಮ್ಮದ್ ಪರಪ್ಪುರವರು ಬಸ್ಸಿನಿಂದ ಇಳಿದು ಓಡಿ ಹೋಗಿರುತ್ತಾನೆ. ಘಟನೆ ನಡೆದಾಗ ಅಝರುದ್ದೀನ್ ಧರಿಸಿದ್ದ ಅಂಗಿಯ ಗುಂಡಿಗಳು ಕಿತ್ತುಹೋಗಿ ಅಂಗಿ ಹರಿದಿರುತ್ತದೆ.
ಪಿರ್ಯಾದಿದಾರರಿಗೆ ಹಾಗೂ ಹಾರೀಸ್ ಅಹಮ್ಮದ್ ಪರಪ್ಪು ರವರಿಗೆ ಸುಮಾರು ೬ ವರ್ಷಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ಜಗಳವಾಗಿದ್ದು, ವೈಮನಸ್ಸಿದ್ದು, ಇದೇ ಹಳೆ ವೈಷಮ್ಯವನ್ನಿಟ್ಟುಕೊಂಡು ಕೃತ್ಯ ನಡೆಸಿರುವುದಾಗಿದೆ.
ಪಿರ್ಯಾದಿದಾರರು ಮಗಳನ್ನು ನೋಡಿಕೊಂಡು ನಂತರ ವಾಪಸ್ ಬೆಳ್ತಂಗಡಿಯ ಮನೆಗೆ ಹೋಗಿದ್ದು ರಾತ್ರಿ ಸಮಯ ಹಲ್ಲೆಯ ನೋವು ಜಾಸ್ತಿಯಾದ ಕಾರಣ ಮಂಗಳೂರು ಜನಪ್ರಿಯ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದಾರೆ ಎಂದು ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

