ದೇಶದ ರಾಜಧಾನಿ ದೆಹಲಿ ಬೆಚ್ಚಿ ಬೀಳಿಸುವಂತಹ ಸೈಬರ್ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಭಾರತದ 12ನೇ ಪ್ರಧಾನಿ ದಿವಂಗತ ಐ.ಕೆ. ಗುಜ್ರಾಲ್ ಅವರ ಪುತ್ರ ಹಾಗೂ ಮಾಜಿ ಸಂಸದ ನರೇಶ್ ಗುಜ್ರಾಲ್ (78) ಅವರ ಬಳಿ ದೊಡ್ಡ ಪ್ರಮಾಣದ ಹಣವನ್ನು ವಂಚಿಸಿದ್ದಾರೆ ಎನ್ನಲಾಗಿದೆ


ವಂಚಕರು ವಾಟ್ಸಾಪ್ DP ದುರುಪಯೋಗಪಡಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ಜೂನ್ 12 ರಿಂದ ಜೂನ್ 16ರ ನಡುವೆ ನಡೆದಿರುವ ಈ ವಂಚನೆ, ದೆಹಲಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೈಬರ್ ಅಪರಾಧಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.
ನರೇಶ್ ಗುಜ್ರಾಲ್ ಅವರು ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಟೆಕ್ಸ್ಟೈಲ್ ಹಾಗೂ ಲೆದರ್ ಉಡುಪುಗಳ ತಯಾರಿಕಾ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ವಂಚಕರು ನರೇಶ್ ಗುಜ್ರಾಲ್ ಅವರ ಭಾವಚಿತ್ರವನ್ನು ಹೊಂದಿದ್ದ ನಕಲಿ ವಾಟ್ಸಾಪ್ ಖಾತೆಯನ್ನು ಸೃಷ್ಟಿಸಿ, ಅವರದೇ ಕಂಪನಿಯ ಹಣಕಾಸು ವಿಭಾಗದ ನಂಬಿಕಸ್ಥ ಉದ್ಯೋಗಿಯೊಬ್ಬರಿಗೆ ತಕ್ಷಣವೇ ನಿಗದಿತ ಬ್ಯಾಂಕ್ ಖಾತೆಗೆ ಆರ್ಟೀಜಿಎಸ್ (RTGS) ಮೂಲಕ ತುರ್ತಾಗಿ ಹಣ ವರ್ಗಾಯಿಸುವಂತೆ ಸೂಚಿಸಲಾಗಿದೆ.
ಅದು ತಮ್ಮ ಮಾಲೀಕರೇ ಕಳುಹಿಸಿದ ಸಂದೇಶ ಎಂದು ಕಣ್ಣುಮುಚ್ಚಿ ನಂಬಿದ ಉದ್ಯೋಗಿ, ಜೂನ್ 12 ರಿಂದ ಜೂನ್ 16 ರ ಅವಧಿಯಲ್ಲಿ ನಾಲ್ಕು ಪ್ರತ್ಯೇಕ ವಹಿವಾಟುಗಳ ಮೂಲಕ ಕೋಟ್ಯಂತರ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು. ಈ ನಡುವೆ ಬ್ಯಾಂಕ್ ಅಧಿಕಾರಿಗಳು ಹಣ ಬಿಡುಗಡೆ ಮಾಡುವ ಮುನ್ನ ಕಂಪನಿಯ ಸಿಎಫ್ಒ (CFO) ಅವರಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಮಾಲೀಕರೇ ನೇರ ಆದೇಶ ನೀಡಿದ್ದಾರೆ ಎಂದು ತಪ್ಪು ತಿಳುವಳಿಕೆಗೆ ಒಳಗಾಗಿದ್ದ ಸಿಎಫ್ಒ, ವಹಿವಾಟು ಪೂರ್ಣಗೊಳಿಸಲು ಬ್ಯಾಂಕ್ಗೆ ತಾಕೀತು ಮಾಡಿದ್ದಾರೆ.
ವಂಚನೆ ಗೊತ್ತಾಗಿದ್ದು ಹೇಗೆ?
ಜೂನ್ 16 ರಂದು ಹಣಕಾಸು ತಂಡದ ಉದ್ಯೋಗಿ ಈ ಭಾರಿ ವಹಿವಾಟುಗಳ ಬಗ್ಗೆ ನರೇಶ್ ಗುಜ್ರಾಲ್ ಅವರ ಪುತ್ರಿ ದೀಕ್ಷಾ ಗುಜ್ರಾಲ್ ಗೆ ಈ ವಿಚಾರ ತಿಳಿದು ತಂದೆಗೆ ಮಾಹಿತಿ ನೀಡಿದಾಗ ತಾವು ಅಂತಹ ಯಾವುದೇ ಹಣ ವರ್ಗಾವಣೆಯ ಆದೇಶ ನೀಡಿಲ್ಲ ಎಂದು ನರೇಶ್ ಗುಜ್ರಾಲ್ ಸ್ಪಷ್ಟಪಡಿಸಿದ್ದಾರೆ. ಆಗ ಇಡೀ ಕುಟುಂಬ ಮತ್ತು ಸಿಬ್ಬಂದಿಗೆ ತಾವು ಹೈಟೆಕ್ ಸೈಬರ್ ವಂಚನೆಗೆ ಬಲಿಯಾಗಿರುವುದು ತಿಳಿದು ಅಘಾತಗೊಂಡಿದ್ದಾರೆ.
ವಂಚನೆ ತಿಳಿಯುತ್ತಿದ್ದಂತೆಯೇ ದೀಕ್ಷಾ ಗುಜ್ರಾಲ್ ಅವರು ತಕ್ಷಣ ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್ಲೈನ್ (1930) ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಇ-ಎಫ್ಐಆರ್ ದಾಖಲಿಸಿಕೊಂಡು ಅತ್ಯಂತ ವೇಗವಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಸೈಬರ್ ತಜ್ಞರ ಸಮಯಪ್ರಜ್ಞೆಯಿಂದಾಗಿ ವಂಚನೆಗೊಳಗಾದ ಒಟ್ಟು ಮೊತ್ತದ ಪೈಕಿ ಶೇಕಡಾ 70 ರಷ್ಟು ಹಣವನ್ನು ವಂಚಕರು ಡ್ರಾ ಮಾಡದಂತೆ ಬ್ಯಾಂಕ್ ಖಾತೆಗಳಲ್ಲೇ ಯಶಸ್ವಿಯಾಗಿ ಬ್ಲಾಕ್ (Lien) ಮಾಡಲಾಗಿದೆ.
“ದೆಹಲಿಯ ಸೈಬರ್ ಪೊಲೀಸರು ಅತ್ಯಂತ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ದೂರು ನೀಡಿದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಶೇ. 70 ರಷ್ಟು ಹಣವನ್ನು ಮುಟ್ಟುಗೋಲು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸೈಬರ್ ವಂಚನೆ ನಡೆದ ತಕ್ಷಣವೇ ಸಾರ್ವಜನಿಕರು ವಿಳಂಬ ಮಾಡದೆ ದೂರು ನೀಡಬೇಕು, ಆಗ ಮಾತ್ರ ಹಾನಿಯನ್ನು ನಿಯಂತ್ರಿಸಲು ಸಾಧ್ಯ” ಎಂದು ನರೇಶ್ ಗುಜ್ರಾಲ್ ಕರೆ ನೀಡಿದ್ದಾರೆ.

