ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳು ಮತ್ತು ಪರಮಾಪ್ತ ಎಂದೇ ರಾಜ್ಯ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಅಲ್ಪಸಂಖ್ಯಾತ ನಾಯಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧವೇ ಈಗ ಸಿದ್ದರಾಮಯ್ಯ ಬಹಿರಂಗವಾಗಿ ಸಿಟ್ಟು ಹೊರಹಾಕಿದ್ದು “ಅವನು ನನ್ನ ವಿರುದ್ಧವೇ ದಾವಣಗೆರೆಯಲ್ಲಿ ಕೆಲಸ ಮಾಡಿದ್ದಾನೆ” ಎಂದು ಸಿದ್ದರಾಮಯ್ಯ ಹೇಳಿರುವ ಆ ಒಂದು ಮಾತು ಬಿರುಗಾಳಿ ಎಬ್ಬಿಸಿದೆ.


ಜಮೀರ್ ಬೆಂಬಲಗಿರು ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಜಮೀರ್ ಅಹ್ಮದ್ ಅವರುಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಸಿದ್ದರಾಮಯ್ಯ ಅವನು ನನ್ನ ಆಪ್ತ ಎಂದು ನೀವೆಲ್ಲಾ ಹೇಳುತ್ತೀರಾ. ಆದ್ರೆ, ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ ಎಂದು ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಮೀರ್ ಅಹ್ಮದ್ ವಿರುದ್ದ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದರಿಂದಲೇ ಜಮಿರ್ ಅಹ್ಮದ್ ಖಾನ್ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಜಮೀರ್ ಅಹ್ಮದ್ ಖಾನ್ ಅವರು ವಸತಿ ಸಚಿವರಾಗಿ ಪ್ರಭಾವಿ ಖಾತೆಯನ್ನು ನಿಭಾಯಿಸಿದ್ದರು. ಸಿದ್ದರಾಮಯ್ಯ ಎಲ್ಲಿಗೆ ಹೋದರೂ ಅಲ್ಲಿ ಜಮೀರ್ ನೆರಳಿನಂತೆ ಇರುತ್ತಿದ್ದರು. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ಜಮೀರ್ ಹರಸಾಹಸ ಪಡುತ್ತಿದ್ದಾರೆ. ದಾವಣಗೆರೆಯಲ್ಲಿ ನಡೆದ ಉಪಚುನಾವಣಾ ಸಂದರ್ಭದಲ್ಲಿ ಜಮೀರ್ ಅವರು ಸಿದ್ದರಾಮಯ್ಯ ಅವರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಸಿಟ್ಟು ಸಿದ್ದರಾಮಯ್ಯ ಅವರಲ್ಲಿ ಮನೆಮಾಡಿದೆ. ಈ ಅಸಮಾಧಾನವೇ ಈಗ ಸಚಿವ ಸ್ಥಾನದ ವಿಚಾರದಲ್ಲಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಸಿದ್ದರಾಮಯ್ಯರ ನಡೆಯು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
