Sikar : ಇಲ್ಲಿ ಆಸ್ಪತ್ರೆಗಳಿಗೆ ಬೀಗ ಜಡಿದು ಪಾನಿಪುರಿ, ಟೀ ಮಾರುತ್ತಿದ್ದಾರೆ ವೈದ್ಯರು! ಕಾರಣ ಕೇಳಿದ್ರೆ ಶಾಕ್​ ನೀವೇ ಆಗ್ತೀರಾ!

Sikar :ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾದರೆ ಹಿಂದೂ ಮುಂದು ನೋಡದೆ ಸೀದಾ ವೈದ್ಯರ ಬಳಿ ಹೋಗುತ್ತೇವೆ. ಅವರು ಏನು ಹೇಳಿದರೂ ಕೊಂಚವೂ ಅನುಮಾನಿಸದೆ ಅವುಗಳನ್ನು ಪಾಲಿಸುತ್ತೇವೆ, ಸ್ವೀಕರಿಸುತ್ತೇವೆ. ಅಂತೆಯೇ ವೈದ್ಯರು ರೋಗಿಯ ಜೀವ ಕಾಪಾಡುವಲ್ಲಿ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತಾರೆ. ಆದರೆ ಇಲ್ಲೊಂದೆಡೆ ಮಹಿಳಾ ವೈದ್ಯರೊಬ್ಬರು ಆಸ್ಪತ್ರೆಗೆ ಬೀಗ ಜಡಿದು ಪಾನಿಪುರಿ(Panipuri) ಮಾರಲು ಗಾಡಿಯನ್ನು ರಸ್ತೆಗಿಳಿಸಿದ್ದಾರೆ.

ಹೌದು, ರಾಜಸ್ಥಾನದ(Rajasthan) ಸಿಕರ್(Sikar) ಜಿಲ್ಲೆಯ ಮಹಿಳಾ ವೈದ್ಯರೊಬ್ಬರು ಆಸ್ಪತ್ರೆಗೆ ಬೀಗ ಜಡಿದು ಪಾನಿಪುರಿ ಗಾಡಿಯನ್ನು ರಸ್ತೆಗಿಳಿಸಿದ್ದಾರೆ. ಅಲ್ಲದೆ ವೈದ್ಯರ ಜೊತೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಪಾನಿಪುರಿ ಗಾಡಿಯ ಪಕ್ಕದಲ್ಲಿಯೇ ಟೀ ಅಂಗಡಿ ಹಾಕಿಕೊಂಡು ಟೀ ಮಾರುತ್ತಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಭಾರೀ ವಿಚಿತ್ರ ಎನಿಸಿರುವ ವೈದ್ಯರ ಈ ನಡೆ ಬದುಕಲು ಮತ್ತು ಹಣ ಸಂಪಾದಿಸಲು ಮಾಡುತ್ತಿರುವ ಕೆಲಸವಲ್ಲ. ರಾಜಸ್ಥಾನ ಸರ್ಕಾರ ನೀಡಿದ ಶಾಕ್ ನಿಂದಾಗಿ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದಿದ್ದು, ಆಸ್ಪತ್ರೆ ವೈದ್ಯರು ಸಿಬ್ಬಂದಿಯೊಂದಿಗೆ ರಸ್ತೆಗಿಳಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತೆಯೇ ಖಾಸಗಿ ಆಸ್ಪತ್ರೆಗಳ ಅನೇಕ ವೈದ್ಯರು ಮತ್ತು ಸಿಬ್ಬಂದಿ ರಸ್ತೆಗಳಲ್ಲಿ ಪಾನಿ ಪುರಿ ಮತ್ತು ಚಹಾವನ್ನು ಮಾರುತ್ತಿದ್ದಾರೆ. .

ಅಂದಹಾಗೆ ರಾಜಸ್ಥಾನದ ಸಿಎಂ ಅಶೋಕ್‌ ಗೆಹ್ಲೋಟ್(Ashok Gehlot) ಸರ್ಕಾರ ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳ ಕುರಿತು ಹೊಸ ಮಸೂದೆಯನ್ನು ತಂದಿದೆ. ಈ ಮಸೂದೆಯ ಪ್ರಕಾರ, ಪ್ರತಿಯೊಬ್ಬ ನಾಗರಿಕರು ತುರ್ತು ಸಂದರ್ಭದಲ್ಲಿ ಯಾವುದೇ ಶುಲ್ಕವನ್ನು ಪಾವತಿಸದೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದಿದೆ. ಈ ಕಾಯ್ದೆ ತಮ್ಮ ಬದುಕಿಗೆ, ಸಂಪಾದನೆಗೆ ದೊಡ್ಡ ಹೊಡೆತ ಕೊಡಬಹುದೆಂದು ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ಹೊಸದಾಗಿ ಈ ಪ್ರತಿಭಟನೆ ನಡೆಸುತ್ತಿದ್ದಾರೆ.

Leave A Reply

Your email address will not be published.