ಆಸ್ತಿ ವಿಚಾರ ವಿವಾದ : ಒಂದೇ ಕುಟುಂಬದ ನಾಲ್ವರ ಹತ್ಯೆ !

Uttara Kannada : ಉತ್ತರಕನ್ನಡ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಲಾದ ಘಟನೆ ಉತ್ತರ ಕನ್ನಡ ( Uttara Kannada) ದಲ್ಲಿ ನಡೆದಿದೆ.

ಜಿಲ್ಲೆಯ ಭಟ್ಕಳದ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ವಿನಯ ಶ್ರೀಧರ ಭಟ್ ಎಂದು ಗುರುತಿಸಲಾಗಿದೆ.

ಕೊಲೆಯಾದವರನ್ನು ಹಾಡುವಳ್ಳಿ ಒಣಿಬಾಗಿಲು ನಿವಾಸಿ ಶಂಭು ಭಟ್ (70) ಮತ್ತು ಪತ್ನಿ ಮಾದೇವಿ ಭಟ್(60), ಅವರ ಮಗ ರಾಘು ಯಾನೆ ರಾಜು ಭಟ್ (40) ಮತ್ತು ಸೊಸೆ ಕುಸುಮಾ ಭಟ್(35) ಎಂದು ಗುರುತಿಸಲಾಗಿದೆ. ಕುಟುಂಬದ ಮುಖ್ಯಸ್ಥ ಶ್ರೀಧರ್ ಭಟ್ ಎಂಬವರು ಮೃತಪಟ್ಟ ಬಳಿಕ ಆಸ್ತಿಯ ವಿಚಾರಕ್ಕೆ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.

ಪ್ರಕರಣ ನಡೆಯುತ್ತಿದ್ದ ವೇಳೆ ನಾಲ್ಕರ ಹರೆಯದ ಮಗು ಮಲಗಿದ್ದು, ಹತ್ತರ ಹರೆಯದ ಮಗು ಪಕ್ಕದ ಮನೆಗೆ ತೆರಳಿತ್ತು. ಆದ್ದರಿಂದ ಈ ಮಕ್ಕಳಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಏಳು ತಿಂಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಎಂಬವರು ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದರು. ಶ್ರೀಧರ ಭಟ್ ಮರಣದ ನಂತರ ಅವರ ಪತ್ನಿ ವಿದ್ಯಾ ಭಟ್ ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಮಾತುಕತೆ ಬಳಿಕ ಶಂಭು ಭಟ್ ಅವರು ಸೊಸೆ ವಿದ್ಯಾಗೆ ಆಸ್ತಿಯಲ್ಲಿ ಪಾಲು ನೀಡಿದ್ದರು ಎನ್ನಲಾಗಿದೆ. ಈ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ವಿದ್ಯಾ ಅವರ ಸಹೋದರ ವಿನಯ ಶ್ರೀಧರ ಭಟ್ ಈ ಕೃತ್ಯ ಎಸಗಿದ್ದಾನೆ ಎಂದು ಭಟ್ಕಳ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.