ಗುಂಡ್ಯ : ಕಾರಿನ ಮೇಲೆ ಮರ ಬಿದ್ದು ಚಾಲಕ ಮೃತಪಟ್ಟ ಜಾಗದಲ್ಲೇ ಬೈಕ್‌ನ ಮೇಲೆ ಬಿದ್ದ ಮರ,ಸವಾರನಿಗೆ ಗಾಯ

ನೆಲ್ಯಾಡಿ, ಜ. 17. ಚಲಿಸುತ್ತಿದ್ದ ಬೈಕ್ ನ ಮೇಲೆ ಮರ ಬಿದ್ದ ಪರಿಣಾಮ ಸವಾರ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಸೋಮವಾರದಂದು ಬೆಳಗ್ಗೆ ನಡೆದಿದೆ.

ಗಾಯಗೊಂಡ ಸವಾರನನ್ನು ಕಾಸರಗೋಡು ನಿವಾಸಿ ಪವನ್ ಎಂದು ಗುರುತಿಸಲಾಗಿದೆ. ಹಾಸನದ ಖಾಸಗಿ ಕಂಪನಿಯೊಂದರಲ್ಲಿ ಮೆನೇಜರ್ ಆಗಿದ್ದ ಇವರು, ಇಂದು ಬೆಳಗ್ಗೆ ಕಾಸರಗೋಡಿನಿಂದ ಹಾಸನಕ್ಕೆ ತೆರಳುತ್ತಿದ್ದ ವೇಳೆ ಅಡ್ಡಹೊಳೆ ತಲುಪುತ್ತಿದ್ದಂತೆಯೇ ದೂಪದ ಮರವೊಂದು ಬೈಕಿನ ಹಿಂಬದಿಗೆ ಬಿದ್ದಿದೆ.

ಪರಿಣಾಮ ಬೈಕ್ ಪಲ್ಟಿಯಾಗಿ ಸುಮಾರು ದೂರಕ್ಕೆ ಜಾರಿ ಬಿದ್ದು ಸವಾರ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುವನ್ನು ಸ್ಥಳೀಯರ ನೆರವಿನಿಂದ ಶಿರಾಡಿ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲ ದಿನಗಳ ಹಿಂದೆ ಇದೇ ರಸ್ತೆಯಲ್ಲಿ ಮರವೊಂದು ಕಾರಿನ‌ಮೇಲೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿತ್ತು.

Leave A Reply

Your email address will not be published.