ಹಳೆಯಂಗಡಿ | ಮಠಕ್ಕೆ ನುಗ್ಗಿ ಆರು ಲಕ್ಷಕ್ಕೂ ಅಧಿಕ ದೇವರ ಆಭರಣ ಕಳವುಗೈದ ಕಳ್ಳರು

ದಕ್ಷಿಣ ಕನ್ನಡದ ಹಳೆಯಂಗಡಿ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಡಬ್ಬಿಗಳನ್ನು ಕಳ್ಳತನ ಮಾಡಿದ ಘಟನೆ ಮಂಗಳವಾರ ಬೆಳಿಗ್ಗೆ ತಿಳಿದುಬಂದಿದೆ.

ಮಠದ ಹಿಂದಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ವಿನಾಯಕ ದೇವರ ಮತ್ತು ಶ್ರೀ ದೇವಿಯ ಬೆಳ್ಳಿಯ ಪ್ರಭಾವಳಿಗಳು, ಎರಡು ದೇವರ ಬೆಳ್ಳಿಯ ಮುಖ ಕವಚಗಳು ಹಾಗೂ ಇನ್ನಿತರ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸೇರಿದಂತೆ ಎರಡು ಕಾಣಿಕೆ ಡಬ್ಬಿಗಳನ್ನು ದೋಚಿದ್ದಾರೆ. ಸುಮಾರು 7 ಕೆಜಿ ಬೆಳ್ಳಿ ಹಾಗೂ ಒಂಬತ್ತು ಗ್ರಾಂ ಚಿನ್ನದ ದೇವರ ಆಭರಣಗಳು ಕಳುವಾಗಿದೆ ಎಂದು ಅಂದಾಜಿಸಲಾಗಿದೆ .

ನಿನ್ನೆ ರಾತ್ರಿ ಸುರಿಯುತ್ತಿದ್ದ ಭಾರೀ ಮಳೆಯ ವೇಳೆ ಈ ಘಟನೆ ನಡೆದಿದ್ದು, ಸ್ಥಳೀಯರ ಗಮನಕ್ಕೂ ಬಂದಿಲ್ಲ ಎನ್ನಲಾಗಿದೆ. ಇಂದು ಬೆಳಿಗ್ಗೆ ಅರ್ಚಕರು ದೇವರ ಪೂಜೆಗೆಂದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

Leave A Reply

Your email address will not be published.