Karwar: ಗಂಡನ ಜತೆ ಕ್ಷುಲ್ಲಕ ಜಗಳ: ಕೋಪದಲ್ಲಿ ಮೊಸಳೆ ಇದ್ದ ನಾಲೆಗೆ ಮಗು ಎಸೆದ ತಾಯಿ !

Karwar: ಗಂಡ ಹೆಂಡಿರ ಜಗಳದಲ್ಲಿ ಮಗು ಮೊಸಳೆ ಪಾಲಾಗಿದೆ. ಗಂಡನ ಮೇಲಿನ ಕೋಪಕ್ಕೆ ಆರು ವರ್ಷದ ಮಗುವನ್ನು ಮೊಸಳೆ ತುಂಬಿದ್ದ ನಾಲೆಗೆ ತಾಯಿಯೇ ಎಸೆದ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ವರದಿಯಾಗಿದೆ.

ರವಿಕುಮಾರ ಹಾಗೂ ಸಾವಿತ್ರಿ ದಂಪತಿಗಳ 6 ವರ್ಷದ ಮಗು ವಿನೋದ್ ಮೊಸಳೆಗೆ ಆಹಾರವಾಗಿದ್ದಾನೆ. ಗಂಡ-ಹೆಂಡತಿ ಜಗಳ‌ ಮಾಡುತ್ತಿರುವಾಗ ಕೋಪದ ಭರದಲ್ಲಿ ತಾಯಿ ಸಾವಿತ್ರಿ ಮಗುವನ್ನು ಮನೆಯ ಹಿಂದಿರುವ ನೀರಿನ ನಾಲೆಗೆ ಎಸೆದಿದ್ದಾಳೆ.

ನಾಲೆಗೆ ಮಗುವನ್ನು ಎಸೆದ ವಿಷಯ ಅಕ್ಕಪಕ್ಕದ ಜನರಿಗೆ ತಿಳಿಯುತ್ತಿದ್ದಂತೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣವೇ ಕಾರ್ಯಾಚರಣೆಗೆ ಇಳಿದ ದಾಂಡೇಲಿ ಗ್ರಾಮಿಣ ಠಾಣೆಯ ಪಿ.ಎಸ್ ಐ ಕೃಷ್ಣೇಗೌಡ ಅರಿಕೆರಿ,ಪಿ ಎಸ್‌ ಐ ಜಗದೀಶ ಹಾಗೂ ಸಿಬ್ಬಂದಿಗಳ ತಂಡ ಮತ್ತು ಜೋಯಿಡಾದ ಅಗ್ನಿಶಾಮಕ ದಳದವರು ಹಾಗೂ ಸ್ಥಳಿಯರು ಮಗುವಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ತಕ್ಷಣಕ್ಕೆ ಮಗು ಪತ್ತೆಯಾಗಿಲ್ಲ.

ಆದರೆ ಇಂದು ಭಾನುವಾರ ಮುಂಜಾನೆ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ನಾಲೆಗೆ ಎಸೆಯಲಾಗಿದ್ದ ಮಗುವನ್ನು ಮೊಸಳೆಯೊಂದು ಬಾಯಿಯಲ್ಲಿ ಕಚ್ಚಿ ಹಿಡಿದು ನದಿಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ಭೀಭತ್ಸ ಘಟನೆ ಕಂಡು ಅಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ. ಕ್ಷಣದ ದುಡುಕಿಗೆ ಒಳಗಾಗಿ ಸ್ವಂತ ಮಗುವನ್ನು ಮೊಸಳೆಗೆ ಅರ್ಪಿಸಿದ ಹೆತ್ತ ತಾಯಿ ಇದೀಗ ಪಶ್ಚಾತಾಪದಿಂದ ಮರುಗುತ್ತಿದ್ದಾಳೆ.

ಸ್ಥಳೀಯ ಮುಳುಗು ತಜ್ಞರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು‌ ಹಾಗೂ ಪೋಲಿಸ್‌ ಸಿಬ್ಬಂದಿಗಳು ಮೊಸಳೆ ಬಾಯಿಯಿಂದ ಮಗುವಿನ ಮೃತದೇಹವನ್ನು ಬಿಡಿಸಿ ಹೊರ ತೆಗೆದು ತಂದಿದ್ದಾರೆ. ಇದೀಗ ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಡಿ.ವೈ.ಎಸ್‌ಪಿ ಶಿವಾನಂದ ನೇತೃತ್ವದ ಪೊಲೀಸ್ ತಂಡ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Crime: ಹೋಟೆಲ್ ಮಾಲೀಕನ ಜೋಕ್‌’ನ್ನು ನಿಜ ಎಂದು ನಂಬಿದ ನೌಕರ ; ಬೈಕ್ ಕದ್ದು ಜೈಲು ಸೇರಿದ ಯುವಕ !

Leave A Reply

Your email address will not be published.