ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು | 2 ವರ್ಷದ ಹಿಂದಿನ ಅವಘಡ ಮಾಸುವ ಮೊದಲೇ ಇನ್ನೊಂದು ದುರ್ಘಟನೆ

ಕಾಸರಗೋಡು : ವಿದ್ಯುತ್ ಶಾಕ್ ತಗುಲಿ ಮಹಿಳೆ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಏತಡ್ಕದ ಪುತ್ರಕಳ ರಸ್ತೆಯ ಅಳಕ್ಕೆ ಎಂಬಲ್ಲಿ ನಡೆದಿದೆ.

ಏತಡ್ಕ ಅಳಕ್ಕೆ ನಿವಾಸಿ ರಾಮಚಂದ್ರ ಮಣಿಯಾಣಿ ಅವರ ಪತ್ನಿ ಸುಜಾತಾ (50) ಮೃತ ದುರ್ದೈವಿ. ಅವರು
ಏತಡ್ಕ ಸಮೀಪ ಉದ್ಯೋಗ ಖಾತರಿ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂತಿರುಗುವ ದಾರಿ ಮಧ್ಯೆ ಈ ಅನಾಹುತ ಸಂಭವಿಸಿದೆ.

ಏತಡ್ಕ ಸುತ್ತಮುತ್ತ ರಸ್ತೆ ಬದಿ ಕಾಡು ಬಳ್ಳಿಗಳು ಎಚ್ ಟಿ ತಂತಿಯನ್ನು ಆವರಿಸಿದ್ದು, ಹಸಿರು ಪೊದೆಯನ್ನು ಅರಿವಿಲ್ಲದೇ ಸುಜಾತ ಅವರು ಸ್ಪರ್ಶಿಸಿದ್ದಾರೆ. ಇದೇ ಶಾಕ್ ತಗಲಲು ಕಾರಣ ಎನ್ನಲಾಗಿದೆ.

ಬದಿಯಡ್ಕ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆ ಪತಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇನ್ನು 2018ರ ಅ.1ರಂದು ಏತಡ್ಕ ಶಾಲೆಯಿಂದ ಮನೆಗೆ ಹಿಂತಿರುಗುವ ದಾರಿ ಮಧ್ಯೆ ಮನೆ ಸಮೀಪ ನೆಲಕ್ಕೆ ಬಿದ್ದ ತಂತಿ ಸ್ಪರ್ಶಿಸಿ ಒಂದನೇ ತರಗತಿ ವಿದ್ಯಾರ್ಥಿನಿ ಅರ್ಪಿತಾ ಮೃತಪಟ್ಟಿದ್ದಳು. ಈ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿದೆ. ಅಂದು ಮಗುವಿನ ತಾಯಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು.

ಒಂದೇ ಪರಿಸರದಲ್ಲಿ ಎರಡನೇ ಬಾರಿ ವಿದ್ಯುತ್ ಆಘಾತಕ್ಕೆ ಇಬ್ಬರು ಬಲಿಯಾಗಿರುವುದರಿಂದ ಇನ್ನಾದರೂ ವಿದ್ಯುತ್ ನಿರ್ವಾಹಕರು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave A Reply

Your email address will not be published.