ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮೇ 3ರಂದು ದೇಶಾದ್ಯಂತ ನಡೆದಿದ್ದ ನೀಟ್ ಯುಜಿ ಪರೀಕ್ಷೆಯನ್ನು ಕೇಂದ್ರ ಸರ್ಕಾರವು ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಎಷ್ಟೋ ಲಕ್ಷಾಂತರ ವಿದ್ಯಾರ್ಥಿಗಳ ಕನಸು ಭಗ್ನ ವಾದಂತಾಗಿದೆ. ಇದೀಗ ಕೇಂದ್ರ ಸರ್ಕಾರದ ಪರೀಕ್ಷೆ ರದ್ದತಿ ನಿರ್ಧಾರಕ್ಕೆ ಬೇಸರಗೊಂಡು ವಿದ್ಯಾರ್ಥಿ ಒಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.


ಮನನೊಂದು ವಿಧ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಸಿಕಾರ್ನಲ್ಲಿ ಸಂಭವಿಸಿದೆಮೃತರನ್ನು ಜುನ್ಜುನು ಜಿಲ್ಲೆಯ ಗುಧಾ ಗೌಡ್ಜಿಯ ನಿವಾಸಿ ಪ್ರದೀಪ್ ಮಹಿಚ್ (20) ಎಂದು ಗುರುತಿಸಲಾಗಿದೆ. ನೀಟ್ ಪರೀಕ್ಷೆಯಲ್ಲಿ 650ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸಿದ್ದ ಪ್ರದೀಪ್, ಪರೀಕ್ಷೆ ರದ್ದಾದ ಸುದ್ದಿ ಕೇಳಿ ತೀವ್ರ ಖಿನ್ನತೆಗೆ ಒಳಗಾಗಿ ಸಿಕಾರ್ನ ತನ್ನ ಬಾಡಿಗೆ ನಿವಾಸದಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರದೀಪ್ ಅವರ ಮೂರನೇ ಪ್ರಯತ್ನ ಇದಾಗಿತ್ತು. ಆತನ ತಂದೆ ರಾಜೇಶ್ ಕುಮಾರ್ ಮೇಘವಾಲ್ ಒಬ್ಬ ಸಾಮಾನ್ಯ ಕಾರ್ಮಿಕರಾಗಿದ್ದು, ಮಗನನ್ನು ವೈದ್ಯನನ್ನಾಗಿ ಮಾಡಬೇಕೆಂಬ ಒಂದೇ ಒಂದು ಕನಸಿನಿಂದ ಕೋಚಿಂಗ್ ಫೀಸ್ ಕಟ್ಟಲು ತೀವ್ರವಾಗಿ ಸಾಲ ಮಾಡಿದ್ದರು. ಅಷ್ಟೇ ಅಲ್ಲದೆ ತಮಗಿದ್ದ ಜಮೀನನ್ನು ಕೂಡ ಮಾರಾಟ ಮಾಡಿ ಮಗನ ಓದಿಗೆ ಹಣ ಹೊಂದಿಸಿದ್ದರು. ಮಗ ಮೇ 3 ರಂದು ನಡೆದ ನೀಟ್ ಪರೀಕ್ಷೆಯನ್ನು ಅತ್ಯುತ್ತಮವಾಗಿ ಬರೆದಿದ್ದರಿಂದ, ಈ ವರ್ಷ ಖಂಡಿತವಾಗಿಯೂ ಸರ್ಕಾರಿ ವೈದ್ಯಕೀಯ ಸೀಟು ಸಿಗುತ್ತದೆ ಎಂಬ ಅಚಲ ವಿಶ್ವಾಸದಲ್ಲಿ ಇಡೀ ಕುಟುಂಬ ಇತ್ತು. ಆದರೆ ಇದೀಗ ಮಗನನ್ನು ಕಳೆದುಕೊಂಡು ಕುಟುಂಬ ಕಣ್ಣೀರಲಿ ಕೈ ತೊಳೆಯಯುತ್ತಿದೆ.
ಪ್ರದೀಪ್ ಸಿಕಾರ್ನ ಖಾಸಗಿ ಕೋಚಿಂಗ್ ಸಂಸ್ಥೆಯೊಂದರಲ್ಲಿ ತರಬೇತಿ ಪಡೆಯುತ್ತಿದ್ದನು ಹಾಗೂ ಇಬ್ಬರು ಸಹೋದರಿಯರೊಂದಿಗೆ ವಾಸವಿದ್ದನು. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಹೋದರಿಯ ಸ್ಕಾರ್ಫ್ ಬಳಸಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಸಿಕಾರ್ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಸಿಕಾರ್ನ ಎಸ್ಕೆ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲವಾದರೂ, ಪ್ರಾಥಮಿಕ ತನಿಖೆಯಲ್ಲಿ ಇದು ಪರೀಕ್ಷೆ ರದ್ದತಿಯಿಂದ ಉಂಟಾದ ತೀವ್ರ ಖಿನ್ನತೆಯಿಂದಲೇ ಸಂಭವಿಸಿದ ಆತ್ಮಹತ್ಯೆ ಎಂದು ಪೊಲೀಸರು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

