Home » ಗಡಾಯಿಕಲ್ಲಿನ ತುತ್ತತುದಿಯಲ್ಲಿ ಕಾಲು ನೋವಿನಿಂದ ಸಿಲುಕಿದ ಪ್ರವಾಸಿಗ- 3 ಗಂಟೆಗಳ ಕಾರ್ಯಾಚರಣೆ ಮೂಲಕ ರಕ್ಷಣೆ

ಗಡಾಯಿಕಲ್ಲಿನ ತುತ್ತತುದಿಯಲ್ಲಿ ಕಾಲು ನೋವಿನಿಂದ ಸಿಲುಕಿದ ಪ್ರವಾಸಿಗ- 3 ಗಂಟೆಗಳ ಕಾರ್ಯಾಚರಣೆ ಮೂಲಕ ರಕ್ಷಣೆ

0 comments

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಗಡಾಯಿಕಲ್ಲಿನ ತುತ್ತ ತುದಿಯಲ್ಲಿ ಚಾರಣಿಗನೊಬ್ಬ ಮೊಣಕಾಲು ನೋವಿನಿಂದ ಕೆಳಗಿಳಿಯಲಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದರು. ಇದೀಗ ಜೂನ್ 4 ಗುರುವಾರ ಅವರನ್ನು ಬರೋಬ್ಬರಿ ಮೂರು ಗಂಟೆಗಳ ಸಾಹಸಮಯವಾದ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ 

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಜನತಾ ಕಾಲೊನಿ ಪರಿಸರದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿ ಒಟ್ಟು ನಾಲ್ಕು ಜನರ ತಂಡವು ಟಿಕೆಟ್ ಪಡೆದು ಗುರುವಾರ ಬೆಳಿಗ್ಗೆ ಗಡಾಯಿಕಲ್ಲು ಚಾರಣ ಕೈಗೊಂಡು, ಕೋಟೆಯ ತುತ್ತತುದಿಯನ್ನು ತಲುಪಿದ್ದರು. ಆದರೆ, ಅಲ್ಲಿಗೆ ತಲುಪಿದ ಬಳಿಕ ತಂಡದಲ್ಲಿದ್ದ ಮಹಮ್ಮದ್ ಶರೀಫ್ (30) ಎಂಬುವರಿಗೆ ಮೊಣಕಾಲಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಅವರಿಗೆ ಕನಿಷ್ಠ ಒಂದು ಹೆಜ್ಜೆಯನ್ನೂ ಇಡಲು ಸಾಧ್ಯವಾಗದೆ, ಕೋಟೆಯ ಮೇಲೆಯೇ ಸಿಲುಕಿಕೊಂಡಿದ್ದಾರೆ.

ಶರೀಫ್ ಜೊತೆ ಬಂದಿದ್ದ ಇತರ ಚಾರಣಿಗರು ತಕ್ಷಣವೇ ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಪೊಲೀಸರು ತಕ್ಷಣವೇ ಬೆಳ್ತಂಗಡಿ ಅಗ್ನಿಶಾಮಕ ಠಾಣೆ, ಅರಣ್ಯ ಇಲಾಖೆ ಹಾಗೂ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಸಂದೇಶ ರವಾನಿಸಿದಾಗ ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಯುವಕರು ತಲೆಹೊರೆ ಸ್ಟ್ರೆಚರ್ ಹಾಗೂ ಅಗತ್ಯ ರಕ್ಷಣಾ ಸಾಮಗ್ರಿಗಳೊಂದಿಗೆ ಗಡಾಯಿಕಲ್ಲನ್ನು ವೇಗವಾಗಿ ಹತ್ತಿ ಮೇಲಕ್ಕೆ ತಲುಪಿದ್ದಾರೆ.

ಅಲ್ಲಿ ಮಹಮ್ಮದ್ ಶರೀಫ್ ಅವರಿಗೆ ಧೈರ್ಯ ತುಂಬಿ, ಸ್ಟ್ರೆಚರ್ ಮೇಲೆ ಮಲಗಿಸಿ ಅತ್ಯಂತ ಜಾಗರೂಕತೆಯಿಂದ ಕಡಿದಾದ ಮತ್ತು ಜಾರುವ ಮೆಟ್ಟಿಲುಗಳ ಮೇಲೆ ಹೊತ್ತುಕೊಂಡು ಕೆಳಗೆ ಇಳಿಸುವ ಸಾಹಸ ಆರಂಭಿಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ನಡೆದ ಈ ಸವಾಲಿನ ಕಾರ್ಯಾಚರಣೆಯ ನಂತರ ಶರೀಫ್ ಅವರನ್ನು ಸುರಕ್ಷಿತವಾಗಿ ಬೆಟ್ಟದ ತಳಭಾಗಕ್ಕೆ ತರಲಾಯಿತು. ಬಳಿಕ ಅಂಬುಲೆನ್ಸ್ ಮೂಲಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಪಡೆಗಳ ಈ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

banner

You may also like