ಬೆಂಗಳೂರು: ತನ್ನ ಸ್ನೇಹಿತೆ ಮನಗೆ ಬಂದಿದ್ದ ಗುಜರಿ ವ್ಯಾಪರಿಯೋರ್ವನನ್ನು ಮಹಿಳೆಯ ಪತಿ ಹಾಗೂ ಸಂಬಂಧಿಕರು ಸೇರಿ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ರಾಮನಗರದ ಬೀಡಿ ಕಾಲೋನಿಯ ನಿವಾಸಿ ಮೊಹಮ್ಮದ್ ಕಾಸಿಫ್ (27) ಕೊಲೆಯಾದ ದುರ್ದೈವಿ. ಹತ್ಯೆ ಕುರಿತು ಸ್ನೇಹಿತೆಯ ಪತಿ ಅಕ್ಬರ್ ಹಾಗೂ ಆತನ ಸಂಬಂಧಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ರಾಮನಗರದಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದ ಮೊಹಮ್ಮದ್ ತನ್ನ ಕುಟುಂಬದ ಜೊತೆ ಅಲ್ಲೇ ನೆಲೆಸಿದ್ದ. ಪ್ರೌಢಶಾಲೆಯಲ್ಲಿ ಓದುವಾಗ ಮೊಹಮ್ಮದ್ಗೆ ಅಕ್ಬರ್ ಪತ್ನಿ ಪರಿಚಯವಿತ್ತು. ಈತ 10ನೇ ತರಗತಿಯಲ್ಲಿ ಹಾಗೂ ಆಕೆ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹೀಗಿದ್ದರೂ ಇಬ್ಬರ ಮಧ್ಯೆ ಗೆಳೆತನ ಇತ್ತು. ಮದುವೆ ನಂತರವೂ ಈ ಸ್ನೇಹ ಮುಂದುವರೆದಿತ್ತು. ಆದರೆ ಈ ಸ್ನೇಹಕ್ಕೆ ಅಕ್ಬರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದ.
ತನ್ನ ಸ್ನೇಹಿತೆಯನ್ನು ಕಾಣಲು ಈತ ಬಾಪೂಜಿನಗರದಲ್ಲಿದ್ದ ಆಕೆಯ ಮನೆಗೆ ಸೋಮವಾರ ಸಂಜೆ ಮೊಹಮ್ಮದ್ ಬಂದಿದ್ದ. ಅದೇ ಸಮಯಕ್ಕೆ ಅಕ್ಬರ್ ಕೂಡಾ ಬಂದಿದ್ದು, ಮೊಹಮ್ಮದ್ನನ್ನು ಕಂಡು ಸಿಟ್ಟು ಬಂದಿದೆ. ನೀನ್ಯಾಕೆ ಮನೆಗೆ ಬಂದೆ ಎಂದು ಪ್ರಶ್ನೆ ಮಾಡಿ ಏಕಾಏಕಿ ಹಲ್ಲೆ ಮಾಡಿದ್ದಾನೆ. ಕೂಡಲೇ ಆತನ ಸಂಬಂಧಿಕರು ಬಂದು ಗಲಾಟೆಯಲ್ಲಿ ಕೈ ಜೋಡಿಸಿದ್ದಾರೆ. ಮನಬಂದಂತೆ ಹೊಡೆದು ಮೊಹಮ್ಮದ್ನನ್ನು ಆರೋಪಿಗಳು ಕಳುಹಿಸಿದ್ದಾರೆ.
ರಾಮನಗರದ ಮನೆಗೆ ಮರಳಿದ ಮೊಹಮ್ಮದ್ಗೆ ರಾತ್ರಿ ಉಸಿರಾಟ ಸಮಸ್ಯೆ ಉಂಟಾಗಿದೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕುಟುಂಬದವರು ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಿಸದೆ ಗುಜರಿ ವ್ಯಾಪಾರಿ ಕೊನೆಯುಸಿರೆಳೆದಿದ್ದಾರೆ. ಔೈದ್ಯರು, ಮಾರಣಾಂತಿಕ ಹಲ್ಲೆಯಿಂದ ಸಾವು ಸಂಭವಿಸಿದೆ ಎಂದಿದ್ದರು.
ಬ್ಯಾಟರಾಯನಪುರ ಠಾಣೆಗೆ ಬಂದ ಮೃತನ ಕುಟುಂಬದವರು ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

