ಕರ್ನಾಟಕದ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಗರಿಗೆದರಿದ್ದು, ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಲು ಸಾಧ್ಯವಿಲ್ಲ ಎನ್ನಲಾಗಿದೆ. ಇದಕ್ಕೆ ಹಲವು ಕಾರಣಗಳಿದೆ. ಮೊದಲ ಕಾರಣವೇ ರಾಜ್ಯಪಾಲರ ಮುಂಬೈ ಪ್ರವಾಸ. ಸಿಎಂ ಬದಲಾವಣೆ ಪ್ರಕ್ರಿಯೆಯಲ್ಲಿ ರಾಜ್ಯಪಾಲರ ಪಾತ್ರ ಬಹಳ ಮುಖ್ಯ. ಸಿಎಂ ರಾಜೀನಾಮೆ ಸಲ್ಲಿಸಿದ ನಂತರ ಅದನ್ನು ಸ್ವೀಕರಿಸುವುದು, ಹೊಸ ಸಿಎಂಗೆ ಆಹ್ವಾನ ನೀಡುವುದು, ಪ್ರಮಾಣವಚನ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡುವುದು ಇವೆಲ್ಲ ರಾಜ್ಯಪಾಲರ ಮೂಲಕವೇ ನಡೆಯಬೇಕು.


ಈಗ ರಾಜ್ಯಪಾಲರು ಮುಂಬೈ ಪ್ರವಾಸದಲ್ಲಿರುವುದರಿಂದ ತಕ್ಷಣ ಯಾವುದೇ ಸಂವಿಧಾನಾತ್ಮಕ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಂಪೂರ್ಣ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸಹಜವಾಗಿ ತಡವಾಗುತ್ತಿದೆ.
ಆದರೂ ರಾಜ್ಯಪಾಲರ ಗೈರು ಹಿನ್ನೆಲೆಯಲ್ಲಿ, ರಾಜ್ಯಪಾಲರ ಕಾರ್ಯದರ್ಶಿಗೆ ರಾಜೀನಾಮೆ ನೀಡಬಹುದಾ ಎನ್ನುವ ಚರ್ಚೆ ನಡೆದಿದೆ. ಇದಕ್ಕೆ ಒಪ್ಪಿದ್ದೇ ಆಗಿದ್ದರೆ, ಇಂದು ಮಧ್ಯಾಹ್ನ ಮೂರು ಗಂಟೆಗೆ ಲೋಕಭವನಕ್ಕೆ ತೆರಳಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ.
ಇನ್ನೊಂದು ವಿಷಯ ಎಂದರೆ ಸಿಎಂ ಸಿದ್ದರಾಮಯ್ಯ ಇನ್ನೂ ಅಧಿಕೃತ ರಾಜೀನಾಮೆ ನೀಡಿಲ್ಲ. ಹೈಕಮಾಂಡ್ನಿಂದ ಸೂಚನೆ ಬಂದಿದೆಯೇ ಹೊರತು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಇನ್ನೂ ನೀಡಿಲ್ಲ. ರಾಜೀನಾಮೆ ನೀಡಲು ದಿನಾಂಕ, ಸಮಯ, ಅದಕ್ಕೂ ಮೊದಲು ಕ್ಯಾಬಿನೆಟ್ ಸಭೆ, ಪಕ್ಷದ ಶಾಸಕರ ಸಭೆ ಇವೆಲ್ಲವನ್ನೂ ಒಟ್ಟಿಗೆ ಹೊಂದಿಸಬೇಕಿದೆ.

