ಉಜಿರೆ,ದಿ.ಜೂ. 18 : ಜ್ಞಾನದ ಪರಿವಿಗೆ ಯಾವುದೇ ಬೇಲಿ ಇಲ್ಲ. ವಿದ್ಯಾರ್ಥಿಗಳು ತಮ್ಮ ಪಠ್ಯದ ವಿಷಯಗಳ ಜೊತೆಗೆ ಪ್ರಾಪಂಚಿಕ ಮತ್ತು ಪ್ರಸ್ತುತ ವಿದ್ಯಮಾನಗಳನ್ನು ಅರಿತುಕೊಳ್ಳಬೇಕು. ಹೊಸ ವಿಷಯಗಳ ಅಧ್ಯಯನದ ಕುತೂಹಲ ನಮ್ಮೊಳಗೆ ಮೂಡಬೇಕು. ಅಂತರ್ಜಾಲಗಳು ಸಾಮಾಜಿಕ ಜಾಲತಾಣಗಳ ಬಳಕೆಗೆ ಮಾತ್ರವಲ್ಲದೆ ಅನೇಕ ವಿಷಯಗಳ ಕುರಿತು ತಿಳಿದುಕೊಳ್ಳಲು ಮೂಕ್, ಸ್ವಯಂ, ಸ್ಪ್ರಿಂಗ್ ಬೋರ್ಡ್ ನಂತಹ ಆನ್ಲೈನ್ ಕೋರ್ಸ್ ಗಳಿವೆ. ಈ ಮೂಲಕ ತಮ್ಮ ಜ್ಞಾನದ ಪರಿಧಿಯನ್ನು ವಿಸ್ತಾರ ಮಾಡಿಕೊಳ್ಳಬೇಕು ಎಂದು ಪುತ್ತೂರಿನ ನಿವೃತ್ತ ಪ್ರಾಚಾರ್ಯರು ಹಾಗು ಖ್ಯಾತ ವಿದ್ವಾಂಸರಾದ ಡಾ. ವರದರಾಜ ಚಂದ್ರಗಿರಿ ಅಭಿಪ್ರಾಯಪಟ್ಟರು.


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ವತಿಯಿಂದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ‘ ಪ್ರವೇಶೋತ್ಸವ 2026-27’ ಪ್ರಥಮ ವರ್ಷದ ನೂತನ ಪದವಿ ವಿದ್ಯಾರ್ಥಿಗಳ ಸ್ವಾಗತ ಹಾಗು ಪ್ರಶಿಕ್ಷಣ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಪದವಿ ಶಿಕ್ಷಣ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಅಡಿಪಾಯ. ಭಾರತೀಯ ವಿದ್ಯಾರ್ಥಿಗಳಿಗೆ ಹಲವು ದಶಕಗಳ ಹಿಂದೆ ಪದವಿ ಪಡೆಯುವ ಅವಕಾಶಗಳ ಕೊರತೆ ಇತ್ತು. ಅನೇಕರು ವಿದೇಶಗಳಿಗೆ ತೆರಳಿ ಬ್ಯಾರಿಸ್ಟರ್ ನಂತಹ ಪದವಿಗಳನ್ನು ಪಡೆಯುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಸಾವಿರಕ್ಕೂ ಹೆಚ್ಚಿನ ವಿಶ್ವವಿದ್ಯಾನಿಲಯಗಳು ಭಾರತದ್ದು , ವಿಫುಲವಾದ ಅವಕಾಶಗಳು ತೆರೆದುಕೊಂಡಿವೆ. ಪದವಿ ಶಿಕ್ಷಣಕ್ಕೆ ವಿಶೇಷ ಗೌರವವಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಹೊಸ ಅವಕಾಶಗಳನ್ನು ಸೃಷ್ಟಿಸುವಂತವರಾಗಬೇಕು. ಸವಾಲುಗಳು ಎದುರಿಸಿದಾಗ ಉನ್ನತ ಸ್ಥಾನ ತಲುಪಬವುದು.
ಇಂದಿನ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ವಿಭಿನ್ನ ಆಲೋಚನೆ ಹಾಗು ಕ್ರಿಯಾಶೀಲತೆಯ ಅತ್ಯಂತ ಅಗತ್ಯ. ಇದನ್ನು ಸಿದ್ದಿಸಿಕೊಳ್ಳಲು ನಿರಂತರ ಪ್ರಯತ್ನ, ಅಭ್ಯಾಸ ನಮ್ಮದಾಗಬೇಕು. ವಿಶೇಷವಾಗಿ ಗುರಿತಿಸಿಕೊಂಡು ಸಾಧನೆಗೈದಾಗ ಸಮಾಜ ನಮ್ಮನ್ನು ಗೌರವಿಸುತ್ತದೆ. ಯುವ ಸಮುದಾಯದಿಂದ ಸಕಾರಾತ್ಮಕ ಕೊಡುಗೆಯನ್ನು ಸಮಾಜ ನಿರೀಕ್ಷಿಸುತ್ತದೆ. ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದ ಜೊತೆಗೆ ಮಾನವೀಯ ತತ್ವಗಳನ್ನು ಮರೆಯಬಾರದು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ನಿರಂತರವಾಗಿ ಪಠ್ಯದ ಜೊತೆಗೆ ಜೀವನ ಶಿಕ್ಷಣವನ್ನು ಕಲಿಸಿಕೊಡುತ್ತಿದೆ. ವಿದ್ಯಾರ್ಥಿಗಳು ಇಲ್ಲಿನ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಉಪಸ್ಥಿತರಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಶಶಿಶೇಖರ್ ಕಾಕತ್ಕಾರ್ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ. ವಿದ್ಯೆ ಎಂಬುದೂ ನಿಜವಾದ ಸಂಪತ್ತು. ಇದನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲು ಸಾದ್ಯವಿಲ್ಲ. ಶಿಸ್ತು ಮತ್ತು ಸಂಸ್ಕಾರದಿಂದ ಕೂಡಿದ ವಿದ್ಯಾರ್ಥಿ ಜೀವನ ಅತ್ಯಂತ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ನಿರಂತರ ಪ್ರಯತ್ನಶೀಲರಾಗುವುದ ಜೊತೆಗೆ ದೃಢತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೋ. ವಿಶ್ವನಾಥ್ ಪಿ ಮಾತನಾಡಿ, ಉಜಿರೆಯಂತಹ ಪ್ರದೇಶದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ತಮ್ಮ ದೂರದೃಷ್ಟಿತದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಎಲ್ಲಾ ಅತ್ಯಾಧುನಿಕ ಸವಲತ್ತುಗಳನ್ನು ಸಂಸ್ಥೆ ನೀಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾಧಿಸುವೆ ಎಂಬ ಬಲವಾದ ನಂಬಿಕೆ ಮತ್ತು ಪ್ರಯತ್ನವಿದ್ದರೆ ನಾವು ಯಶಸ್ವಿಗಳಾಗಬವುದು ಎಂದರು.
ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ಶಿಸ್ತು, ನಿಯಮ ಸೇರಿದಂತೆ ವಿವಿಧ ಸವಲತ್ತು, ವಿಭಾಗ ಹಾಗು ಕಮಿಟಿಗಳ ಮಾಹಿತಿ ಕಾರ್ಯಕ್ರಮ ಜರುಗಿತು. ಎಸ್.ಡಿ.ಎಂ ಎಜುಕೇಷನಲ್ ಸೊಸೈಟಿ ರಿ. ಉಜಿರೆ ಅಧಿನಕೊಳಪಟ್ಟ ವಿವಿಧ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕುರಿತು ಕಾಲೇಜಿನ ಆಡಳಿತ ಕುಲಸಚಿವರಾದ ಡಾ. ಶ್ರೀಧರ ಎನ್ ಭಟ್ಟ,
ರಾಷ್ಟ್ರೀಯ ಸೇವಾ ಯೋಜನೆ (NSS) ಕುರಿತು ಉಪನ್ಯಾಸಕ ಡಾ. ಮಹೇಶ್ ಶೆಟ್ಟಿ, ರಾಷ್ಟ್ರೀಯ ಕೆಡೆಟ್ ಕೋರ್ (NCC) ಕುರಿತು ಉಪನ್ಯಾಸಕ ಹರೀಶ್ ಶೆಟ್ಟಿ, ಉಪನ್ಯಾಸಕಿ ಶೋಭಾ, ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ಕುರಿತು ಪ್ರಸಾದ್ ಕುಮಾರ್ ಹಾಗೂ ಡಾ. ಘನವಿ, ಕ್ರೀಡಾ ಸಂಘದ ಕುರಿತು ಉಪನ್ಯಾಸಕಿ ಶಾರದಾ,
ಗ್ರಂಥಾಲಯಗಳ ಕುರಿತು ಯೋಗೇಶ್, ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಉಪನ್ಯಾಸಕ ಡಾ. ನಾಗಣ್ಣ, ಪರೀಕ್ಷಾ ವಿಭಾಗದ ಕುರಿತು ಪ್ರೊ. ಗಣೇಶ್ ನಾಯಕ್, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಹಾಗೂ ಶಿಸ್ತು ಕುರಿತು ಉಪನ್ಯಾಸಕ ಶ್ರೇಯಸ್ ಬಿ. ಹಾಗು ನಟರಾಜ್ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ನಂದ ಕುಮಾರಿ, ಆಡಳಿತ ಕುಲಸಚಿವ ಪ್ರೊ. ಶ್ರೀಧರ್ ಎನ್ ಭಟ್ಟ, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್ ಐಕ್ಯೂ ಎಸ್ ಸಂಯೋಜಕ ಪ್ರೊ. ಗಜಾನನ ಆರ್ ಭಟ್ಟ ಹಾಗು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಹಾಗು ಶಿಸ್ತು ಸಮಿತಿ ಸಂಯೋಜಕ ಶ್ರೇಯಸ್ ಬಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಿಜಿ ವಿಭಾಗದ ಡೀನ್ ಡಾ. ಸೌಮ್ಯ ಬಿ ಪಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಮತ್ತು ಶಿಸ್ತು ಸಮಿತಿ ಸಂಯೋಜಕ, ಉಪನ್ಯಾಸಕ ಶ್ರೇಯಸ್ ಬಿ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಡಾ . ದಿವಾಕರ್ ಕೊಕ್ಕಡ ನಿರೂಪಿಸಿ, ಉಪನ್ಯಾಸಕಿ ನಮೃತ ಜೈನ್ ವಂದಿಸಿದರು. ಉಪನ್ಯಾಸಕ ನಟರಾಜ್ ಹಾಗು ದೀಕ್ಷಿತ್ ಸಹಕರಿಸಿದರು.
ಅಗ್ನಿ ವೀರ್ ಸಾಧಕ ಕಾಲೇಜಿನ 8 ವಿದ್ಯಾರ್ಥಿಗಳಿಗೆ ಸನ್ಮಾನ :
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಎನ್.ಸಿ.ಸಿ ವಿಭಾಗದಿಂದ ದೇಶ ಸೇವೆಗಾಗಿ ಅಗ್ನಿ ವೀರ್ ಯೋಜನೆಯಡಿಯಲ್ಲಿ ಭಾರತೀಯ ಭೂ ಸೇನೆಗೆ ಆಯ್ಕೆಯಾದ ಎಂಟು ಜನ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ನಿಶಿತ್ ಜೈನ್, ಪ್ರಣೀತ್, ಜೀವಿತ್ ಸಿ ಆರ್, ರಂಜಿತ್, ಪುನೀತ್ ಕುಮಾರ್, ನಿಹಾಲ್ ಶರೀಫ್, ಪ್ರದೀಪ್ ಬಿಬಿ ಹಾಗು ವೈ ಎಸ್ ಪ್ರೀತಂ ಇವರನ್ನು ಸರ್ವರ ಸಮ್ಮುಖದಲ್ಲಿ ಕಾಲೇಜಿನ ವತಿಯಿಂದ ಅತಿಥಿಗಳು ಹಾಗು ಪ್ರಾಂಶುಪಾಲರಾದ ಪ್ರೋ. ವಿಶ್ವನಾಥ್ ಪಿ ಗೌರವಿಸಿದರು. ಈ ಸಂದರ್ಭದಲ್ಲಿ ಅತಿಥಿ ಗಣ್ಯರು ಸೇರಿದಂತೆ ಎನ್.ಸಿ.ಸಿ ಸಂಯೋಜಕ ಸಬ್ ಲೆಫ್ಟಿನೆಂಟ್ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕಲಾಕೇಂದ್ರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ :
ಪ್ರವೇಶೋತ್ಸವ 2026-27 ಪ್ರಥಮ ವರ್ಷದ ನೂತನ ಪದವಿ ವಿದ್ಯಾರ್ಥಿಗಳ ಸ್ವಾಗತ ಸಭಾ ಕಾರ್ಯಕ್ರಮದ ಬಳಿಕ ಎಸ್.ಡಿ.ಎಂ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಭರತನಾಟ್ಯ, ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಲಾಕೇಂದ್ರದ ಸಂಯೋಜಕ ತೃಪ್ತ ಕುಮಾರ್ ಜೈನ್ ಸಂಯೋಜಿಸಿದರು.

