ಬೆಂಗಳೂರು: ಇಂದು (ಜೂನ್ 17) ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಪ್ರಕಾಶ್ ರಾಜ್ ” ಚಿನ್ನಯ್ಯ ನನಗೆ ಫೋನ್ ಮಾಡಿದ್ದು ನಿಜ. ಆದರೆ ಆ ಸಂದರ್ಭದಲ್ಲಿ ನಾನು ಅವನಿಗೆ ಫೋನ್ ನಲ್ಲಿ ಮಾತನಾಡಬೇಡ. ನಿನ್ನ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸು ಎಂದಿದ್ದೆ. ಆ ಕೂಡಲೇ ನಾನು ಎಸ್ ಐಟಿ ಮುಖ್ಯಸ್ಥರಾದ ಪ್ರಣಬ್ ಮೊಹಂತಿ ಅವರಿಗೆ ಕರೆ ಮಾಡಿ ನೀಡಿ ಚಿನ್ನಯ್ಯ ಕಳುಹಿಸಿದ್ದ ವಾಯ್ಸ್ ಮೆಸೇಜ್ ಕೂಡಾ ಕಳುಹಿಸಿಕೊಟ್ಟಿದ್ದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.


ಮಾಸ್ಕ್ ಮ್ಯಾನ್ ನಿಮ್ಮ ಹತ್ತಿರ ಮಾತನಾಡಬೇಕು ಎಂದು ಗಿರೀಶ್ ಮಟ್ಟಣ್ಣನವರ್ ಕಡೆಯಿಂದ ಕೂಡಾ ಫೋನ್ ಬಂದಿತ್ತು. ಚಿನ್ನಯ್ಯ ನನ್ನ ಜೊತೆ ತಮಿಳಿನಲ್ಲಿ ಮಾತನಾಡಲು ಶುರು ಮಾಡಿದ್ದ. ಅಣ್ಣ ನನಗೆ ಬಹಳ ವಿಷಯಗಳು ಗೊತ್ತು. ನಾನು ನಿಮ್ಮನ್ನು ಭೇಟಿ ಮಾಡಬೇಕು. ಸಾಕಷ್ಟು ವಿಚಾರಗಳನ್ನು ಹೇಳಿಕೊಳ್ಳಬೇಕು. ನನಗೆ ಭಯವಾಗುತ್ತಿದೆ. ನಿಮ್ಮ ಬೆಂಬಲ ಬೇಕು ಎಂದು ಹೇಳಿದ್ದ. ನಾನು ಪ್ರತಿಯಾಗಿ, ನನ್ನ ಮಂದೆ ನೀನು ಹೇಳಿದ ಸತ್ಯವನ್ನೆಲ್ಲಾ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳು, ಇಡೀ ಊರೇ ನಿನ್ನನ್ನು ಕೊಂಡಾಡುತ್ತದೆ ಮಾತ್ರವಲ್ಲ, ನಾನು ಕೂಡಾ ನಿನ್ನನ್ನು ತಬ್ಬಿಕೊಳ್ತೇನೆ ಎಂದು ಹೇಳಿದ್ದು ನಿಜ” ಎಂದು ಪ್ರಕಾಶ್ ರಾಜ್ ಹೇಳಿದರು.
ನಂತರ ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ. ಸುಳ್ಳು ಮಾಹಿತಿ ನೀಡುತ್ತಿದ್ದಾನೆ, ಅವನಿಂದ ದೂರವಿರಿ ಎಂದು ಪೊಲೀಸರು ಅಂತರ ಕಾಯ್ದುಕೊಳ್ಳಲು ಎಚ್ಚರಿಸಿದ್ದರು. ಈ ಕಾರಣದಿಂದ ಅವನಿಂದ ದೂರವಾದೆ ಎಂದು ಹೇಳಿದರು
ಮೃತಪಟ್ಟ ಹೆಣ್ಣುಮಕ್ಕಳು ನಮ್ಮವರಲ್ಲವೇ? ಸೌಜನ್ಯ ಹೇಗೆ ಸತ್ತಳು ಮತ್ತು ಅಲ್ಲಿ ಉಳಿದ ಹೆಣ್ಣು ಮಕ್ಕಳ ಸಾವುಗಳು ಹೇಗೆ ಸಂಭವಿಸಿದವು ಎಂದು ಪ್ರಶ್ನೆ ಮಾಡುವುದು ತಪ್ಪೇ? ನಾನು ಆ ಸಾವುಗಳ ನ್ಯಾಯಕ್ಕಾಗಿ ಪ್ರಶ್ನೆ ಮಾಡಿದ್ದೇನೆ ಹೊರತು ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿಲ್ಲ ಎಂದು ಹೇಳಿದರು.
ನಾನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರನ್ನು ಒಮ್ಮೆ ಭೇಟಿ ಆಗಿದ್ದೆ. ಅವರು ಅತ್ಯಂತ ಅದ್ಭುತವಾದ ಮತ್ತು ಶ್ರೇಷ್ಠ ವ್ಯಕ್ತಿʼ ಎಂದು ಪ್ರಕಾಶ್ ರಾಜ್ ಈ ಸಂದರ್ಭದಲ್ಲಿ ಹೇಳಿದರು.

