ಬಂಟ್ವಾಳ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಸುಮಾರು 18 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಕೈಚಳಕ ತೋರಿಸಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.


ಬೆಳ್ತಂಗಡಿ ತಾಲೂಕಿನ ನಿವಾಸಿ ಸರಸ್ವತಿ ಎಂಬವರು ಏಪ್ರಿಲ್ 15ರಂದು ಬೆಳಗ್ಗೆ ತನ್ನ ಮಗಳೊಂದಿಗೆ ಮಡಂತ್ಯಾರಿನಿಂದ ಪೊಳಲಿಗೆ ತೆರಳಲು ಧರ್ಮಸ್ಥಳ – ಸ್ಟೇಟ್ ಬ್ಯಾಂಕ್ ರೂಟ್ನ ಬಸ್ಸನ್ನು ಏರಿದ್ದರು. ಬೆಳಗ್ಗೆ ಸುಮಾರು 8.20ರ ಸುಮಾರಿಗೆ ಬಸ್ ಹತ್ತಿದಾಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ, ಮಗಳಿಗೆ ಸೀಟು ಸಿಕ್ಕಿದ್ದು, ಸರಸ್ವತಿಯವರು ನಿಂತುಕೊಂಡೇ ಪ್ರಯಾಣಿಸಿದ್ದರು.ಬೆಳಗ್ಗೆ 9 ಗಂಟೆಯ ಸುಮಾರಿಗೆ ಬಿ.ಸಿ. ರೋಡ್ ತಲುಪಿ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಸರಸ್ವತಿಯವರು ತನ್ನ ಕುತ್ತಿಗೆಯನ್ನು ಗಮನಿಸಿದಾಗ ಧರಿಸಿದ್ದ ಚಿನ್ನದ ಸರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಬಸ್ಸಿನಲ್ಲೆಲ್ಲಾ ಹುಡುಕಾಡಿದರೂ ಸರ ಪತ್ತೆಯಾಗಿಲ್ಲ.ಮಡಂತ್ಯಾರಿನಿಂದ ಬಿ.ಸಿ. ರೋಡ್ ತಲುಪುವ ಮಧ್ಯೆ ಬಸ್ಸಿನ ಜನಸಂದಣಿಯ ಲಾಭ ಪಡೆದ ಅಪರಿಚಿತ ಕಳ್ಳರು, ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಸರವನ್ನು ಕಳವು ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಕಳುವಾದ ಚಿನ್ನದ ಅಂದಾಜು ಮೌಲ್ಯ ಸುಮಾರು 2,50,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ
