

Gadaga: ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಸರ್ಕಾರವೇ ಮುಂದೆ ನಿಂತು ಗ್ರಾಮದಲ್ಲಿ ಹೊಸದಾಗಿ ಕ್ಷೌರದ ಅಂಗಡಿಯನ್ನು ಪ್ರಾರಂಭಿಸಿದ ಅಪರೂಪದ ಘಟನೆ ಗದಗದಲ್ಲಿ ನಡೆದಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ಸ್ಥಳೀಯ ಕ್ಷೌರಿಕರು ಹಿಂದೇಟು ಹಾಕಿದ್ದರು. ಈ ಬಗ್ಗೆ ದೂರುಗಳು ಕೇಳಿಬಂದಾಗ ತಹಶೀಲ್ದಾರ್ ಸಭೆ ನಡೆಸಿ, ನೋಟಿಸ್ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕ್ಷೌರಿಕರು ತಮ್ಮ ಪಟ್ಟನ್ನು ಸಡಿಲಿಸದೆ ಅಂಗಡಿಗಳನ್ನೇ ಬಂದ್ ಮಾಡಿದ್ದರು. ಹೀಗಾಗಿ ಈ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಶಿವಶರಣ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಅಧ್ಯಕ್ಷರಾದ ದೇವಪ್ಪ ಹಡಪದ ಅವರು ಸರ್ಕಾರದ ಜೊತೆ ಕೈಜೋಡಿಸಿ ಅವರು ತಮ್ಮ ಸಹೋದರರನ್ನೇ ಈ ಗ್ರಾಮಕ್ಕೆ ಕಳುಹಿಸಿಕೊಡಲು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಗುರುವಾರದಿಂದ ಗ್ರಾಮದಲ್ಲಿ ಅಧಿಕೃತವಾಗಿ ಸರ್ಕಾರದ ವತಿಯಿಂದಲೇ ಕ್ಷೌರದ ಅಂಗಡಿ ಕಾರ್ಯಾರಂಭ ಮಾಡಿದೆ.