

Namma Metro: ಫೆಬ್ರವರಿ 9 ರಿಂದ ನಮ್ಮ ಮೆಟ್ರೋ ಟಿಕೆಟ್ ದರವನ್ನು ಏರಿಸುವ ಬಗ್ಗೆ ಬಿಎಮ್ಆರ್ಸಿಎಲ್ ಮಾಹಿತಿಯನ್ನು ಹಂಚಿಕೊಂಡಿತ್ತು. ಸರ್ಕಾರವು ಕೂಡ ಇದಕ್ಕೆ ಒಪ್ಪಿಗೆಯನ್ನು ನೀಡಿತ್ತು. ಟಿಕೆಟ್ ದರ ಏರಿಸುವ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಪ್ರಯಾಣಿಕರು ಹಾಗೂ ಬೆಂಗಳೂರಿನ ಜನತೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಆದರೆ ಇದೀಗ ಇದೆಲ್ಲದರ ನಡುವೆ ಮೆಟ್ರೋ ಟಿಕೇಟ್ ದರ ಏರಿಕೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.
ಹೌದು, ಮೆಟ್ರೋ ದರವನ್ನು ದರ ಪರಿಷ್ಕರಣೆ ಸಮಿತಿ ಶೇ 5 ರಷ್ಟು ಏರಿಕೆ ಮಾಡಿತ್ತು. ನಾಡಿದ್ದು ಸೋಮವಾರದಿಂದಲೇ ಇದು ಜಾರಿಯಾಗುತ್ತೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮೆಟ್ರೋ ದರ ಏರಿಕೆ ಬಗ್ಗೆ ತಲೆಕೆಡಿಸಿಕೊಂಡಿದ್ದ ಬೆಂಗಳೂರಿನ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ದರ ಏರಿಕೆ ನಿರ್ಧಾರಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಈ ಕುರಿತಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಮಾಹಿತಿಯನ್ನು ಹಂಚಿಕೊಂಡಿದ್ದು, ಇದು ಬಿಜೆಪಿಯ ಹೋರಾಟಕ್ಕೆ ಸಿಕ್ಕ ಫಲ ಎಂದು ಹೇಳಿಕೊಂಡಿದ್ದಾರೆ.
ತೇಜಸ್ವಿ ಸೂರ್ಯ ಹೇಳಿದ್ದೇನು?
“ಸೋಮವಾರದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಬಿಎಂಆರ್ ಸಿ ಎಲ್ ಹಾಗೂ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಶೇ 5 ರಷ್ಟು ದರ ಏರಿಕೆಗೆ ನಿರ್ಧಾರ ಮಾಡಲಾಗಿತ್ತು. ಆದರೆ ಇದಕ್ಕೆ ವ್ಯಾಪಕ ವಿರೋಧ ಬಂದ ಹಿನ್ನಲೆಯಲ್ಲಿ ನಾನು ಕೇಂದ್ರ ಸಚಿವ ಮನೋಹರ್ ಕಟ್ಟರ್ ಅವರನ್ನು ಭೇಟಿ ಮಾಡಿ ದರ ಏರಿಕೆ ಮಾಡದಂತೆ ಮನವಿ ಮಾಡಿದ್ದೇನೆ. ಹೊಸತಾಗಿ ರಾಜ್ಯ ಸರ್ಕಾರದ ಮಾಡಿರುವ ಪ್ರಸ್ತಾಪವನ್ನು ನಿಲ್ಲಿಸಬೇಕು ಹಾಗೂ ಮುಂದಿನ ಪರಿಷ್ಕರಣೆ ಮಾಡುವವರೆಗೆ ದರ ಏರಿಕೆ ಮಾಡಬಾರದು ಎಂದು ಮನವಿ ಮಾಡಿದ್ದೆ. ಈ ನಿಟ್ಟಿನಲ್ಲಿ ಮನೋಹರ್ ಕಟ್ಟರ್ ಅವರು ಫೋನ್ ಮಾಡಿ ಸೋಮವಾರದಿಂದ ದರ ಏರಿಕೆ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ”ಸೋಮವಾರದಿಂದ ಮೆಟ್ರೋ ದರ ಏರಿಕೆ ಆಗುವುದಿಲ್ಲ. ಈ ಮೂಲಕ ನಾವು ಯುದ್ಧ ಗೆದ್ದಿದ್ದೇವೆ. ಹೊಸತಾಗಿ ದರ ಏರಿಕೆ ಸಮಿತಿ ರಚನೆ ಮಾಡಬೇಕಾಗಿದೆ. ದರ ಏರಿಕೆ ಸಮಿತಿ ರಚನೆ ಮಾಡುವ ಅಧಕಾರ ರಾಜ್ಯ ಸರ್ಕಾರದ್ದು. ಆದರೆ ಈ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸುಳ್ಳು ಹೇಳಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಕೇಂದ್ರ ಮತ್ತು ರಾಜ್ಯದ ನಡುವೆ ನಡೆದ ಒಪ್ಪಂದಲ್ಲಿ ದರ ಏರಿಕೆ ರಾಜ್ಯದ ಅಧಿಕಾರ ಎಂದಿದೆ. ಈ ಹಿಂದೆಯೂ ದರ ಏರಿಕೆ ಸಮಿತಿ ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿತ್ತು. ಬೆಂಗಳೂರು ಮೆಟ್ರೋ ಪ್ರಯಾಣ ಪ್ರಪಂಚದಲ್ಲೇ ದುಬಾರಿಯಾಗಿದೆ. ಈ ನಿಟ್ಟಿನಲ್ಲಿ ಮತ್ತೆ ಹೋರಾಟ ಮಾಡಬೇಕಾಗಿದೆ. ದರ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರು ಮೆಟ್ರೋ ಬಳಸುವ ರೀತಿಯಲ್ಲಿ ಇರಬೇಕು” ಎಂದು ಒತ್ತಾಯಿಸಿದ್ದಾರೆ.













