

ಹೊಸದಿಲ್ಲಿ: ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಅಪರಾಧಿಯನ್ನು ದಂಡಿಸಲು ಕಠಿಣ ಕಾನೂನು ರೂಪಿಸಿರುವಂತೆಯೇ ಆ್ಯಸಿಡ್ ದಾಳಿ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅನುವಾಗುವಂತೆ ಚಾಲ್ತಿಯಲ್ಲಿರುವ ಕಾನೂನಿಗೆ ತಿದ್ದುಪಡಿ ತರುವ ಬಗ್ಗೆ ಯೋಚಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಮಂಗಳವಾರ ಸೂಚನೆ ನೀಡಿದೆ.
ಆ್ಯಸಿಡ್ ತುತ್ತಾಗಿದ್ದ ಹರಿಯಾಣ ಮೂಲದ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯಕಾಂತ್, ನ್ಯಾ. ಆರ್.ಮಹಾದೇವನ್, ನ್ಯಾ.ಜೋಯ್ಸಲ್ಯ ಬಾಗಿ ಅವರಿದ್ದ ತ್ರಿಸದಸ್ಯ ಪೀಠ, ಆ್ಯಸಿಡ್ ದಾಳಿ ಪ್ರಕರಣಗಳ ಸಂಖ್ಯೆ, ಸಂತ್ರಸ್ತರ ಸ್ಥಿತಿಗತಿ, ಕೈಗೊಂಡ ಪುನರ್ವಸತಿ ಕ್ರಮಗಳ ಬಗ್ಗೆ 4 ವಾರಗಳಲ್ಲಿ ಸಂಪೂರ್ಣ ವಿವರ ನೀಡುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಆ್ಯಸಿಡ್ ದಾಳಿಯ ಕೆಲವು ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯಗಳು ನೀಡುತ್ತಿರುವ ಅಸಮರ್ಪಕ ಶಿಕ್ಷೆಯನ್ನು ಗಮನಿಸಿದ ನ್ಯಾಯಪೀಠ, “ಆ್ಯಸಿಡ್ ದಾಳಿಯಂತ ಕ್ರೌರ್ಯ ಘಟನೆಗಳಲ್ಲಿ ಗರಿಷ್ಠ ಶಿಕ್ಷೆ ವಿಧಿಸಬೇಕಿದೆ. ಅಮಾನವೀಯ ಕೃತ್ಯ ಎಸಗಿದವರಿಗೆ ಸುಧಾರಣಾವಾಧಿ ಶಿಕ್ಷೆ ನೀಡುವುದು ಸರಿಯಾದ ಕ್ರಮವಲ್ಲ. ತಪ್ಪು ಮಾಡಿದವರಿಗೆ ನೋವು ನೀಡುವ ಶಿಕ್ಷೆ ವಿಧಿಸಿದಾಗ ಮಾತ್ರ ಸಂತ್ರಸ್ತರಿಗೆ ನ್ಯಾಯ ಸಿಗಲಿದೆ,” ಅಭಿಪ್ರಾಯಪಟ್ಟಿದೆ. ದಾಳಿಯಂಥ ಎಂದು ಘಟನೆಗಳನ್ನು ನಿಯಂತ್ರಿಸಲು ಪ್ರತಿಬಂಧಕ ಕಾನೂನು ಕ್ರಮ ಜಾರಿಗೊಳಿಸುವ ಅಗತ್ಯವಿದೆ,” ಎಂದು ಹೇಳಿರುವ ಸೂರ್ಯಕಾಂತ್, “ಸಂತ್ರಸ್ತರಿಗೆ ಪರಿಹಾರ ನೀಡಲು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿಯಮ ರೂಪಿಸುವ ಬಗ್ಗೆ ಸರಕಾರ ಗಮನ ಕೊಡಬೇಕು,” ಎಂದು ಹೇಳಿದರು.
ವರದಕ್ಷಿಣೆ ಸಾವಿನ ಪ್ರಕರಣದ ರೀತಿ ಆ್ಯಸಿಡ್ ದಾಳಿ ಕೇಸ್ ನಿರ್ವಹಿಸಬೇಕಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಕಾನೂನಿಗೆ ತಿದ್ದುಪಡಿ ತರಲು ಚಿಂತನೆ ನಡೆಸುವಂತೆ ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರ್ಚನಾ ಪಾಠಕ್ ದೇವ್ ಅವರಿಗೆ ನ್ಯಾಯಪೀಠ ಸೂಚಿಸಿತು.













