ಮುಕ್ಕ ಸಸಿಹಿತ್ಲು: ವೃದ್ಧೆಯ ಚಿನ್ನ ದೋಚಿದ ಮೂವರ ಬಂಧನ

ಸುರತ್ಕಲ್: ಮುಕ್ಕ ಸಸಿಹಿತ್ತು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ಧೆ 85 ವರ್ಷ ಪ್ರಾಯದ ಜಲಜಾ ಎಂಬವರ ಮನೆಗೆ ಡಿಸೆಂಬರ್ 3ರಂದು ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಮೂವರ ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಗುಡ್ಡೆಕೊಪ್ಪ ನಿವಾಸಿ ಶೈನ್ ಪುತ್ರನ್ (21), ಬೆಂಗಳೂರಿನ ಸೈಕಲ್ ಗಿರೀಶ್ (28) ಮತ್ತು ಕೋತಿ ವಿನೋದ್ (33) ಬಂಧಿತ ಆರೋಪಿಗಳು. ಕಾರ್ಕಳದ ಜೈಸನ್ ಎಂಬಾತನ ಪತ್ತೆಯಾಗಬೇಕಿದೆ.
ಶೈನ್ ಪುತ್ರನ್ ಮತ್ತು ಜೈಸನ್ ಎಂಬವರು ರಾತ್ರಿ ಎರಡೂವರೆ ಗಂಟೆಗೆ ಜಲಜಾ ಅವರ ಮನೆಯ ಬಾಗಿಲು ಬಡಿದು ನೀರು ಕೇಳಿದ್ದರು. ಜಲಜಾರವರು ಬಾಗಿಲು ತೆರೆಯದೆ ನೀರು ಹೊರಗೆ ಇದೆ ಕುಡಿಯಿರಿ ಎಂದಿದ್ದರು. ಆಗ ಶೈನ್ ಹಾಗೂ ಜೈಸನ್ ಮೆಲ್ಲನೆ ಮನೆಯ ಹೆಂಚನ್ನು ತೆಗೆದು ಒಳಗೆ ಪ್ರವೇಶಿಸಿ ಕೊಲೆ ಬೆದರಿಕೆ ಹಾಕಿ ಕಿವಿಯಲ್ಲಿನ ಓಲೆ ಸಹಿತ 4.43 ಲಕ್ಷ ರೂ. ಚಿನ್ನ ದೋಚಿದ್ದರು.
ನಂತರ ಕದ್ದ ಚಿನ್ನವನ್ನು ಬೆಂಗಳೂರಿನ ರೌಡಿ ಶೀಟರ್ಗಳಾದ ಗಿರಿ ಯಾನೆ ಸೈಕಲ್ ಗಿರಿ ಮತ್ತು ಕೋತಿ ವಿನೋದ್ಗೆ ಮಾರಾಟ ಮಾಡಿದ್ದರು. ಅವರಿಬ್ಬರ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳಿವೆ. ಶೈನ್ ಮೇಲೆ ಗಾಂಜಾ ಸೇವನೆ ಪ್ರಕರಣ ಸುರತ್ಕಲ್ ಠಾಣೆಯಲ್ಲಿ ದಾಖಲಾಗಿದೆ.
ಈ ಪತ್ತೆ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ., ಪಿಎಸ್ಐ ರಘು ನಾಯಕ್, ರಾಘವೇಂದ್ರ ನಾಯ್ಕ, ಎಎಸ್’ಐ ರಾಧಾಕೃಷ್ಣ ರಾಜೇಶ್ ಆಳ್ವ ಮತ್ತು ಠಾಣೆಯ ಸಿಬಂದಿಗಳಾದ ಅಣ್ಣಪ್ಪ ಉಮೇಶ್, ಅಜಿತ್ ಮ್ಯಾಧೂ, ತಿರುಪತಿ, ಕಾರ್ತಿಕ್, ವಿನೋದ್ ನಾಯ್ಕ, ಸುನೀಲ್ ಕುಸನಾಳ, ಸತೀಶ ಸತ್ತಿಗೇರಿ, ಮಂಜುನಾಥ ಬೊಮ್ಮನಾಳ, ಹನುಮಂತ ಆಲೂರ ಪಾಲ್ಗೊಂಡಿದ್ದರು.
Comments are closed.