Crime News: ಪ್ರೀತಿ ಮಾಡಿದ್ದಕ್ಕೆ ಅಪ್ರಾಪ್ತ ಪುತ್ರಿಯನ್ನು ಕೊಂದ ಅಪ್ಪ! ಮರ್ಯಾದೆಗೇಡು ಕೊಲೆ ಈಗ ಬೆಳಕಿಗೆ!

Crime News: ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದ ಅಪ್ರಾಪ್ತ ಮಗಳಿಗೆ ಬುದ್ದಿ ಹೇಳಿದರೂ ಕೇಳದ ಕಾರಣ ಕುಪಿತನಾದ ತಂದೆ ಮರ್ಯಾದೆಗೆ ಅಂಜಿ ಮಗಳನ್ನು ಹತ್ಯೆಗೈದು ಕೃಷ್ಣಾ ನದಿಗೆ ಎಸೆದ ಹೃದಯ ವಿದ್ರಾವಕ ಘಟನೆ ಬರೋಬ್ಬರಿ ಏಳು ತಿಂಗಳ ನಂತರ ಬೆಳಕಿಗೆ ಬಂದಿದೆ.

ಪ್ರಿಯಕರನ ವಿರುದ್ಧ ದಾಖಿಸಿದ್ದ ಪೋಕ್ಸೋ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಂದಾಗ ನ್ಯಾಯಾಧೀಶರು ಬಾಲಕಿಯನ್ನು ಹಾಜರುಪಡಿಸಲು ಸೂಚಿಸಿದ್ದಾರೆ. ಇದರಿಂದಾಗಿ ಬಹುತೇಕ ಮುಚ್ಚಿ ಹೋಗಿದ್ದ ಪ್ರಕರಣ ಬಯಲಿಗೆ ಬಂದಿದೆ. ಪುತ್ರಿಯನ್ನೇ ಕೊಂದ ತಂದೆಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಹಂಚಿನಾಳ ಗ್ರಾಮದ ಪಕ್ಕಪ್ಪ ಕಂಬಳಿ ಬಂಧಿತ.
ಹನುಮಂತ- ರೇಣುಕಾ ಪ್ರೀತಿ ಮಾಡುತ್ತಿದ್ದರು. ಇದು ಗೊತ್ತಾಗಿ ’18 ವರ್ಷ ತುಂಬಿದ ಬಳಿಕ ಸೂಕ್ತ ವರನನ್ನು ನೋಡಿ ನಿನಗೆ ಮದುವೆ ಮಾಡುತ್ತೇವೆ. ಈಗಾಗಲೇ ನಮ್ಮ ಮರ್ಯಾದೆ ಕಳೆದಿದ್ದೀ. ಮತ್ತೆ ಕಳೆಯಬೇಡ’ ಎಂದು ಲಕ್ಕಪ್ಪ ಬುದ್ದಿ ಹೇಳಿದರೂ ಕೇಳದ ರೇಣುಕಾ 18 ವರ್ಷ ಆದ ಮೇಲೆ ಹನುಮಂತನ ಸಂಗಡ ಹೋಗುತ್ತೇನೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ.
ಕಳೆದ ವರ್ಷ ಮಹಾನವಮಿ ಅಮಾವಾಸ್ಯೆ 15 ದಿನಮುಂಚೆ ಅಂದರೆ ಸೆಪ್ಟೆಂಬರ್ 29ರಂದು ತಮ್ಮ ದಾಳಿಂಬೆ ತೋಟದಲ್ಲಿ ತಾಯಿ, ಮಗಳು ಹಾಗೂ ತಂದೆ ಲಕ್ಕಪ್ಪ ಕೆಲಸಕ್ಕೆ ಹೋಗಿದ್ದಾರೆ. ರೇಣುಕಾ ತಾಯಿ ಸಿದ್ದರಮ್ಮ ಅಡುಗೆ ಮಾಡಬೇಕೆಂದು ಮನೆಗೆ ಬೇಗನೇ ಹೋಗಿದ್ದು, ಆಗ ರೇಣುಕಾ ಮತ್ತು ಲಕ್ಕಪ್ಪ ನಡುವೆ ಪ್ರೀತಿ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತೆ ಜಗಳವಾಗಿದೆ. ರೇಣುಕಾ ತಲೆ ಬಗ್ಗಿಸಿ ಗೋಣಿಗೆ ಲಕ್ಕಪ್ಪ ಜೋರಾಗಿ ಗುದ್ದಿದ್ದಾನೆ. ಹೊಲದ ಬದುವಿನಲ್ಲಿ ಇದ್ದ ಬಂಡೆಗೆ ಬೋರಲು ಬಿದ್ದು ರೇಣುಕಾ ಮೂರ್ಛೆ ಹೋಗಿದ್ದ, ಆಗ ಲಕ್ಕಪ್ಪ ಹಗ್ಗದಿಂದ ಊರಲು ಹಾಕಿ ಸಾಯಿಸಿದ್ದಾನೆ. ಬಳಿಕ ಶವವನ್ನು ಬೈಕ್ನಲ್ಲಿ ತೆಗೆದುಕೊಂಡು ಹೋಗಿ ಶೀಲಹಳ್ಳಿ ಬಳಿಯ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಎಸೆದಿದ್ದಾನೆ. ಅಂದು ರಾತ್ರಿ 12 ಗಂಟೆಗೆ ಮನೆಗೆ ಬಂದ ಲಕ್ಕಪ್ಪ ಹೆಂಡತಿಗೆ ವಿಷಯ ತಿಳಿಸಿ ಈ ವಿಷಯ ಯಾರಿಗಾದರೂ ಹೇಳಿದರೆ ನಿನಗೂ ಇದೇ ಗತಿ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ಹನುಮಂತನ ಮೇಲೆ ದಾಖಲಾಗಿದ್ದ ಪೋಕ್ಸೋ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಯುವತಿಯನ್ನು ಹಾಜರುಪಡಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ. ಆಗ 2-3 ಸಲ ಸುಳ್ಳು ಹೇಳಿ ಲಕ್ಕಪ್ಪ ಮನೆಯವರು ತಪ್ಪಿಸಿಕೊಂಡಿದ್ದಾರೆ. ನಂತರ ಹಾಜರುಪಡಿಸಲೇಬೇಕು ರೇಣುಕಾಳನ್ನು ಎಂದು ನ್ಯಾಯಾಧೀಶರು ಕಟ್ಟುನಿಟ್ಟಿನ ಸೂಚನೆ ನೀಡಿದಾಗ ಲಕ್ಕಪ್ಪ ತನ್ನ ಮಗಳು ಕಾಣೆಯಾಗಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ. ಪ್ರಕರಣ ದಾಖಲಿಸಿದ ಪೊಲೀಸರು ಪಾಲಕರನ್ನು ವಿಚಾರಣೆ ನಡೆಸಿದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಈಗ ಆರೋಪಿ ತಂದೆ ಲಕ್ಕಪ್ಪನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
Comments are closed.