Soujanya Murder Protest: ಸೌಜನ್ಯಾ ಹೋರಾಟ: ಕಾರ್ಕಳದಲ್ಲಿ ಮತ್ತೆ ಘರ್ಜಿಸಿದ ಹೋರಾಟಗಾರರು, ಹರಿದು ಬಂದ ಭಾರೀ ಜನಸ್ತೋಮ !

Share the Article

ಧರ್ಮಸ್ಥಳ ಗ್ರಾಮದ ಸೌಜನ್ಯಳಿಗೆ ನ್ಯಾಯ ಕೊಡಿಸುವ ಹಿನ್ನೆಲೆಯಲ್ಲಿ ಬೆಳೆಯುತ್ತಿರುವ ಹೋರಾಟ ಪಡೆದುಕೊಳ್ಳುತ್ತಿದೆ. ಇವತ್ತು ಬೆಳ್ತಂಗಡಿಯ ಪಕ್ಕದ ಕಾರ್ಕಳ ತಾಲೂಕಿನಲ್ಲಿ ಬೃಹತ್ ಪ್ರಮಾಣದ ಜನಾಂದೋಲನ ನಡೆದಿದೆ. ಕಾರ್ಕಳದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ದೊಡ್ಡವರು ಮಾಡಿದ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಟಿವಿಗಳಲ್ಲಿ ಸುಳ್ಳು ಸಾಕ್ಷಿ.ನೀಡಿದ ಮೇಲೆ ಹೋರಾಟಕ್ಕೆ ಇನ್ನಷ್ಟು ಜನ ಬರುತ್ತಿದ್ದು, ಇವತ್ತಿನ ಭಾರಿ ಜನಸ್ತೋಮ ಅದಕ್ಕೆ ಸಾಕ್ಷಿ ಆಯಿತು.

ಇವತ್ತಿನ ಪ್ರತಿಭಟನೆಯಲ್ಲಿ ಹೋರಾಟದ ನೇತೃತ್ವ ವಹಿಸಿದ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟೆನ್ನನವರ್, ದೈವ ಚಿಂತಕ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ಸಂಧ್ಯಾ ಪವಿತ್ರಾ ನಾಗರಾಜ್,ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿ ದಕ್ಷಿಣ ಕನ್ನಡ ಇದರ ಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಎಸ್.ಮಿಜಾರ್, ಸಂತೋಷ್ ರಾವ್ ಸಹೋದರ ಸಂಜಯ್ ರಾವ್ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಾ.ಪಿ.ಮೂರ್ತಿ, ಮುಂತಾದವರು ಭಾಗವಹಿಸಿದ್ದರು.

ಸಾಮಾಜಿಕ ಹೋರಾಟಗಾರ ಬಿಜೆಪಿ ನಾಯಕ ಮತ್ತು ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆನ್ನನವರ್ ಅಕ್ಷರಶಃ ಸ್ಫೋಟಿಸಿದ್ದಾರೆ. ತನಿಖೆಯನ್ನು ದಾರಿ ತಪ್ಪಿಸುವ ಮತ್ತು ಆರೋಪಿಗಳನ್ನು ರಕ್ಷಿಸುವ ಕಾಮಾಂಧರಿಗೆ ವಾಚಾಮಗೋಚರ ಬೈದಿದ್ದಾರೆ. ಈ ಸಂದರ್ಭದಲ್ಲಿ ಹೋರಾಟಗಾರರು ಯಾಕೆ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿಗೆ ಮೇಲ್ಮನವಿ ಹೋಗುತ್ತಿಲ್ಲ ಎಂದು ವಿವರಿಸಿದ್ದು, ಮೇಲ್ಮನವಿ ಸಲ್ಲಿಸಲು ಕೆಲವು ಶಕ್ತಿಗಳು ಒತ್ತಾಯ ಮಾಡುತ್ತಿದ್ದು ಇದು ಕೇವಲ ಸಂತೋಷ ರಾವ್ ನನ್ನು ಈ ಕೇಸಿನಲ್ಲಿ ಸಿಲುಕಿಸಲು ಎಂದಿದ್ದಾರೆ. ಸೌಜನ್ಯ ಅಮ್ಮ ಕುಸುಮಾವತಿ ಸ್ವಲ್ಪ ಯಾಮಾರಿದ್ದರೂ ಅಷ್ಟೇ, ಎಂದರು.

ಈ ಸಂದರ್ಭ ಮಾತಾಡಿದ ಕುಸುಮಾವತಿಯವರು, ತಮ್ಮ ಮೇಲೆ ಮತ್ತು ತಮ್ಮ ಕುಟುಂಬದವರ ಮೇಲೆ ನಡೆಯುತ್ತಿರುವ ಅಪಪ್ರಚಾರಕ್ಕೆ ಕಿಡಿಗಾರಿದರು. ಸೆಟಲೈಟ್ ಟಿವಿ ಚಾನೆಲ್ ಒಂದು ನನ್ನ ಮಗಳ ಫೋಟೋ ಮತ್ತು ಹೆಸರು ಬಳಸಿಕೊಂಡು ತನ್ನ ಟಿ ಆರ್ ಪಿ ಹೆಚ್ಚಿಸಿಕೊಳ್ಳುತ್ತಿದೆ. ‘ನನ್ನ ಮಗಳ ಫೋಟೋ ತೆಗೀರಿ, ಇಲ್ಲದೆ ಹೋದರೆ ನಾವು ಕುಟುಂಬವೇ ಸ್ಟುಡಿಯೋಗೆ ಹೋಗುತ್ತೇವೆ. ಫೋಟೋ ತೆಗೆಸುತ್ತೇವೆ’ ಎಂದರು. ಜತೆಗೆ ಎಂದಿನಂತೆ ತನ್ನ ಮಗಳಿಗೆ ನ್ಯಾಯ ಕೊಡಿಸಲು ಸೆರಗೊಡ್ಡಿ ಬೇಡಿದರು.

ದೈವ ಚಿಂತಕ ತಮ್ಮಣ್ಣ ಶೆಟ್ಟಿ ಮಾತನಾಡಿ, ಇದೀಗ ಹಿನ್ನೆಲೆಯಲ್ಲಿ ಕೆಲಸ ಮಾಡುವ ಸೀನಪ್ಪಣ್ಣ (ದೊಡ್ಡವರು) ಲಾಫಿಂಗ್ ಬುದ್ಧನ ತರ ಕೂತಿದ್ದಾರೆ ಇನ್ನಾದರೂ ಮಾತನಾಡಿ ಎಂದು ಕರೆ ನೀಡಿದ್ದಾರೆ. ಅಲ್ಲದೆ ಸೀನಪ್ಪಣ್ಣನನ್ನು ಭಿಕ್ಷುಕರಿಗೆ ಹೋಲಿಸಿದ್ದಾರೆ. ನಾವು ಇಷ್ಟರ ತನಕ ಬಿಳಿ ಬಟ್ಟೆಗೆ ಮರ್ಯಾದೆ ನೀಡಿದ್ದೆವು. ಆದರೆ ಬಿಳಿ ಬಟ್ಟೆ ಹಾಕಿಕೊಂಡು ಅನ್ಯಾಯ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಮಾರಂಭದ ಕೊನೆಯಲ್ಲಿ ಮಾತನಾಡಿದ ಮಹೇಶ್ ಶೆಟ್ಟಿಯವರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸೌಜನ್ಯ ಪ್ರಕರಣ ಸರ್ಕಾರ ಮಾಡಿದ ತಪ್ಪು. ಸರ್ಕಾರ ಮಾಡಿದ ತಪ್ಪನ್ನು ಸರ್ಕಾರವೇ ಸರಿಮಾಡಬೇಕು. ರಾಜ್ಯ ಸರ್ಕಾರಕ್ಕೆ ನಮ್ಮ ವಿನಂತಿ ಏನೆಂದರೆ ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸಬೇಕು. ಇಲ್ಲದೆ ಹೋದರೆ ನಾವು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಮತ್ತು ಮತ್ತು ಮುಂದಿನ ದಿನಗಳಲ್ಲಿ ಧರ್ಮಸ್ಥಳಕ್ಕೆ ಮುತ್ತಿಗೆ ಹಾಕ್ತೇವೆ ಎಂದು ಮಹೇಶ್ ಶೆಟ್ಟಿ ತಿಮರೋಡಿಯವರು ಅಕ್ರೋಶ ಭರಿತರಾಗಿ ನುಡಿದರು.
ಈ ಸಂದರ್ಭದಲ್ಲಿ ಸೂಚ್ಯವಾಗಿ ಮಾತನಾಡಿದ ತಿಮರೋಡಿಯವರು ಅಂದು ಡಾ. ಹರಳೆ ಅವರ ಪತ್ನಿ ವೇದವಲ್ಲಿಯವರ ಮೇಲೆ ನಡೆದ ಅತ್ಯಾಚಾರ ಮತ್ತು ತದನಂತರ ವೇದವಲ್ಲಿಯವರನ್ನು ಪೆಟ್ರೋಲ್ ಹಾಕಿ ಸುಟ್ಟು ಕೊಂದ ಘಟನೆಯನ್ನು ಎನ್ನುವ ವಿವರಿಸಿದರು.
ಅಂದು ವೇದವಲ್ಲಿ ತದನಂತರ ಪದ್ಮಲತಾ, ಇದೀಗ ಸೌಜನ್ಯ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸುತ್ತಲೇ ಬರುತ್ತಿದ್ದಾರೆ. ಇಲ್ಲಿ ಯಾವುದೇ ಕೇಸ್ ಆದರೂ ಯಾರಿಗೂ ಶಿಕ್ಷೆ ಆಗುವುದಿಲ್ಲ. ಇವು ಒಂದೆರಡು ಪ್ರಕರಣಗಳಲ್ಲ ಒಟ್ಟು 462 ಇಂತಹುದೇ ಸಾವುಗಳಾಗಿವೆ ಎಂಬುದನ್ನು ನೆನಪಿಸಿದರು.

Leave A Reply