Modi letter: ಮೋದಿ ‘ತಾಯಿ’ ನಿಧನಕ್ಕೆ ಪತ್ರ ಬರೆದು ಸಂತಾಪ ಸೂಚಿಸಿದ 2ನೇ ಕ್ಲಾಸ್ ಮಗು! ಮರುಪತ್ರ ಬರೆದು ಧನ್ಯವಾದದೊಂದಿಗೆ ಭಾವನೆಗಳನ್ನು ತೆರೆದಿಟ್ಟ ಪ್ರಧಾನಿ!

ಪ್ರಧಾನಿ ನರೇಂದ್ರ ಮೋದಿಯವರಿಗೆ ವಿದ್ಯಾರ್ಥಿಗಳು ಪತ್ರ ಬರೆಯುವುದು, ಅದಕ್ಕೆ ಮೋದಿ ಮರುಪತ್ರ ಬರೆಯುವುದನ್ನು ನಾವು ಆಗಾಗ ನೋಡಿರುತ್ತೇವೆ. ಕೆಲವು ವಿದ್ಯಾರ್ಥಿಗಳು ಶೈಕ್ಷಣಿಕ ಸಮಸ್ಯೆ ಹೇಳಿಕೊಂಡು, ಇನ್ನು ಕೆಲವು ವಿದ್ಯಾರ್ಥಿಗಳು ಪ್ರಧಾನಿಗಳ ಕಾರ್ಯ, ದೇಶ ಸೇವೆ, ಅವಿರತ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬರೆಯುತ್ತಾರೆ. ಅಂತೆಯೇ ಮುಖ್ಯವಾದ ಪತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಬರೆಯದೇ ಇರಲಾರರು. ಸಣ್ಣವರು, ದೊಡ್ಡವರು ಎನ್ನದೇ ಪ್ರತಿಯೊಬ್ಬರಿಗೂ ಪತ್ರದ ಮೂಲಕವೇ ಅವರು ವ್ಯವಹರಿಸುತ್ತಾರೆ.

ಅಂತೆಯೇ ಇತೀತಚೆಗೆ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ಅಗಲಿಕೆಗೆ ಸಂತಾಪ ಸೂಚಿಸಿ ಬೆಂಗಳೂರಿನ ಎಂಇಎಸ್ ಕಿಶೋರ್ ಕೇಂದ್ರದ ಎರಡನೇ ತರಗತಿ ವಿದ್ಯಾರ್ಥಿ ಆರುಷ್ ಎಂಬಾತ ಪ್ರಧಾನಿಗೆ ಪತ್ರ ಬರೆದಿದ್ದ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಆ ವಿದ್ಯಾರ್ಥಿಗೆ ಮರು ಪತ್ರ ಬರೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಭಾವನೆಗಳನ್ನು ತೆರೆದಿಟ್ಟಿದ್ದಾರೆ.

ಹೌದು, ಕಳೆದ ಡಿಸೆಂಬರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರುಷ ಇಹಲೋಕ ತ್ಯಜಿಸಿದ್ದರು ಈ ವೇಳೆ ದೇಶ ವಿದೇಶಗಳ ಗಣ್ಯರು, ನಾಯಕರು ಹಾಗೂ ನಾಗರಿಕರು ಸಂತಾಪ ಸೂಚಿಸಿದ್ದರು. ಇದೇ ಸಮಯದಲ್ಲಿ ಬೆಂಗಳೂರಿನ ಪುಟ್ಟ ಬಾಲಕನೊಬ್ಬ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಸಂತಾಪ ಸೂಚಿಸಿದ್ದ. ಈಗ ಆ ಪತ್ರಕ್ಕೆ ಪ್ರಧಾನಿ ಮೋದಿ ಸ್ಪಂದಿಸಿದ್ದು, ಬಾಲಕನಿಗೆ ಧನ್ಯವಾದ ತಿಳಿಸಿದ್ದಾರೆ. ಬಾಲಕನ ಪತ್ರಕ್ಕೆ ಪ್ರಧಾನಿ ಮೋದಿ ಪತ್ರದ ಮೂಲಕವೇ ಸ್ಪಂದಿಸಿದ್ದಾರೆ.

ಇದೀಗ ಬಿಜೆಪಿ ನಾಯಕಿ ಮತ್ತು ಶಾಸಕಿ ಖುಷ್ಬೂ ಸುಂದರ್ ಅವರು ಆರುಷ್ ಶ್ರೀವಾಸ್ತವ್ ಮತ್ತು ಪ್ರಧಾನಿಯವರ ಪತ್ರವನ್ನ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಆರುಷ್ ಶ್ರೀವಾಸ್ತವ್ ಅವರ ಪತ್ರಕ್ಕೆ ಪ್ರಧಾನಿ ಮೋದಿ ಉತ್ತರಿಸಿದ್ದಲ್ಲದೇ, ಅವರ ತಾಯಿಯ ಬಗ್ಗೆ ತಮ್ಮ ಭಾವನೆಗಳನ್ನ ವ್ಯಕ್ತಪಡಿಸಿದ್ದಾರೆ. ಆರುಷ್ ಬರೆದ ಪತ್ರದಲ್ಲಿ ‘ನಮಸ್ಕಾರ್ ಪ್ರಧಾನಮಂತ್ರಿ, ಇಂದು ಟಿವಿಯಲ್ಲಿ ನಿಮ್ಮ ಪ್ರೀತಿಯ ತಾಯಿಯ ನಿಧನದ ಸುದ್ದಿಯನ್ನ ನೋಡಿ ತುಂಬಾ ದುಃಖವಾಯಿತು ದಯವಿಟ್ಟು ನನ್ನ ಸಂತಾಪವನ್ನ ಸ್ವೀಕರಿಸಿ, ದೇವರು ನಿಮ್ಮ ತಾಯಿಯ ಆತ್ಮಕ್ಕೆ ಅವರ ಪವಿತ್ರ ಪಾದಗಳಲ್ಲಿ ಸ್ಥಾನ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದಿದೆ.

ಇನ್ನು ಇದಕ್ಕೆ ಉತ್ತರಿಸಿರುವ ಪ್ರಧಾನಿ ಮೋದಿ ಅವರು ‘ಅರುಷ್ ಶ್ರೀವತ್ಸಾ ಜೀ, ನನ್ನ ತಾಯಿಯ ನಿಧನದ ಬಗ್ಗೆ ನೀವು ವ್ಯಕ್ತಪಡಿಸಿದ ನಿಮ್ಮ ಹೃತ್ಪೂರ್ವಕ ಸಂತಾಪಕ್ಕಾಗಿ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ತಾಯಿಯ ಸಾವು ತುಂಬಲಾರದ ನಷ್ಟವಾಗಿದ್ದು, ಅದರ ನೋವನ್ನ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳಲ್ಲಿ ನನಗೆ ಜಾಗ ನೀಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ, ಈ ನಷ್ಟವನ್ನ ಜಯಿಸಲು ನಿಮ್ಮ ಭಾವನೆಗಳು ನನಗೆ ಶಕ್ತಿ ಮತ್ತು ಧೈರ್ಯವನ್ನ ನೀಡುತ್ತಿವೆ. ನಿಮ್ಮ ಸಂತಾಪಕ್ಕಾಗಿ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಯನ್ನ ವ್ಯಕ್ತಪಡಿಸುತ್ತೇನೆ’ ಎಂದಿದ್ದಾರೆ.

Leave A Reply

Your email address will not be published.