ದಕ್ಷಿಣ ಕನ್ನಡ : ಸುಳ್ಯದಲ್ಲಿ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಗೆ ಶಂಕುಸ್ಥಾಪನೆ

ದಕ್ಷಿಣ ಕನ್ನಡದ ಸುಳ್ಯದ ಜನತೆಗೆ ಭರ್ಜರಿ ಸಿಹಿಸುದ್ದಿ. ಹೌದು ಸುಳ್ಯದಲ್ಲಿ ನಿರ್ಮಾಣವಾಗುವ 110/33/11 ಕೆವಿ ವಿದ್ಯುತ್‌ ಸಬ್‌ ಸ್ಟೇಷನ್‌ ಮತ್ತು 110 ಕೆವಿ ಮಾಡಾವು-ಸುಳ್ಯ ವಿದ್ಯುತ್‌ ಪ್ರಸರಣ ಕನಸು ನನಸಾಗಿದೆ. ಆ ಕುರಿತು ಸದ್ಯ ಸುಳ್ಯ ಅಂಬಟಡ್ಕದ 33/11 ಕೆವಿ ಸಬ್‌ಸ್ಟೇಷನ್‌ ಬಳಿಯಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ವತಿಯಿಂದ ಸುಳ್ಯದಲ್ಲಿ ನಿರ್ಮಾಣವಾಗುವ 110/33/11 ಕೆವಿ ವಿದ್ಯುತ್‌ ಸಬ್‌ ಸ್ಟೇಷನ್‌ ಮತ್ತು 110 ಕೆವಿ ಮಾಡಾವು-ಸುಳ್ಯ ವಿದ್ಯುತ್‌ ಪ್ರಸರಣ ಮಾರ್ಗದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದೆ.

ಶಂಕುಸ್ಥಾಪನೆ ಸಮಯದಲ್ಲಿ, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಹತ್ತು ವರ್ಷಗಳ ವಿದ್ಯುತ್ ಬೇಡಿಕೆ ಮುಂದಿರಿಸಿ 110 ಕೆವಿ ಸಬ್‌ಸ್ಟೇಷನ್‌ಗಳಿಗೆ ಮಂಜೂರಾತಿ ನೀಡಲಾಗಿತ್ತು. ಒಂದೂಕಾಲು ವರ್ಷದ ಹಿಂದೆ ಇಂಧನ ಸಚಿವರಾಗಿ ಸುಳ್ಯಕ್ಕೆ ಬಂದಾಗ ಸುಳ್ಯದ 110 ಕೆವಿ ಸಬ್‌ಸ್ಟೇಷನ್‌ ನಿರ್ಮಾಣ ದೊಡ್ಡ ಬೇಡಿಕೆಯಾಗಿತ್ತು. ಈ ಬಗ್ಗೆ ಹಲವಾರು ಬೇಡಿಕೆಗಳು, ಟೀಕೆಗಳು ಇತ್ತು. 110 ಕೆವಿ ಸಬ್‌ ಸ್ಟೇಷನ್‌ ಮಾಡಿಯೇ ಮಾಡುತ್ತೇವೆ ಎಂದು ಅಂದು ಮಾತು ಕೊಟ್ಟಿದ್ದೆ. ಸುಳ್ಯದ ಜನತೆಗೆ ಕೊಟ್ಟ ಆ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಸಚಿವ ಮತ್ತು ಜಿಲ್ಲಾಉಸ್ತುವಾರಿ ಸಚಿವ ವಿ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಅದಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಹತ್ತು ವರ್ಷಗಳ ವಿದ್ಯುತ್‌ ಬೇಡಿಕೆ ಮುಂದಿರಿಸಿ ಜಿಲ್ಲೆಯಲ್ಲಿ ಪ್ರಸ್ತಾವನೆಯಲ್ಲಿದ್ದ ಹನ್ನೊಂದು 110 ಕೆವಿ ಸಬ್‌ಸ್ಟೇಷನ್‌ಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ .

ಮತ್ತು ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಸಂಪಾಜೆ, ನಿಂತಿಕಲ್ಲು ಮತ್ತು ಚಾರ್ವಾಕ ಸೇರಿ 3 ಕಡೆ ಹೊಸ 33 ಕೆವಿ ವಿದ್ಯುತ್‌ ಸಬ್‌ಸ್ಟೇಷನ್‌ ನಿರ್ಮಿಸಲಾಗುವುದು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿದ್ದ ಹಲವಾರು ವಿದ್ಯುತ್‌ ಯೋಜನೆಗಳಿಗೆ ಕಳೆದ ಒಂದೂವರೆ ವರ್ಷದಲ್ಲಿ ಮಂಜೂರಾತಿ ನೀಡಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 200 ಸಬ್‌ಸ್ಟೇಷನ್‌ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು .
ಇದೀಗ ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಪರಿಹಾರವಾಗಿದ್ದು. ಅಲ್ಲದೆ ಕುಮ್ಕಿ ಜಮೀನಿನಲ್ಲಿ ಕೃಷಿ ಮಾಡಲು 30 ವರ್ಷ ಗುತ್ತಿಗೆ ನೀಡಲು ಸರಕಾರ ನಿರ್ಧರಿಸಿದೆ ಎಂದು ಮಾಹಿತಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ತಹಸೀಲ್ದಾರ್‌ ಅನಿತಾಲಕ್ಷಿ , ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ಮೆಸ್ಕಾಂ ಮುಖ್ಯ ಎಂಜಿನಿಯರ್‌ ಪುಷ್ಪಾ, ಅಧೀಕ್ಷಕ ಎಂಜಿನಿಯರ್‌ ಕೃಷ್ಣರಾಜ್‌, ಕೆಪಿಟಿಸಿಎಲ್‌ ಮುಖ್ಯ ಎಂಜಿನಿಯರ್‌ ಮಂಜುನಾಥ ಶ್ಯಾನುಭೋಗ್‌, ಅಧೀಕ್ಷಕ ಎಂಜಿನಿಯರ್‌ ಉಮೇಶ್‌ ಉಪಸ್ಥಿತರಿದ್ದರು.

ಕೆಪಿಟಿಸಿಎಲ್‌ ಅಧೀಕ್ಷಕ ಎಂಜಿನಿಯರ್‌ ರವಿಕಾಂತ್‌ ಆರ್‌ ಕಾಮತ್‌ ಸ್ವಾಗತಿಸಿದರು. ಕೆಪಿಟಿಸಿಎಲ್‌ ಬೃಹತ್‌ ಕಾಮಗಾರಿ ವಿಭಾಗದ ಕಾರ‍್ಯನಿರ್ವಾಹಕ ಎಂಜಿನಿಯರ್‌ ಗಂಗಾಧರ ಕೆ ವಂದಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್‌ ರೈ ಕೆಡೆಂಜಿ ಕಾಧಿರ್ಯಕ್ರಮ ನಿರೂಪಿಸಿದರು. ಸಚಿವರಾದ ಸುನಿಲ್‌ ಕುಮಾರ್‌ ಹಾಗೂ ಎಸ್‌ ಅಂಗಾರ ಅವರನ್ನು ಕೆಪಿಟಿಸಿಎಲ್‌ ಹಾಗೂ ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್‌ ಅಂಗಾರ ಮಾತನಾಡಿ, ಎಲ್ಲಾ ಸವಾಲು ಹಾಗೂ ಟೀಕೆಗಳನ್ನು ಎದುರಿಸಿ 110 ಕೆವಿ ಸಬ್‌ಸ್ಟೇಷನ್‌ ಕಾಮಗಾರಿ ಅನುಷ್ಠಾನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ. ಅರಣ್ಯ ಭೂಮಿ ದೊರೆಯುವುದು ದೊಡ್ಡ ಸಮಸ್ಯೆಯಾಗಿತ್ತು. ನಮ್ಮ ಜಿಲ್ಲೆಯವರೇ ಅರಣ್ಯ ಸಚಿವರಾಗಿದ್ದರೂ ಅರಣ್ಯ ಸಮಸ್ಯೆ ಪರಿಹರಿಸಿಲ್ಲ. ಸಮಸ್ಯೆ ಪರಿಹರಿಸಿದ ಕ್ರೆಡಿಟ್‌ ಅಂಗಾರರಿಗೆ ಸಿಗುತ್ತದೆ ಎಂಬ ಕಾರಣದಿಂದ ಆ ಸಮಸ್ಯೆ ಪರಿಹರಿಸಿಲ್ಲ ಎಂದರು.

ಒಟ್ಟಿನಲ್ಲಿ ಸುಳ್ಯದ ಜನತೆ ಮುಂದಿರಿಸಿದ ಎಲ್ಲ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತೇವೆ ಎಂದು ಈ ಮೂಲಕ ಭರವಸೆ ನೀಡಲಾಗಿದೆ.

Leave A Reply

Your email address will not be published.