PM Modi to visit Bandipur Tiger Reserve: ಏಪ್ರಿಲ್‌ 9ರಂದು ಬಂಡೀಪುರ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಸಫಾರಿ, ಭರದಿಂದ ಸಾಗಿದೆ ಸಿದ್ಧತೆ!

Bandipur Tiger Reserve : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election 2023) ಹತ್ತಿರಾಗುತ್ತಿದ್ದಂತೆ ಕರ್ನಾಟಕದತ್ತ ಪದೇ ಪದೇ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಈಗಾಗಲೇ ಆರು ಬಾರಿ ರಾಜ್ಯಕ್ಕೆ ಬಂದಿದ್ದು, ಇದೀಗ ಏಳನೇ ಬಾರಿಗೆ ಮತ್ತೊಮ್ಮೆ ರಾಜ್ಯಕ್ಕೆ ಬರಲು ರೆಡಿಯಾಗಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ಮೋದಿ ಅವರು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ(Bandipura National Park)ಭೇಟಿ ನೀಡಿ ಸಫಾರಿ ನಡೆಸಲಿದ್ದಾರೆ.

ಹೌದು,ಏಪ್ರಿಲ್(April) 9ರಂದು ಮೈಸೂರಿನಲ್ಲಿ ಪ್ರಾಜೆಕ್ಟ್ ಟೈಗರ್‌ ಸುವರ್ಣ ಮಹೋತ್ಸವದ ಸಮಾರಂಭಕ್ಕೆ ಆಗಮಿಸುತ್ತಿರೋ ಪ್ರಧಾನಿ ಅವರು, ಕಾರ್ಯಕ್ರಮದ ಬಳಿಕ ದೇಶದ ಪ್ರಸಿದ್ಧ ಬಂಡೀಪುರಕ್ಕೆ ಭೇಟಿ ನೀಡಿ ಸಫಾರಿ(Bandipur Tiger Reserve) ಕೈಗೊಳ್ಳಲಿದ್ದಾರೆ. ಮೈಸೂರಿನಿಂದ ಕಾರ್ಯಕ್ರಮ ಮುಗಿಸಿದ ಬಳಿಕ ಹೆಲಿಕಾಪ್ಟರ್‌ನಲ್ಲಿ ನೇರವಾಗಿ ಬಂಡೀಪುರಕ್ಕೆ ಪ್ರಧಾನಿ ಮೋದಿ ಬರಲಿದ್ದು ಬಂಡೀಪುರ ಅರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೂ ಸಾಕಷ್ಟು ತಯಾರಿಯನ್ನು ನಡೆಸುತ್ತಿದ್ದು ಬಂಡೀಪುರಕ್ಕೆ ಹೋಗುವ ಮಾರ್ಗದ ಮೇಲುಕಾಮನಹಳ್ಳಿ ಬಳಿಯ ಸಫಾರಿ ಕೇಂದ್ರದ ಬಳಿ ಹೆಲಿಪ್ಯಾಡ್‌ ಮಾಡಲಾಗುತ್ತಿದೆ. ಹೆದ್ದಾರಿಯನ್ನು ದುರಸ್ತಿ ಮಾಡಲಾಗುತ್ತಿದೆ. ಈ ಸಂಬಂಧ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ಕುಮಾರ್‌(D. P Ramesh Kumar) ಮಾತನಾಡಿದ್ದು, ಪ್ರಧಾನಿ ಬಂಡೀಪುರಕ್ಕೆ ಭೇಟಿ ಕೊಡುವ ಸಾಧ್ಯತೆಯಿದೆ. ಈ ಕಾರಣದಿಂದ ಅರಣ್ಯ ಇಲಾಖೆ ತಯಾರಿ ನಡೆಸಿದೆ ಎಂದಿದ್ದಾರೆ. ಅಲ್ಲದೆ ಪ್ರಧಾನಿ ಭೇಟಿಯ ವೇಳೆ ಓಂಕಾರ ವಲಯದಂಚಿನ ರೈತರ ಜಮೀನಿನಲ್ಲಿ ವಿದ್ಯುತ್‌ ತಗುಲಿ ನಿತ್ರಾಣಗೊಂಡ ಆನೆಯ ಜೀವ ಉಳಿಸಿದ ಸಿಬ್ಬಂದಿಗೆ ಸ್ಮರಣಿಕೆ ಕೊಡುವುದು ಮತ್ತು ಇನ್ನಿತರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದ ಗಡಿ ಹೊಂದಿದೆ. 1973 ರಲ್ಲಿ ಹುಲಿ ಯೋಜನೆ ಘೋಷಿಸಿದ ವೇಳೆ ಕೇವಲ ಬಂಡೀಪುರದಲ್ಲಿ ಕೇವಲ 10 ರಿಂದ 15 ಹುಲಿಗಳಿದ್ದವು. ಆದರೀಗ ಹುಲಿಗಳ ಸಂಖ್ಯೆ 150 ದಾಟಿದೆ. ದೇಶದ ಪ್ರಧಾನಿ ಮೋದಿ ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಸುವುದು ಒಂದು ಅವಿಸ್ಮರಣೀಯ ಕ್ಷಣವಾಗಲಿದೆ.

ದೇಶದ 9 ಹುಲಿ ಯೋಜನೆಗಳ ಪೈಕಿ ಬಂಡೀಪುರ ಹುಲಿ ಯೋಜನೆ ದೇಶದಲ್ಲೇ ಮೊದಲ ಬಾರಿಗೆ ಘೋಷಣೆಯಾಗಿತ್ತು. ಬಂಡೀಪುರವನ್ನು 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿ ಮೀಸಲು ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದೆ. ಈ ಉದ್ಯಾನವನವು ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆ ತಾಲೂಕಿನಲ್ಲಿ ಇದ್ದು, ಮೈಸೂರು ನಗರದಿಂದ 80 ಕಿಲೋಮೀಟರ್ ದೂರದಲ್ಲಿ ಊಟಿಯ ಪ್ರಮುಖ ಪ್ರವಾಸಿ ತಾಣವಾಗಿದೆ. ಹೀಗಾಗಿ ಇಲ್ಲಿಗೆ ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಉದ್ಯಾನವು 874 ಚದರ ಕಿಲೋ ಮೀಟರ್ ಪ್ರದೇಶವನ್ನು ಹೊಂದಿದೆ.

ಕಳೆದ ವಾರ ಅಂದ್ರೆ ಮಾರ್ಚ್ 16ರಂದು ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇ ಸೇರಿದಂತೆ ಒಟ್ಟು 16,000 ಕೋಟಿ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಿಸಿದ್ದರು. ಆ ಬಳಿಕ ಮೋದಿ ಅವರು ರಾಜ್ಯಕ್ಕೆ ಬಂದಿರಲಿಲ್ಲ. ಇದೀಗ ರಾಜ್ಯದಲ್ಲಿ ಚುನಾವಣೆ ಘೋಷಣೆ ಆದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿದ್ದು, ಚುನಾವಣೆಯೂ ಹತ್ತಿರದಲ್ಲೇ ಇರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಬಂಡೀಪುರ ಸಫಾರಿ ಭೇಟಿ ಯಾವ ರೀತಿ ಕರ್ನಾಟಕದ ಜನರನ್ನು ಮರುಳು ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Kim Jong-un : ನಿಲ್ಲದ ಕಿಮ್‌ ಜಾಂಗ್‌ ಕ್ರೌರ್ಯ, ಅಂಗವಿಕಲರಿಗೆ ವಿಷವುಣಿಸಿ, ಗರ್ಭಿಣಿ, ಸಲಿಂಗಿಗಳಿಗೆ ನೇಣಿಗೇರಿಸುತ್ತಾನೆ ಈ ಸರ್ವಾಧಿಕಾರಿ, ಯಾಕೆ ಗೊತ್ತಾ?

Leave A Reply

Your email address will not be published.