Vehicle Scrappage Policy: ವಾಹನಗಳ ಗುಜರಿ ನೀತಿ ಸದ್ಯಕ್ಕೆ ಜಾರಿಯಾಗುತ್ತಿಲ್ಲ ; ಕಾರಣ ಇಲ್ಲಿದೆ

Vehicle Scrappage Policy : ವಾಹನಗಳ ಗುಜರಿ ನೀತಿಯು (Vehicle Scrappage Policy) ಏಪ್ರಿಲ್ 1 ರಿಂದ ಜಾರಿಗೆ ಬರಬೇಕಿತ್ತು. ಕೇಂದ್ರ ಸರಕಾರವು 2021ರ ಬಜೆಟ್‌ನಲ್ಲೇ (budget) ಈ ನೀತಿಯನ್ನು ಘೋಷಿಸಿದೆ. ಆದರೆ, ಇದು ಸದ್ಯಕ್ಕೆ ಜಾರಿಯಾಗುತ್ತಿಲ್ಲ‌. ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್‌ ನೀತಿಯನ್ನು ಜಾರಿಗೆ ತಂದಿದ್ದು, ಇದರ ಅನುಷ್ಠಾನಕ್ಕೆ ಅಗತ್ಯವಿರುವ ಪೂರ್ವ ಸಿದ್ಧತೆಗಳೇ ಪೂರ್ಣಗೊಂಡಿಲ್ಲ. ಇನ್ನೂ ಕೂಡ ಆರ್‌ವಿಎಸ್‌ಎಫ್‌ (RVSF) ಕೇಂದ್ರಗಳು ಆರಂಭವಾಗಿಲ್ಲ. ಹಾಗಾಗಿ ವಾಹನಗಳ ಗುಜರಿ ನೀತಿ ಜಾರಿ ಸದ್ಯಕ್ಕಿಲ್ಲ ಎಂದು ಹೇಳಲಾಗಿದೆ.

ಕೇಂದ್ರ ಸರಕಾರ (central government), ರಾಜ್ಯ ಸರಕಾರ (state government), ರಸ್ತೆ ಸಾರಿಗೆ ನಿಗಮಗಳು, ನಗರಸಭೆ, ಪುರಸಭೆ, ಪಂಚಾಯಿತಿ, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಅಧೀನದ ಸಾರ್ವಜನಿಕ ವಲಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು ಹೊಂದಿರುವ 15 ವರ್ಷ ಮೀರಿದ ವಾಹನಗಳನ್ನು ಏಪ್ರಿಲ್‌ 1ರಿಂದ ಕಡ್ಡಾಯವಾಗಿ ನಾಶಪಡಿಸಬೇಕು ಎಂದು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಸಾರಿಗೆ ಇಲಾಖೆಯು ನೋಂದಾಯಿತ ವಾಹನಗಳ ಗುಜರಿ ಕೇಂದ್ರಗಳನ್ನೇ (ಆರ್‌ವಿಎಸ್‌ಎಫ್‌) ತೆರೆದಿಲ್ಲ ಎಂದು ತಿಳಿದುಬಂದಿದೆ.

15 ವರ್ಷ ಮೀರಿದ ವಾಹನಗಳನ್ನು ಗುಜರಿಗೆ ಹಾಕಲು, ಸಾರಿಗೆ ಇಲಾಖೆಯು ಗುಜರಿ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನಿಸಿದ್ದು, ಕೇವಲ ಎರಡು ಕಂಪನಿಗಳು ಮಾತ್ರ ಮುಂದೆ ಬಂದಿವೆ. ಆ ಎರಡು ಕಂಪನಿಗಳು ಬೆಂಗಳೂರಿನಲ್ಲಿ ಮಾತ್ರ ಆರ್‌ವಿಎಸ್‌ಎಫ್‌ ಕೇಂದ್ರಗಳನ್ನು ತೆರೆಯಲು ಬಯಸುತ್ತಿವೆ. ಶೀಘ್ರದಲ್ಲೇ ಈ ಕಂಪನಿಗಳಿಗೆ ಅನುಮತಿ ನೀಡಲಾಗುವುದು. ಆನಂತರ ಉಳಿದೆಡೆಯೂ ಕೇಂದ್ರಗಳನ್ನು ಆರಂಭಿಸಲು ಅರ್ಜಿ ಕರೆಯಲಾಗುವುದು ಎಂದು ಸಾರಿಗೆ ಇಲಾಖೆಯ ಆಯುಕ್ತ ಸಿದ್ದರಾಮಪ್ಪ ಹೇಳಿದ್ದಾರೆ.

ವಾಹನಗಳ ಗುಜರಿ ನೀತಿ (Vehicle Scrappage Policy) ಪ್ರಕಾರ, 15 ವರ್ಷ ಮೀರಿದ ಎಲ್ಲಾ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವಲ್ಲ. ಚಾಲನೆ ಮಾಡಲು ಮಾಲೀಕರು ಬಯಸಿದರೆ ವರ್ಷಕ್ಕೊಮ್ಮೆ ಯೋಗ್ಯತಾ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣಪತ್ರ (ಎಫ್‌ಸಿ) ಪಡೆಯಬೇಕಾಗುತ್ತದೆ. ರಸ್ತೆಯಲ್ಲಿ ಸಂಚರಿಸಲು ವಾಹನ ಯೋಗ್ಯವಾಗಿದ್ದರೂ ಎಫ್‌ಸಿಗೆ ನಿಗದಿಪಡಿಸಿರುವ ಸಾಮಾನ್ಯ ಶುಲ್ಕದ ಜತೆಗೆ ಹೆಚ್ಚುವರಿಯಾಗಿ ಹಸಿರು ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ. ಹಸಿರು ತೆರಿಗೆ ಪಾವತಿಸಿ ಈ ವಾಹನಗಳನ್ನು ಬಳಸಬಹುದು. ಖಾಸಗಿ ಮಾಲೀಕರು ಸ್ವಯಂಪ್ರೇರಿತವಾಗಿ ಬಂದಲ್ಲಿ ಮಾತ್ರ ವಾಹನಗಳನ್ನು ಸ್ಕ್ರ್ಯಾಪ್‌ ಮಾಡಲಾಗುವುದು. 15 ವರ್ಷ ಮೀರಿದ ವಾಹನಗಳನ್ನು ಬಳಸಲು ಹಸಿರು ತೆರಿಗೆಯು ವಾಹನಗಳ ಮಾಲೀಕರಿಗೆ ಪ್ರತಿವರ್ಷ ಇರುತ್ತದೆ.

15 ವರ್ಷ ಮೀರಿದ ಸಾರಿಗೆ ವಾಹನಗಳಿಗೆ ಪ್ರತಿ ವರ್ಷವೂ ಎಫ್‌ಸಿ ಮಾಡಿಕೊಡಲಾಗುತ್ತಿದೆ. 15 ವರ್ಷ ಪೂರ್ಣಗೊಂಡ ಸಾರಿಗೇತರ ವಾಹನಗಳಿಗೆ ಪ್ರತಿ 5 ವರ್ಷಕ್ಕೊಮ್ಮೆ ಎಫ್‌ಸಿ ನೀಡಲಾಗುತ್ತಿದೆ. ಶಾಲಾ ವಾಹನಗಳಿಗೆ ಮಾತ್ರ ಎಫ್‌ಸಿ ಮಾಡಿಕೊಡುತ್ತಿಲ್ಲ. ಆದರೆ, ಈ ವಾಹನಗಳನ್ನು ಶಾಲಾ ಮಕ್ಕಳನ್ನು ಕರೆದೊಯ್ಯುವುದಕ್ಕೆ ಹೊರತುಪಡಿಸಿ ಇನ್ನಿತರೆ ಉದ್ದೇಶಕ್ಕೆ ಉಪಯೋಗಿಸಲು ಪರವಾನಗಿ ನೀಡಲಾಗುತ್ತಿದೆ ಎನ್ನಲಾಗಿದೆ.

15 ವರ್ಷ ಹಳೆಯದಾದ ವಾಹನಗಳು ಅಥವಾ ಚಾಲನೆಗೆ ಯೋಗ್ಯವಿಲ್ಲದ 15 ವರ್ಷದೊಳಗಿನ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಲು ಈ ನೀತಿಯಲ್ಲಿಅವಕಾಶ ಕಲ್ಪಿಸಲಾಗಿದೆ. ವಾಹನಗಳ ಮಾಲೀಕರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೆ, ಅವುಗಳನ್ನು ಯೋಗ್ಯತಾ ಪರೀಕ್ಷೆಗೆ ಒಳಪಡಿಸಿ ಗುಜರಿಗೆ ಹಾಕಲು ಅನುಮತಿ ನೀಡಲಾಗುತ್ತದೆ. ಹೀಗೆ ಗುಜರಿಗೆ ಹಾಕುವ ಮಾಲೀಕರಿಗೆ ಪ್ರಮಾಣಪತ್ರವನ್ನೂ ಸಾರಿಗೆ ಇಲಾಖೆ ನೀಡುತ್ತದೆ.

ಇನ್ನು ವಾಹನಗಳು ಸರಿಯಾದ ಸ್ಥಿತಿಯಲ್ಲಿ ಇದೆಯಾ? ಎಂಬುದನ್ನು ಪರಿಶೀಲಿಸಲು ಸಂಪೂರ್ಣ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳನ್ನು (ಎಫ್‌ಎಎಫ್‌ಟಿಸಿ) ಸ್ಥಾಪಿಸಬೇಕಿದೆ. ಸದ್ಯ ಬೆಂಗಳೂರಿನ ಪೀಣ್ಯ, ಮೈಸೂರು ಮತ್ತು ಧಾರವಾಡದಲ್ಲಷ್ಟೇ ಈ ಕೇಂದ್ರಗಳಿವೆ. ಇಲಾಖೆಯು ರಾಜ್ಯಾದ್ಯಂತ ಹೊಸದಾಗಿ 10 ಕೇಂದ್ರಗಳನ್ನು ತೆರೆಯಲು ಅನುಮತಿ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಈವರೆಗೆ ಸರಕಾರದಿಂದ ಯಾವುದೇ ಅನುಮೋದನೆ ಸಿಕ್ಕಿಲ್ಲ ಎನ್ನಲಾಗಿದೆ.

ಮಹಾನಗರದಲ್ಲಿ ಫೆಬ್ರವರಿ ಅಂತ್ಯದ ವೇಳೆಗೆ ನೋಂದಣಿಯಾಗಿರುವ ಒಟ್ಟು ವಾಹನಗಳು 1,08,57,848 ಆಗಿದೆ. ರಾಜ್ಯದಲ್ಲಿ 2.97 ಕೋಟಿ ವಾಹನಗಳಿವೆ. ಒಟ್ಟಾರೆ 80 ಲಕ್ಷಕ್ಕೂ ಹೆಚ್ಚು ವಾಹನಗಳು ಗುಜರಿ ಸೇರುವುದಕ್ಕೆ ಅರ್ಹವಾಗಿವೆ. ನಗರದಲ್ಲಿ 1.30 ಕೋಟಿ ಜನಸಂಖ್ಯೆಯಿದ್ದು, ಬೆಂಗಳೂರಿನಲ್ಲಿ (Bengaluru) ವಾಹನಗಳ ಸಂಖ್ಯೆ 1.08 ಕೋಟಿ ಮೀರಿದೆ. ಇದರಲ್ಲಿ 15 ವರ್ಷ ಮೀರಿದ ವಾಹನಗಳು 29 ಲಕ್ಷ ಇವೆ. ಇದರಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಜಾಸ್ತಿಯಾಗುತ್ತಿದೆ. ಇದನ್ನು ನಿಯಂತ್ರಿಸಲು ಗುಜರಿ ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ನೋಂದಣಿಯಾಗಿ 8 ವರ್ಷ ಪೂರೈಸಿದ ಸಾರಿಗೆ ವಾಹನಗಳನ್ನು ಆರ್‌ವಿಎಸ್‌ಎಫ್‌ ಕೇಂದ್ರಗಳಲ್ಲಿ ನಾಶಪಡಿಸಿ ಸೂಕ್ತ ಪ್ರಮಾಣಪತ್ರ ಒದಗಿಸಿದಲ್ಲಿ, ಹೊಸ ವಾಹನಗಳ ನೋಂದಣಿ ಸಮಯದಲ್ಲಿ ಹಳೆಯ ವಾಹನಕ್ಕೆ ಪಾವತಿಸಿದ 8 ವರ್ಷಗಳ (32 ತ್ರೈಮಾಸಿಕ) ಕಾಲ ತೆರಿಗೆ ಮೊತ್ತದ ಶೇ 15ರಷ್ಟು ತೆರಿಗೆ ವಿನಾಯಿತಿಯನ್ನು ಹೊಸ ವಾಹನದ ಮೇಲೆ ನೀಡಲಾಗುತ್ತದೆ. ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಆರ್‌ವಿಎಸ್‌ಎಫ್‌ ಕೇಂದ್ರಗಳಲ್ಲಿ ನಾಶಪಡಿಸಿ, ಸೂಕ್ತ ಪ್ರಮಾಣಪತ್ರ ನೀಡಿದರೆ ವಾಹನ ನೋಂದಣಿ ಸಮಯದಲ್ಲಿ ಸಾರಿಗೇತರ ಹಳೆಯ ವಾಹನಕ್ಕೆ ಪಾವತಿಸಿದ ತೆರಿಗೆಯ ಶೇ. 25ರಷ್ಟು ಮೊತ್ತದ ತೆರಿಗೆ ವಿನಾಯಿತಿಯನ್ನು ಹೊಸ ವಾಹನದ ಮೇಲೆ ನೀಡಲಾಗುತ್ತದೆ.

Leave A Reply

Your email address will not be published.