ಗಡಿ ದಾಟಿ ಬಂದ ಪ್ರಿಯತಮೆಯನ್ನು ಪಾಕ್ ಗೆ ಕಳುಹಿಸಿದ ಪೊಲೀಸರು ! ಭಾರದ ಹೃದಯದಿಂದ ತವರು ಮನೆ ಸೇರಿದ ಯುವತಿ, ಮಿಡಿದ ನೆಟ್ಟಿಗರು!

India – Pakistan Love  : ಪ್ರೀತಿ ಕುರುಡು ಎಂಬ ಮಾತಿನಂತೆ ಅದೆಷ್ಟೋ ಮಂದಿ ಮನೆಯವರ ವಿರೋಧದ ನಡುವೆ ಮದುವೆಯಾದ ಪ್ರಕರಣಗಳನ್ನು ನಾವು ನೋಡಿರುತ್ತೇವೆ. ನೈಜ ಪ್ರೀತಿ ಬಣ್ಣ ಧರ್ಮದ ಎಲ್ಲೆಯ ಗಡಿ ದಾಟಿದ್ದು ಎಂದು ನಿರೂಪಿಸಿ ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಪ್ರೀತಿ(Love) ಪ್ರೇಮ ಪ್ರಣಯ ಎಂದು ನಾಲ್ಕು ದಿನ ಅಲೆದಾಡಿ ಮತ್ತೆ ನಾನೊಂದು ತೀರ ನೀನೊಂದು ತೀರ ಎಂಬವರು ಕೂಡ ಈ ನಡುವೆ ಇದ್ದಾರೆ ಎನ್ನೋದು ಅಷ್ಟೇ ಸತ್ಯ. ಈ ನಡುವೆ ತಾನು ಪ್ರೀತಿಸಿದ ಪ್ರಿಯಕರನ ಅಗಲಿ ಇರಲಾಗದೆ ಪಾಕ್ ನಿಂದ ಭಾರತಕ್ಕೆ ಬಂದ ಯುವತಿಯನ್ನು ಖಾಕಿ ಪಡೆ ಆಕೆಯ ತವರಿಗೆ ವಾಪಸ್ ಕಳುಹಿಸಿದ ಘಟನೆ ವರದಿಯಾಗಿದೆ.

ಪ್ರೀತಿ( Love)ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಮಾತಿನಂತೆ ಪಾಕ್ ಗಡಿದಾಟಿ ಭಾರತಕ್ಕೆ ( India Pakistan Love) ಎಂಟ್ರಿ ಕೊಟ್ಟಿದ್ದ ಮಹಿಳೆಯ ಹೆಸರು ಇಕ್ರಾ ಜೀವನಿ (Iqra Jeewani). ಆನ್ಲೈನ್ ನಲ್ಲಿ ಲೂಡೋ ಗೇಮ್ ಆಡುವ ಹವ್ಯಾಸ ರೂಡಿಸಿಕೊಂಡಿದ್ದ ಈಕೆಗೆ , ಆಟ ಆಡುತ್ತಾ ಭಾರತದ ಉತ್ತರ ಪ್ರದೇಶ ಮೂಲದ 26 ವರ್ಷದ ಮುಲಾಯಂ ಸಿಂಗ್ ಎಂಬ ಯುವಕನ ಪರಿಚಯವಾಗಿದೆ. ಈ ಬಳಿಕ ಎಲ್ಲ ಲವ್ ಸ್ಟೋರಿಯಂತೆ ಸ್ನೇಹವಾಗಿ , ಸ್ನೇಹ ಪ್ರೇಮಾಂಕುರಕ್ಕೆ ಕಾರಣವಾಗಿದೆ. ಈ ಪ್ರೀತಿಯ ಕಹಾನಿಯಿಂದ ಪ್ರಿಯತಮನನ್ನು ಬಿಟ್ಟು ಬದುಕಲೇ ಸಾಧ್ಯವಿಲ್ಲ ಎಂಬಲ್ಲಿವರೆಗೆ ತಲುಪಿ, ಹೀಗಾಗಿ ತನ್ನ ತವರಾದ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬರಲು ಮುಂದಾಗಿದ್ದಾಳೆ.

ಪಾಕ್ ಗಡಿದಾಟಿ ಭಾರತಕ್ಕೆ ಎಂಟ್ರಿ ಕೊಡಲು ವೀಸಾ ಕೂಡ ಇಲ್ಲದೆ ಇರುವಾಗ ಭಾರತಕ್ಕೆ ಹೇಗೆ ಬರೋದು ಎಂಬ ಪ್ರಶ್ನೆ ಆಕೆಗೆ ಮೂಡಿತ್ತು. ಇದಕ್ಕೆ ಆಕೆಯ ಪ್ರಿಯತಮ ಮುಲಾಯಂ ನೇಪಾಳಕ್ಕೆ ಹೋಗಿ ಅಲ್ಲಿಂದ ಸನೋಲಿ ಗಡಿ (Sanoli border) ಮೂಲಕ ಅಕ್ರಮವಾಗಿ ಭಾರತದೊಳಗೆ ಬರಲು ಸಲಹೆ ನೀಡಿದ್ದಾನೆ. ಪ್ರೀತಿ ಕುರುಡು ಎಂಬ ಮಾತು ಇದಕ್ಕೆ ಹೇಳಿರಬಹುದೇನೋ!! ಪ್ರೀತಿಗಾಗಿ ಜೀವ ಬಿಡಲು ಕೂಡ ರೆಡಿ ಇರುವ ಎಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಅದೇ ರೀತಿ, ತನ್ನ ಪ್ರೀತಿಯನ್ನು ಅರಸುತ್ತಾ ಮಹಿಳೆ ಪಾಕಿಸ್ಥಾನದಿಂದ ನೇಪಾಳಕ್ಕೆ ತೆರಳಿದ್ದಾಳೆ.

ಸೆಪ್ಟೆಂಬರ್ 19 ರಂದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಇಕ್ರಾ ಜೀವನಿಯನ್ನು ನೇಪಾಳದಲ್ಲಿ ಮುಲಾಯಂ (Mulayam Singh) ಬರಮಾಡಿಕೊಂಡಿದ್ದಾನೆ. ಆ ಬಳಿಕ ಇಬ್ಬರು ಮದುವೆ ಎಂಬ ಬಂಧಕ್ಕೆ ಮುನ್ನುಡಿ ಬರೆದಿದ್ದು, ಒಂದು ವಾರ ಅಲ್ಲೇ ಕಾಲ ಕಳೆದಿದ್ದಾರೆ. ಆನಂತರ, ಇಬ್ಬರು ಇಂಡೋ ನೇಪಾಳ್ ಸನೋಲಿ ಬಾರ್ಡರ್‌ (Sanoli Border) ಮೂಲಕ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು, ಕೊನೆಗೆ ಬೆಂಗಳೂರಿಗೆ ಬಂದ ಈ ಲವ್ ಬರ್ಡ್ಸ್ ಗಳುಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ಇಕ್ರಾ ರವಾ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡು ಜೊತೆಯಾಗಿ ಜೀವಿಸಲು ಪ್ರಾರಂಭಿಸಿದ್ದಾರೆ. ಈ ನಡುವೆ ಇಕ್ರ ತಾಯಿಯ ಜೊತೆಗೆ ಸಂಪರ್ಕ ಇಟ್ಟುಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವಿಚಾರವನ್ನು ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಜೋಡಿ ಹಿಂದೂಗಳೆಂದು ಹೇಳಿಕೊಂಡು ಮನೆಯಲ್ಲಿ ನಮಾಜ್(Namaz) ಮಾಡುವುದನ್ನು ಗಮನಿಸಿದ ನೆರೆಮನೆಯವರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ, ಪೋಲೀಸರು ಇಬ್ಬರು ವಾಸವಿದ್ದ ಮನೆಗೆ ದೌಡಾಯಿಸಿ ವಿಚಾರಣೆ ನಡೆಸಿದ ಸಂದರ್ಭ ಇಕ್ರಾ ಪಾಕಿಸ್ತಾನದವಳು ಎಂಬ ಮಾಹಿತಿ ಆಕೆಯ ಪಾಕಿಸ್ಥಾನಿ ಪಾಸ್‌ಪೋರ್ಟ್ ಮೂಲಕ ಖಾಕಿ ಪಡೆಗೆ ಬೆಳಕಿಗೆ ಬಂದಿದೆ. ಕೇಂದ್ರ ಗುಪ್ತಚರ ಇಲಾಖೆ ಮಹಿಳೆ ಪಾಕಿಸ್ತಾನ ಮೂಲದವರು ಎಂದು ಪತ್ತೆ ಮಾಡಿ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.ಹೀಗಾಗಿ, ಕಾರ್ಯ ಪ್ರವೃತ್ತರಾದ ಖಾಕಿ ಪಡೆ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ ಹಾಗೂ ಮುಲಾಯಂ ಸಿಂಗ್‌ನನ್ನು ಜನವರಿ 23 ರಂದು ಬಂಧಿಸಿದ್ದಾರೆ.

ಆ ಬಳಿಕ ಯುವತಿಯನ್ನು ವಿಚಾರಣೆ ನಡೆಸಿದ ಸಂದರ್ಭ ರಾವಾ ಯಾದವ್ ಎಂಬ ಹೆಸರು ಬದಲಾಯಿಸಿಕೊಂಡು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಿಚಾರ ಬಯಲಾಗಿದೆ. ಹೀಗಾಗಿ, ಖಾಕಿ ಪಡೆ ಆಕೆಯನ್ನು ಬಂಧಿಸಿ ಅಮೃತಸರಕ್ಕೆ ಕರೆದೊಯ್ದು ಅಲ್ಲಿ ಆಕೆಯನ್ನು ಅಟರಿ ಬಾರ್ಡರ್ (Attari Border)ಮೂಲಕ ವಾಪಸ್ ಪಾಕಿಸ್ಥಾನಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರೀತಿಯನ್ನು ಅರಸುತ್ತಾ ಬಂದಿದ್ದ ಮಹಿಳೆ ಮರಳಿ ತನ್ನ ತವರಿಗೆ ಲಗ್ಗೆ ಇಡುವಂತಾಗಿದೆ.ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಮಹಿಳೆಯನ್ನು ತವರಿಗೆ ಕಳುಹಿಸಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲಿ ಆಕೆಯ ಸ್ಥಿತಿ ಹೇಗಿರಬಹುದು ಎಂದು ನೆಟ್ಟಿಗರು ಮಾನವೀಯ ನೆಲೆಗಟ್ಟಿನಲ್ಲಿ ಆಕೆಗೆ ಭಾರತದಲ್ಲೇ ಆಶ್ರಯ ಕಲ್ಪಿಸಬಹುದಿತ್ತು ಎಂದು ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.