ಸಿನಿಮೀಯ ಹಿನ್ನೆಲೆಯಲ್ಲಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯ | ನೆಟ್ಟಿಗರಿಂದ ಭಾರೀ ಪ್ರಶಂಸೆ!!
ಸಿನಿಮಾಗಳಲ್ಲಿ ತೋರಿಸುವಂತಹ ಘಟನೆಗಳು ಕೆಲವೊಮ್ಮೆ ನಮ್ಮ ಜೀವನದಲ್ಲೂ ಕೂಡ ಸಂಭವಿಸುತ್ತವೆ. ಆದರೆ ಇಂತಹ ಘಟನೆಗಳು ಜೀವನದಲ್ಲಿ ಘಟಿಸುವುದು ಅತ್ಯಂತ ವಿರಳವೆಂದೇ ಹೇಳಬಹುದು. ಆದರೂ ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಸಿನಿಮೀಯ ಮಾದರಿಯಲ್ಲಿ ಕಳ್ಳನನ್ನು ಹಿಡಿದ ಪೋಲೀಸರು, ಮನೆಗೆ ಕನ್ನ ಹಾಕಿದ ಕಳ್ಳರು, ಸಿನಿಮೀಯ ರೀತಿ ಮದುವೆಯಾದ ಪ್ರೇಯಸಿಯರು ಹೀಗೇ ಹಲವು ಸುದ್ದಿಗಳನ್ನ ಕೇಳಿರುತ್ತೇವೆ.
ಆದರೆ ಇಂದು ಬೆಂಗಳೂರಿನ ಐಕಿಯಾ ಮಾಲ್ ನಲ್ಲಿ ಇದೇ ರೀತಿ ಸಿನಿಮಾ ಮಾದರಿಯಲ್ಲಿ ನಡೆದ ಘಟನೆಯು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದೆ.
ಹೌದು!! ಬೆಂಗಳೂರು ನಗರದ ಐಕಿಯಾ ಮಾಲ್ ನಲ್ಲಿ ಶಾಪಿಂಗ್ ಮಾಡುವ ವೇಳೆ ವ್ಯಕ್ತಿಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಆತ ನೆಲಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವೈದ್ಯರೊಬ್ಬರು ಕೂಡಲೇ ವ್ಯಕ್ತಿಯ ಬಳಿಗೆ ತೆರಳಿ ಎದೆನೋವು ಕಾಣಿಸಿಕೊಂಡಿದೆ ಎಂಬುದನ್ನು ಅರಿತು, ಅವರ ಎದೆಯನ್ನು ಜೋರಾಗಿ ಒತ್ತಿ, ತಿಕ್ಕುವುದರ ಮೂಲಕ ಅವರಿಗೆ ಮರು ಜೀವ ನೀಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗುತ್ತಿದೆ ಹಾಗೂ ವೈದ್ಯರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ವೈದ್ಯರೊಂದಿಗೆ ಅವರ ಮಗ ಕೂಡ ಜೊತೆಯಲ್ಲಿ ಇದ್ದ ಕಾರಣ ಅವರೇ ತಮ್ಮ ತಂದೆಯ ಈ ಕಾರ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಬಳಿಕ ಅದನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ‘ಇಂತಹ ಒಬ್ಬ ವೈದ್ಯನ ಮಗನಾಗಿ ಹುಟ್ಟಿರುವುದು ನನ್ನ ಪುಣ್ಯ, ಇವರ ಮಗ ನಾನು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ’ ಎಂದು ಹೇಳಿದ್ದಾರೆ. ಬಳಿಕ ನಡೆದ ಘಟನೆಯ ವಿವರವನ್ನು ಹಂಚಿಕೊಂಡಿದ್ದಾರೆ.