ಹಾಸ್ಟೆಲ್‌ ನಲ್ಲೇ ನೇಣುಬಿಗಿದುಕೊಂಡು ವಿದ್ಯಾರ್ಥಿ ಸಾವು | ಸಾವಿಗೆ ಕಾರಣ…

ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು ತಮ್ಮ ಮಕ್ಕಳನ್ನು ಸಹ ತಪ್ಪು ದಾರಿಯಲ್ಲೇ ಬೆಳೆಸುತ್ತಿದ್ದಾರೆ ಎನ್ನುವುದು ಎಷ್ಟೋ ನಿದರ್ಶನಗಳಿಂದ ಸಾಬೀತು ಆಗಿರುವುದು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಎಷ್ಟು ವೆಚ್ಚವಾದರೂ ಪರವಾಗಿಲ್ಲ ನನ್ನ ಮಗ ಅಥವಾ ಮಗಳು ಹೀಗೆಯೇ ಇರಬೇಕು, ಇಂತಹ ಹುದ್ದೆಗೆ ಸೇರಬೇಕು ಎಂದು ಒತ್ತಡ ಹೇರುತ್ತಾರೆ.

ಹೆತ್ತವರ ಒತ್ತಡದಿಂದ ಎಂಬ ಕಾರಣದಿಂದಲೋ ಏನೋ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿಯ ಮೆಟ್ರಿಕ್‌ ನಂತರ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಯೊರ್ವ ನೇಣು ಹಾಕಿಕೊಂಡ ಘಟನೆ ಮಂಗಳವಾರ ನಡೆದಿದೆ.

ಸವದತ್ತಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಪರಶುರಾಮ ಯಲ್ಲಪ್ಪ ಕೊನೇರಿ (18) ಎಂಬ ವಿದ್ಯಾರ್ಥಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದನು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ತನ್ನ ಕೊಠಡಿಯ ಬಾಗಿಲು ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತನೊಂದಿಗೆ 8 ಜನ ವಿದ್ಯಾರ್ಥಿಗಳು ಒಂದೇ ಕೋಣೆಯಲ್ಲಿ ಇದ್ದರು. ಆದರೆ, ಎಲ್ಲರೂ ಕಾಲೇಜಿಗೆ ಹೋದ ಸಂದರ್ಭದಲ್ಲಿ ನೇಣು ಹಾಕಿಕೊಂಡಿರುವ ಮಾಹಿತಿ ದೊರೆತಿದೆ.

ನನಗೆ ಕಲಾವಿಭಾಗದ ಆಸಕ್ತಿ ಇದೆ. ವಾಣಿಜ್ಯ ವಿಭಾಗದಲ್ಲಿ ಆಸಕ್ತಿ ಇಲ್ಲದಿದ್ದರು ನಮ್ಮ ಪಾಲಕರು ವಾಣಿಜ್ಯ ವಿಭಾಗವನ್ನೇ ಕಲಿಯಲು ಹೇಳುತ್ತಿದ್ದಾರೆ ಎಂದು ಗೆಳೆಯರ ಮುಂದೆ ನೋವಿನಿಂದ ಹೇಳಿಕೊಳ್ಳುತ್ತಿದ್ದನಂತೆ. ಅಲ್ಲದೇ ಪ್ರಥಮ ಪಿಯುಸಿಯಲ್ಲಿ ಫೇಲ್‌ ಆಗಿ ನಂತರ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸ್‌ ಮಾಡಿದ್ದನಂತೆ. ಘಟನಾ ಸ್ಥಳಕ್ಕೆ ಸಿಪಿಐ ಉಳವಪ್ಪ ಸಾತೇನಹಳ್ಳಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಬಿ. ಯಮನೂರ ಭೇಟಿ ನೀಡಿ ಸಿಸಿಟಿವಿ ಪರಿಶೀಲಿಸಿ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ.

Leave A Reply

Your email address will not be published.