ಬರೋಬ್ಬರಿ 8 ವರ್ಷದಿಂದ ಯಾವುದೇ ಪತ್ರವನ್ನು ವಿತರಣೆ ಮಾಡದೆ ಮೂಟೆ ಕಟ್ಟಿ‌ ಇಟ್ಟ ಪೋಸ್ಟ್ ಮ್ಯಾನ್ ! ಈತನ ಈ ಕೃತ್ಯ ಈಗ ಬೆಳಕಿಗೆ ಬಂದ ಬಗೆ ಹೇಗೆ ?

ಪೋಸ್ಟ್ ಮ್ಯಾನ್ ಕೆಲಸ ಎಂದರೆ ಏನು? ಎಲ್ಲರಿಗೂ ಪತ್ರ ಹಂಚುವುದು.ಆದರೆ ಇಲ್ಲೊಬ್ಬ ಪೋಸ್ಟ್ ಮ್ಯಾನ್
ಕಳೆದ ಎಂಟು ವರ್ಷಗಳಿಂದ ಜನರಿಗೆ ಬಂದಿದ್ದ ಪೋಸ್ಟ್ ಗಳನ್ನು ಕೊಡೆದೆ ಮೂಟೆ ಕಟ್ಟಿ ಕಸಕ್ಕೆ ಎಸೆದಿದ್ದಾನೆ ಎಂದರೆ ನಂಬುತ್ತೀರಾ ? ಹೌದು, ನಿಜ.

ಗೌರಿಪುರ ಅಂಚೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೋಸ್ಟ್ ಮ್ಯಾನ್ ವಿನಯ್ ಎಂಬಾತ, ಗೌರಿಪುರ ಸೇರಿದಂತೆ ಅಂಚೆ ವ್ಯಾಪ್ತಿಯ ಬಸರಿಹಾಳ್ ಬೈಲಕ್ಕಾಪುರ ದೇವಲಾಪುರ ಮತ್ತು ಚಿಕ್ಕವಡ್ಡರಕಲ್ ಅಂಚೆ ವಿತರಿಸು ಕೆಲಸ ನಿರ್ವಹಿಸಬೇಕಿತ್ತು.

ಆದರೆ ಕಳೆದ ಎಂಟು ವರ್ಷಗಳಿಂದ ಸಂಬಂಧಪಟ್ಟವರಿಗೆ ತಲುಪಿಸಬೇಕಿದ್ದ ದಾಖಲೆ ಪತ್ರಗಳನ್ನ ವಿತರಿಸದೆ ಮೂಟೆ ಕಟ್ಟಿ ಊರಾಚೆ ಎಸೆದಿದ್ದಾನೆ. ಮಕ್ಕಳು ಆಟವಾಡುವಾಗ ಮೂಟೆ ಬಿಚ್ಚಿ ನೋಡಿದಾಗ ಈ ವಿಷಯ ಗೊತ್ತಾಗಿದೆ.

10 ವರ್ಷದ ಹಿಂದೆ ಗೌರಿಪುರ ಗ್ರಾಮಕ್ಕೆ ಕೆಲಸಕ್ಕೆ ಸೇರಿದ್ದ ಈತ ಆರಂಭದ 2 ವರ್ಷ ಮಾತ್ರ ಕೆಲಸವನ್ನ ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾನೆ. ಆನಂತರ ಎಂಟು ವರ್ಷಗಳಿಂದ ಯಾವುದೇ ಅಂಚೆಗಳನ್ನ ತಲುಪಿಸಿಲ್ಲ. 8 ವರ್ಷಗಳಿಂದ ಅಂಛೇ ಕಛೇರಿಗೆ ಅಲೆದಾಡಿದರೂ ಸಿಗದ ಕಾಗದ ಪತ್ರಗಳು ಈಗ ಮೂಟೆಯಲ್ಲಿ ಸಿಕ್ಕಿವೆ.

ನೂರಾರು ಜನರ ಆಧಾರ್ ಕಾರ್ಡ್ ಪಾನ್ ಕಾರ್ಡ್ ಮಾಸಾಶನ ಬ್ಯಾಂಕ್ ಪಾಸ್ ಬುಕ್ ಸರ್ಕಾರಿ ನೌಕರರ ಜಾಯಿನಿಂಗ್ ಲೆಟರ್ ಚಿನ್ನದ ಮೇಲಿನ ಸಾಲದ ಹರಾಜು ನೋಟಿಸ್ ಕಂಡು ಜನ ಗರಂ ಆಗಿದ್ದಾರೆ. ಇಷ್ಟು ವರ್ಷಗಳ ಕಾಲ ಜನರಿಂದ ವಿಶ್ವಾಸ ಉಳಿಸಿಕೊಂಡಿದ್ದ ಅಂಚೆ ಕಛೇರಿ ಇಂಥಹ ಪೋಸ್ಟ್ ಮ್ಯಾನ್ ನಿಂದಾಗಿ ತಲೆ ತಗಿಸುವಂತಾಗಿದೆ.

Leave A Reply

Your email address will not be published.