ದೇವರ ಹಾಡು ಹೇಳಲಿಲ್ಲ ಎಂದು ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಐವರ ಬಂಧನ!

ದೇವರ ಹಾಡನ್ನು ಹೇಳಲು ಹೇಳಲಿಲ್ಲ ಎಂದು ಯುವಕನ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುಮಾರಳ್ಳಿ ಗ್ರಾಮದಲ್ಲಿ ನಡೆದಿದೆ.

ಯುವಕ ಪರಿಶಿಷ್ಟಜಾತಿಗೆ ಸೇರಿದವನಾಗಿದ್ದು, ಈತನ ಮೇಲೆ ಈ ಹಲ್ಲೆ ನಡೆದಿದೆ. ಹಂಚಿನಳ್ಳಿ-ಕುಮಾರಳ್ಳಿ ಗ್ರಾಮದ ಎಚ್.ಸಿ.ನೀಲರಾಜು ಗಾಯಗೊಂಡಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಕುಮಾರಳ್ಳಿ ಗ್ರಾಮದ ಗುರಪ್ಪ ಲಜುಕುಮಾರ್, ಹರ್ಷ, ಕೃಷ್ಣ, ದರ್ಶನ್ ಎಂಬವರನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಕುಮಾರಳ್ಳಿ ಗ್ರಾಮದ ಶ್ರೀ ಭದ್ರಕಾಳಿ ಉತ್ಸವದಲ್ಲಿ ನೀಲರಾಜು ಕುಟುಂಬದ ಹಿರಿಯರು ದೇವರಹಾಡು ಹೇಳುತ್ತಿದ್ದರು. ನೀಲರಾಜು ದೇವರ ಕೆಲಸ ಮಾಡಲು ತೆರಳಿದ್ದರು. ಶನಿವಾರ ಮಧ್ಯರಾತ್ರಿ ಪೂಜೆ ನಡೆಯುತ್ತಿದ್ದ ಸಂದರ್ಭ ದೇವರ ಹಾಡು ಹೇಳುವಂತೆ ನೀಲರಾಜು ಅವರಿಗೆ ಕೆಲವರು ಒತ್ತಡ ಹಾಕಿದ್ದಾರೆ. ಆದರೆ ನನಗೆ ಹಾಡಲು ಬರುವುದಿಲ್ಲ ಎಂದು ಹೇಳಿದ ಕಾರಣಕ್ಕೆ ತೀವ್ರ ಹಲ್ಲೆ ನಡೆಸಿ, ದೊಣ್ಣೆಯಿಂದ ತಲೆ ಭಾಗಕ್ಕೆ ಹೊಡೆದು ಕೊಲ್ಲಲು ಪ್ರಯತ್ನಿಸಿದ್ದರು ಎಂದು ನೀಲರಾಜು ಅವರ ಸಹೋದರ ಎಚ್.ಸಿ.ಪ್ರಸನ್ನ ಸೋಮವಾರಪೇಟೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಡಿವೈಎಸ್‌ಪಿ ಶೈಲೇಂದ್ರ, ಇನ್ಸ್ ಪೆಕ್ಟರ್ ಮಹೇಶ್ ನೇತೃತ್ವದ ತಂಡ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

Leave A Reply

Your email address will not be published.