ಯುವಕನ ಅಟ್ಟಾಡಿಸಿ ಕತ್ತು ಕೊಯ್ದು ಕೊಲೆ ಮಾಡಿದ ದುಷ್ಕರ್ಮಿಗಳು

ಮಂಡ್ಯ : ಯುವಕನೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಅಟ್ಟಾಡಿಸಿ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಕಾರೇಕುರ ಗ್ರಾಮದ ಮಹದೇವಪ್ರಸಾದ್ ಪುತ್ರ ಸಾಗರ್ (29) ಎಂದು ಗುರುತಿಸಲಾಗಿದೆ.

ಕಾರೇಕುರ ಗ್ರಾಮಕ್ಕೆ ತೆರಳುವ ರಸ್ತೆ ಪಕ್ಕದ ತೋಟದ ಸಮೀಪ ಶುಕ್ರವಾರ ಬೆಳಗ್ಗೆ ಸಾಗರ್‌ನ ಶವ ಮಾರಾಕಾಸಗಳಿಂದ ಕೊಚ್ಚಿ ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿತ್ತು ಇದನ್ನು ಕಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಅನುಕೂಲಸ್ಥ ಕುಟುಂಬದವನಾದ ಸಾಗರ್ ತಮ್ಮ ಕೃಷಿ ಜಮೀನಿನ ಕೆಲಸದೊಂದಿಗೆ ಕೋಳಿ ಫಾರಂ ನಿರ್ವಹಣೆ ಮಾಡಿಕೊಂಡಿದ್ದರು.

ಗುರುವಾರ ಸಂಜೆ ಕಾರ‌್ಯನಿಮಿತ್ತ ಮನೆಯಿಂದ ಹೊರ ಹೋಗಿದ್ದು, ರಾತ್ರಿ 9.30ರ ಸಮಯದಲ್ಲಿ ಮನೆಗೆ ಬರುವುದಾಗಿ ದೂರವಾಣಿ ಕರೆ ಮಾಡಿ ತಿಳಿಸಿದ್ದರು
ಆದರೆ, ತಡರಾತ್ರಿಯಾದರೂ ಮಗ ಮನೆಗೆ ಬಾರದಿದ್ದನ್ನು ಕಂಡು ತಂದೆ ಹಾಗೂ ಪತ್ನಿ ಆತಂಕಗೊಂಡಿದ್ದರು. ಎಲ್ಲೋ ಹೊರಗೆ ಹೋಗಿರಬಹುದೆಂದು ತಿಳಿದು ಮಲಗಿದ್ದರು.

ಸುದ್ಧಿ ತಿಳಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಬಿಟ್ಟುಕೊಡಲಾಗಿದೆ.

ಕೊಲೆಯಾದ ಸಮೀಪ ಕೊಲೆಗೆ ಬಳಸಲಾಗಿದೆ ಎನ್ನಲಾದ ಮಾರಕಾಸ್ತ್ರ ಪತ್ತೆಯಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಅಪರ ಅಧೀಕ್ಷಕ ವೇಣುಗೋಪಾಲ್, ಡಿವೈಎಸ್ಪಿ ಸಂದೇಶ್‌ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಪುನೀತ್, ವಿವೇಕಾನಂದ, ಪಿಎಸ್‌ಐ ರೇಖಾ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave A Reply

Your email address will not be published.