ಕೀಟಲೆ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಶಾಲೆಯ ಮೇಲಿನ ಮಹಡಿಯಿಂದ ತಲೆ ಕೆಳಗಾಗಿ ನೇತಾಡಿಸಿದ ಮುಖ್ಯಶಿಕ್ಷಕ

ವಿದ್ಯಾರ್ಥಿಯೋರ್ವನನ್ನು ಶಾಲೆಯ ಮಹಡಿಯಿಂದ ಕಾಲು ಹಿಡಿದು ತಲೆ ಕೆಳಗಾಗಿ ನೇತಾಡಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದೆ.

ಈ ಪ್ರಕರಣದಲ್ಲಿ ಉತ್ತರಪ್ರದೇಶದ ಮಿರ್ಝಾಪುರ ಶಾಲೆಯೊಂದರ ಮುಖ್ಯೋಪಾಧ್ಯಾಯರನ್ನು ಪೊಲೀಸರು ಬಂಧಿಸಿದ್ದಾರೆ.

ಶಾಲೆಯಲ್ಲಿ ಮಧ್ಯಾಹ್ನದ ಊಟದ ವೇಳೆ ಬೇರೆ ಬೇರೆ ತರಗತಿಗಳ ವಿದ್ಯಾರ್ಥಿಗಳು ಆಟವಾಡುತ್ತಿದ್ದ ಸಂದರ್ಭ ವಿದ್ಯಾರ್ಥಿಯೋರ್ವನಿಗೆ ಕಚ್ಚಿರುವುದಕ್ಕೆ ಕ್ಷಮೆ ಕೋರದೇ ಇದ್ದರೆ ಕೆಳಗೆ ಹಾಕಲಾಗುವುದು ಎಂದು ಮುಖ್ಯಶಿಕ್ಷಕ ಮನೋಜ್ ವಿಶ್ವಕರ್ಮ ಎಂಬವರು ವಿದ್ಯಾರ್ಥಿ ಸೋನು ಯಾದವ್ ಎಂಬಾತನನ್ನು ಕಾಲು ಹಿಡಿದುಕೊಂಡು ತಲೆ ಕೆಳಗಾಗಿ ನೇತಾಡಿಸಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ಸೋನು ಯಾದವ್ ಇತರ ವಿದ್ಯಾರ್ಥಿಗೆ ಕಚ್ಚಿರುವುದಕ್ಕೆ ಆಕ್ರೋಶಿತರಾದ ಮುಖ್ಯಶಿಕ್ಷಕ ಮನೋಜ್ ವಿಶ್ವಕರ್ಮ 2ನೇ ತರಗತಿ ವಿದ್ಯಾರ್ಥಿ ಸೋನು ಯಾದವ್‌ ನನ್ನು ಕರೆದುಕೊಂಡು ಶಾಲೆಯ ಕಟ್ಟಡದ ಕೊನೆಯ ಮಹಡಿಗೆ ಹೋದರು. ಅಲ್ಲಿ ಆತನ ಕಾಲು ಹಿಡಿದು ತಲೆ ಕೆಳಗಾಗಿ ನೇತಾಡಿಸಿ, “ನೀನು ಕಚ್ಚಿದ ವಿದ್ಯಾರ್ಥಿಯಲ್ಲಿ ಕ್ಷಮೆ ಕೇಳದೇ ಇದ್ದರೆ ಕೆಳಗೆ ಹಾಕಲಾಗುವುದು’ ಎಂದು ಬೆದರಿಕೆ ಒಡ್ಡಿದ್ದರು. ಸೋನು ಯಾದವ್ ಗಟ್ಟಿಯಾಗಿ ಅಳುತ್ತಿರುವುದು ಕೇಳಿ ವಿದ್ಯಾರ್ಥಿಗಳ ಸಮೂಹ ಸೇರಿದ ಬಳಿಕ ಮನೋಜ್ ವಿಶ್ವಕರ್ಮ ಅವರು ಸೋನು ಯಾದವ್ ನನ್ನು ಬಿಟ್ಟಿದ್ದಾರೆ.

“ಮುಖ್ಯಶಿಕ್ಷಕ ಈ ರೀತಿ ಮಾಡಿರುವುದು ತಪ್ಪು. ಆದರೆ, ಅವರು ಪ್ರೀತಿಯ ಕಾರಣಕ್ಕೆ ಮಾಡಿದರು. ಆದರಿಂದ ಯಾವುದೇ ಸಮಸ್ಯೆ ನಮಗೆ ಇಲ್ಲ” ಎಂದು ಸೋನು ಯಾದವ್‌ನ ತಂದೆ ರಂಜಿತ್ ಯಾದವ್ ಹೇಳಿದ್ದಾರೆ.

“ಸೋನು ಯಾದವ್ ನನ್ನು ಸರಿಪಡಿಸುವಂತೆ ಆತನ ತಂದೆ ರಂಜಿತ್ ಯಾದವ್ ಹೇಳಿದ್ದರು” ಎಂದು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಬಂಧಿತರಾಗಿರುವ ಮುಖ್ಯಶಿಕ್ಷಕ ಮನೋಜ್ ವಿಶ್ವಕರ್ಮ ಹೇಳಿದ್ದಾರೆ.

“ಸೋನು ತುಂಬಾ ಕೀಟಲೆಯ ವಿದ್ಯಾರ್ಥಿ. ಆತ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕೂಡ ಕಚ್ಚುತ್ತಿದ್ದ. ಈತನ ವರ್ತನೆಯನ್ನು ಸರಿಪಡಿಸುವಂತೆ ಆತನ ತಂದೆ ನನಗೆ ಹೇಳಿದ್ದರು. ನಾವು ಆತನನ್ನು ಹೆದರಿಸಲು ಪ್ರಯತ್ನಿಸಿದೆವು. ಹೆದರಿಕೆ ಹುಟ್ಟಲು ಆತನನನ್ನು ಕೊನೆಯ ಮಹಡಿಯಿಂದ ತಲೆಕೆಳಗಾಗಿ ನೇತಾಡಿಸಿದೆವು” ಎಂದು ಮನೋಜ್ ಹೇಳಿದ್ದಾರೆ.

Leave A Reply

Your email address will not be published.