ಕಡಬ:ಗಾಂಧಿ ಜಯಂತಿ, ಶಾಲಾ ವಠಾರ ಸ್ವಚ್ಛತೆ

ಕಡಬ : ಗಾಂಧಿಜಿ ನನ್ನ ಜೀವನವೇ ನನ್ನ ಸಂದೇಶ ಎನ್ನುವಂತೆ ಬದುಕಿದವರು. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸ್ವಸ್ಥ ಮತ್ತು ಸದೃಢ ಸಮಾಜದ ನಿರ್ಮಾಣದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಆರ್ಯಭಟ ಪ್ರಶಸ್ತಿ ಪುರಸ್ಕೃತ ಎನ್.ಕರುಣಾಕರ ಗೋಗಟೆ ಹೊಸಮಠ ಅವರು ನುಡಿದರು.

ಅವರು ಶನಿವಾರ ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಹಾಗೂ ಯುವ ಜೇಸಿ ವಿಭಾಗದ ವತಿಯಿಂದ ಆಯೋಜಿಸಲಾದ ಜೇಸಿ ಸಪ್ತಾಹ ಕದಂಬೋತ್ಸವ-೨೦೨೧ ಕಾರ್ಯಕ್ರಮವನ್ನು ಉದ್ಘಾಟಿಸಿ, ಗಾಂಧಿ ಜಯಂತಿ ಹಾಗೂ ಶಾಲಾ ವಠಾರ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಾಂಽಜಿ ನಮ್ಮನ್ನಗಲಿ ಹಲವು ದಶಕಗಳು ಸಂದರೂ ಅವರು ಹಾಕಿಕೊಟ್ಟ ಸತ್ಯದ ಮಾರ್ಗ ನಮಗೆಲ್ಲಾ ದಾರಿದೀಪವಾಗಿದೆ. ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಆ ಮಹಾನ್ ಚೇತನಕ್ಕೆ ನಿರಂತರ ಗೌರವ ಸಲ್ಲಿಸೋಣ ಎಂದು ಅವರು ನುಡಿದರು.

ಶಾಲಾ ಮುಖ್ಯಶಿಕ್ಷಕ ಹಮೀದ್ ಕೆ. ಅವರು ಮಾತನಾಡಿ ಗಾಂಧಿಜಿ ವಿದೇಶದಲ್ಲಿ ಶಿಕ್ಷಣ ಪಡೆದು ಬ್ಯಾರಿಸ್ಟರ್ ಪದವಿ ಹೊಂದಿ ಬೇಕಾದಷ್ಟು ಹಣ ಸಂಪಾದಿಸುವ ಅವಕಾಶಗಳನ್ನು ಹೊಂದಿದ್ದರೂ ಸತ್ಯ ಮತ್ತು ನ್ಯಾಯಕ್ಕಾಗಿ ಅವೆಲ್ಲವನ್ನೂ ತೊರೆದರು. ಸೂಟು ಬೂಟವನ್ನು ಬದಿಗಿರಿಸಿ ಮೈಮುಚ್ಚಲು ತುಂಡು ಬಟ್ಟೆಯನ್ನು ಹೊದ್ದುಕೊಂಡು ದೇಶವನ್ನು ಪರಕೀಯರ ಕೈಯಿಂದ ಸ್ವತಂತ್ರಗೊಳಿಸಲು ಅಹಿಂಸೆಯ ಮಾರ್ಗದಲ್ಲಿ ಹೋರಾಟ ನಡೆಸಿ ಇಡೀ ಪ್ರಪಂಚಕ್ಕೇ ಮಾದರಿಯಾದರು. ಗಾಂಽ ಹುಟ್ಟಿದ ದೇಶದಲ್ಲಿ ನಾವಿದ್ದೇವೆ ಎನ್ನುವುದೇ ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು. ಜೇಸಿ ಅಧ್ಯಕ್ಷ ತಿರುಮಲೇಶ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಉಷಾ, ಮರಿಯಂ ಶಹನಾಝ್, ಅದೀಪಾ ಹಾಗೂ ಅಧಿತಿ ಗಾಂಧಿಜಿ ಬಗ್ಗೆ ಮಾತನಾಡಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಕುಸುಮಾವತಿ, ಜೇಸಿ ವಲಯಾಧಿಕಾರಿ ಮೋಹನ ಕೋಡಿಂಬಾಳ, ಯುವ ಜೇಸಿ ಅಧ್ಯಕ್ಷ ಮಹಮ್ಮದ್ ಶಾನ್ ಉಪಸ್ಥಿತರಿದ್ದರು.
ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ. ಸ್ವಾಗತಿಸಿ, ಜೇಸಿ ಕಾರ್ಯದರ್ಶಿ ಜೇಮ್ಸ್ ಕ್ರಿಶಲ್ ಡಿಸೋಜ ವಂದಿಸಿದರು. ಸಪ್ತಾಹ ನಿರ್ದೇಶಕ ಕಾಶೀನಾಥ ಗೋಗಟೆ ಸಪ್ತಾಹದ ವರದಿ ಮಂಡಿಸಿದರು.

Leave A Reply

Your email address will not be published.