ಮುಂಬೈ ಘಟನೆ ಮಾಸುವ ಮುನ್ನವೇ ಚೆನ್ನೈನಲ್ಕಿ ನಡೆಯಿತು ಇನ್ನೊಂದು ಹೇಯ ಕೃತ್ಯ | ಯುವತಿಗೆ ಮತ್ತು ಬರಿಸುವ ತಿಂಡಿ ನೀಡಿ ಸಾಮೂಹಿಕ ಅತ್ಯಾಚಾರ

ಚಲಿಸುತ್ತಿದ್ದ ಕಾರಿನಲ್ಲಿ 20 ವರ್ಷ ವಯಸ್ಸಿನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ತಮಿಳುನಾಡಿನ ಚೆನ್ನೈನ ಮೆಲ್ಕತಿರ್​ಪುರ ಗ್ರಾಮದ ಬಳಿ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಗೆ ಡ್ರಗ್ಸ್​ ನೀಡಿ ಅತ್ಯಾಚಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿತರನ್ನು ಗುಣಶೀಲನ್, ಜೆಬನೇಸನ್, ಗುಣಶೇಖರನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ.

ಸಂತ್ರಸ್ಥ ಯುವತಿ ಖಾಸಗಿ ಮೊಬೈಲ್​ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಮತ್ತು ಗುಣಶೀಲನ್​ ಇಬ್ಬರೂ ಆನ್​ಲೈನ್​ ಆ್ಯಪ್​ವೊಂದರ ಮೂಲಕ ಸ್ನೇಹಿತರಾಗಿದ್ದರು. ಬುಧವಾರ ಗುಣಶೀಲನ್ ತನ್ನ ಕಾರಿನಲ್ಲಿ​ ಆ ಯುವತಿಯನ್ನು ಅಂಗಡಿಯಿಂದ ಕರೆದುಕೊಂಡು ಹೋಗಿ ಅಲ್ಲಿಂದ ಕಾಂಚಿಪುರಂನಲ್ಲಿರುವ ಆತನ ಫಾರ್ಮ್​ಹೌಸ್​ಗೆ ಕರೆದುಕೊಂಡು ಹೋಗಿದ್ದನು.

ಅಲ್ಲಿ ಯುವತಿಗೆ ತಿಂಡಿ ನೀಡಿದ್ದು, ಅದಕ್ಕೆ ನಿದ್ರೆ ಬರುವ ಔಷಧಿಯ ಲೇಪನವನ್ನು ಸವರಲಾಗಿತ್ತು. ಜತೆಗೆ ಪಾನೀಯವನ್ನೂ ನೀಡಲಾಗಿತ್ತು. ಮತ್ತೇರಿದ ಆಕೆ ನಿದ್ರೆಗೆ ಜಾರುತ್ತಿದ್ದಂತೆ ಗುಣಶೀಲನ್​ ಮತ್ತು ಆತನ ಸ್ನೇಹಿತರು ಸೇರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ.

ತನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದಾಗಲೇ ಆ ಯುವತಿಗೆ ಎಚ್ಚರವೇನೋ ಆಗಿದೆ. ಆಕೆ ತಪ್ಪಿಸಿಕೊಳ್ಳಲು ಕಾರಿನ ಕಿಟಕಿ ಒಡೆಯಲು ಯತ್ನಿಸಿದ್ದಾಳೆ. ಆದರೆ ಪ್ರಯೋಜನ ಆಗಲಿಲ್ಲ. ಸ್ಥಳದಲ್ಲಿ ಗಲಾಟೆ ಕೇಳುತ್ತಿದ್ದಂತೆ ಸ್ಥಳೀಯರು ಅಲ್ಲಿಗೆ ಆಗಮಿಸಿದ್ದಾರೆ. ಜನರು ಬರುತ್ತಿರುವುದನ್ನು ನೋಡಿದ ಆರೋಪಿಗಳು ಅಲ್ಲಿಂದ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಬಳಿಕ ಅಸ್ವಸ್ಥಳಾದ ಆ ಯುವತಿಯನ್ನು ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದರು.

ಆ ಯುವತಿ ಸುಧಾರಿಸಿಕೊಂಡು ಸಮೀಪದ ಪೊಲೀಸ್​ ಠಾಣೆಗೆ ಹೋಗಿ, ದೂರು ನೀಡಿದ್ದಳು. ನಂತರ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಆಕೆ ನೀಡಿದ ಮಾಹಿತಿಯಂತೆ ಐವರಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಯಿತು. ಐವರು ಈ ದುಷ್ಕೃತ್ಯ ಎಸಗಿದ್ದು, ಓರ್ವ ಪರಾರಿಯಾಗಿದ್ದಾನೆ.

Leave A Reply

Your email address will not be published.