ಸವಣೂರು : ಒಣ‌ಮೀನು ಮಾರಾಟ ಮಾಡಿ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಟ್ಟ ಅಬೂಬಕ್ಕರ್ ಸವಣೂರು

ಸವಣೂರು : ಒಣ ಮೀನು ಮಾರಾಟ ಮಾಡಿ ತನ್ನ‌ಮಕ್ಕಳಿಗೆ ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣ ಕೊಡಿಸಿದ ಅಬೂಬಕ್ಕರ್ ಸವಣೂರು ಅವರನ್ನು ಸವಣೂರಿನ ತನ್ನ ಅಂಗಡಿಯ ಒಣಮೀನಿನ ಅಂಗಡಿಯಲ್ಲಿ ಪುತ್ತೂರಿನ ಕಮ್ಯುನಿಟಿ ಸೆಂಟರ್‌ ವತಿಯಿಂದ ಅಭಿನಂದಿಸಲಾಯಿತು.

ಕಡಬ ತಾಲ್ಲೂಕಿನ ಸವಣೂರಿನ ಬಸ್ಸು ನಿಲ್ದಾಣದ ಎದುರುಗಡೆ ಸಣ್ಣ ಗೂಡಂಗಡಿಯಲ್ಲಿ ಒಣಮೀನು ವ್ಯಾಪಾರಿಯಾಗಿರುವ ಅಬೂಬಕ್ಕರ್ ಅವರು ತನ್ನ ಮಕ್ಕಳ ಶಿಕ್ಷಣದ ಕನಸನ್ನು ನನಸು ಮಾಡಿದ ಅಕ್ಷರ ಪ್ರೇಮಿ. ಅದಕ್ಕಾಗಿ ಬಹಳಷ್ಟು ಕಷ್ಟಪಟ್ಟ ತ್ಯಾಗಿ.

ಅಬೂಬಕರ್ ಅವರ ಮೊದಲ ಮಗಳು ಡೆಂಟಿಸ್ಟ್. ಮದುವೆಯಾಗಿ ಸಾಫ್ಟ್ ವೇರ್ ಇಂಜಿನಿಯರ್ ಗಂಡನೊಂದಿಗೆ ಸಿಂಗಾಪುರದಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದಾರೆ. ಎರಡನೇ ಮಗ ಮೆಕ್ಯಾನಿಕಲ್ ಇಂಜಿನಿಯರ್, ಈಗಷ್ಟೇ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಮೂರನೇ ಮಗಳು ಬಿಎಸ್ಸಿ. ನಾಲ್ಕನೇ ಮಗ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದುತ್ತಾ ಇದ್ದಾರೆ. ಕೊನೆಯ ಮಗಳು ಪಿಯುಸಿ ಸೈನ್ಸ್ ಮಾಡಿ ಮೆಡಿಕಲ್ ಓದಲು ತಯಾರಿ ನಡೆಸುತ್ತಿದ್ದಾರೆ. ತನ್ನ 5 ಮಕ್ಕಳಿಗೂ ಉನ್ನತ ಶಿಕ್ಷಣವನ್ನು ಕೊಟ್ಟು ಅವರನ್ನು ಸ್ವಂತ ಕಾಲಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಅದೂ ತನ್ನ ಒಣ ಮೀನಿನ ವ್ಯಾಪಾರದಿಂದ ಬರುವ ಆದಾಯದಿಂದ ಎನ್ನುವುದು ವಿಶೇಷ.

ಗುರುವಾರ ಸವಣೂರಿನ ತನ್ನ ಅಂಗಡಿಯಲ್ಲೇ ಅಬೂಬಕ್ಕರ್ ಅವರನ್ನು ಪುತ್ತೂರು ಕಮ್ಯುನಿಟಿ ಸೆಂಟರ್ ವತಿಯಿಂದ ಒಣ ಮೀನಿನ ಬುಟ್ಟಿಯ ಮುಂದೆ ಕುಳ್ಳಿರಿಸಿ ಅಭಿನಂದಿಸಲಾಯಿತು.
ಸವಣೂರು ಗ್ರಾಮ ಪಂಚಾಯತ್ ಸದಸ್ಯ ಎಂ.ಎ. ರಫೀಕ್ ಸನ್ಮಾನಿಸಿದರು.

ಅಭಿನಂದನ ಭಾಷಣ ಮಾಡಿದ ರಫೀಕ್ ಮಾಸ್ಟರ್ ಮಾತನಾಡಿ,ಬದುಕಿನಲ್ಲಿ ಅದೆಷ್ಟು ಸನ್ಮಾನ ಕಾರ್ಯಕ್ರಮ ಮಾಡಿದ ನಮಗೆ ಈ ಸನ್ಮಾನ ಬಹಳಷ್ಟು ಹೃದಯಕ್ಕೆ ಸಂತಸವನ್ನು ಕೊಟ್ಟಿದೆ. ಇಂಥವರನ್ನು ಗುರುತಿಸುವುದರಿಂದ ಖಂಡಿತವಾಗಿಯೂ ಕೂಡ ಅಲ್ಲಾಹನ ಸಂಪ್ರೀತಿಗಾಗಿ ಪಾತ್ರವಾಗಬಹುದು ಎಂದರು.

ಪುತ್ತೂರು ಕಮ್ಯುನಿಟಿ ಸೆಂಟರ್ ನ ಸದಸ್ಯ ಜನಾಬ್ ಮುಝಮ್ಮಿಲ್, ಮೌಲಾನಾ ಆಜಾದ್ ಶಾಲೆಯ ಉಪಪ್ರಾಂಶುಪಾಲರಾದ ಜನ ತೌಫೀಕ್, ಅಬೂಬಕ್ಕರ್ ಅವರ ಮಕ್ಕಳು,ಚಾಪಲ್ಲ ಬದ್ರೀಯಾ ಜುಮ್ಮಾ ಮಸೀದಿ ಜಮಾಅತ್ ಕಮಿಟಿ ಸದಸ್ಯರಾದ ಹಂಝ ಹಾಜಿ ರೋಯಲ್,ಎಂ ಎಚ್ ಚಿಕನ್ ಮಾಲಕ ಹನೀಫ್,ಅಬ್ದುಲ್ ಕುಂಞೀ,ಮಹಮ್ಮದ್ ಉಪಸ್ಥಿತರಿದ್ದರು.

Leave A Reply

Your email address will not be published.