ಇನ್ನೆರಡು ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದ ಹುಡುಗಿಯ ಉಸಿರನ್ನೇ ನಿಲ್ಲಿಸಿದ ಅಣ್ಣ!!

ಮದುವೆ ಲಗ್ನ ಪತ್ರಿಕೆಯನ್ನೂ ಹಂಚಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಮನೆಯಲ್ಲಿ ಮಗಳ ಮದುವೆ ಸಂಭ್ರಮ ಕಳೆಗಟ್ಟುತಿತ್ತು. ಆದರೆ, ಮದುವೆಗೆ ಇನ್ನೆರಡು ದಿನ ಇರುವಾಗಲೇ ಅಣ್ಣನಿಂದಲೇ ವಧು ಕೊಲೆಯಾಗಿದ್ದಾಳೆ.

ಹೌದು, ಇಂತಹ ಅಮಾನವೀಯ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬೂರು ಗ್ರಾಮದಲ್ಲಿ ನಡೆದಿದೆ. ಚಂದ್ರಕಲಾ (22) ಮೃತ ದುರ್ದೈವಿ.

ಜುಲೈ 13ರಂದು ಈಕೆಯ ಮದುವೆ ನಿಗದಿಯಾಗಿತ್ತು. ಮನೆಯಲ್ಲಿ ಸಂಬಂಧಿಕರು, ಪರಿಚಯಸ್ಥರಿಗೆಲ್ಲ ಲಗ್ನ ಪತ್ರಿಕೆಯನ್ನೂ ಹಂಚಿಯಾಗಿತ್ತು. ಇಷ್ಟೆಲ್ಲಾ ಆದ ಮೇಲೆ ಹುಡುಗ ಕಪ್ಪು ಎಂಬ ಕಾರಣಕ್ಕೆ ಯುವತಿ ಮದುವೆ ನಿರಾಕರಿಸಿಬಿಟ್ಟಳು.

ಏಕಾಏಕಿ ತಂಗಿ ಮದುವೆಗೆ ನಿರಾಕರಿಸಿದ್ದನ್ನು ಪ್ರಶ್ನಿಸಿದ ಅಣ್ಣ ಶ್ಯಾಮಸುಂದರ, ಮದುವೆ ಆಗುವಂತೆ ಮನವೊಲಿಸಿದ್ದ. ಯಾವುದೇ ಕಾರಣಕ್ಕೂ ಮದುವೆ ಆಗುವುದಿಲ್ಲ. ಹುಡುಗ ಕಪ್ಪಗಿದ್ದಾನೆ ಎಂದು ಚಂದ್ರಕಲಾ ಪಟ್ಟು ಹಿಡಿದಿದ್ದಳು.

ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದ ಅಣ್ಣ ಮನೆಯಲ್ಲಿದ್ದ ಕೊಡಲಿಯಿಂದ ತಂಗಿಗೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಚಂದ್ರಕಲಾಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಈ ಬಗ್ಗೆ ಗಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಶ್ಯಾಮಸುಂದರನನ್ನು ಬಂಧಿಸಿದ್ದಾರೆ.

Leave A Reply

Your email address will not be published.