ಮಹಿಳೆಯನ್ನು ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಸ್ ಚಾಲಕ

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಜತೆ ಸಲುಗೆ ಬೆಳೆಸಿಕೊಂಡ ಬಸ್ ಚಾಲಕನೊಬ್ಬ ಆಕೆಯನ್ನ ತಿಪಟೂರಿಗೆ ಕರೆದೊಯ್ದು ತೋಟದ ಮನೆಯಲ್ಲಿ ನಗ್ನಗೊಳಿಸಿ ಕೂಡಿ ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಸವೇಶ್ವರನಗರ ನಿವಾಸಿ 40 ವರ್ಷದ ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಿಎಂಟಿಸಿ ಬಸ್ ವೊಂದರಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದರು. 2019ರಲ್ಲಿ ಚಾಲಕ ವಿಶ್ವನಾಥ್(42) ಪರಿಚಯವಾಗಿ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಇಬ್ಬರ ನಡುವೆ ಸಲುಗೆ ಬೆಳೆದ ಬಳಿಕ ತಿಪಟೂರಿನಲ್ಲಿರುವ ಮನೆಗೆ ಮಹಿಳೆಯನ್ನು ಆಗಾಗ ಕರೆದುಕೊಂಡು ಹೋಗುತ್ತಿದ್ದ.

ವಿವಾಹವಾಗುವುದಾಗಿ ಮಹಿಳೆಯನ್ನು ನಂಬಿಸಿದ್ದ ವಿಶ್ವನಾಥ್, ಆಕೆಯಿಂದ 2.70 ಲಕ್ಷ ರೂ. ಪಡೆದಿದ್ದ. ಹಣ ಪಡೆದು 2 ವರ್ಷ ಕಳೆದರೂ ಹಿಂತಿರುಗಿಸದೆ ಸತಾಯಿಸುತ್ತಿದ್ದ. ಮಾ.23ರಂದು ನಿನಗೆ ನೀಡಬೇಕಿರುವ ಹಣವನ್ನು ಕೊಡುತ್ತೇನೆ ಎಂದು ಹೇಳಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಿಪಟೂರಿನ ಹಾಲುಕುರ್ಕೆ ಬಳಿಯಿರುವ ತೋಟದ ಮನೆಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ತೋಟದ ಮನೆಯ ಒಂದು ಕೊಠಡಿಯಲ್ಲಿ ಕೂಡಿಹಾಕಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾನೆ. ಹಣ ಕೇಳಿದರೆ ಮಾರಕಾಸ್ತ್ರದಿಂದ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ.

2 ದಿನಗಳ ಕಾಲ ತೋಟದ ಮನೆಯಲ್ಲೇ ಇರಿಸಿಕೊಂಡು ಹಿಂಸೆ ಕೊಟ್ಟಿದ್ದಾನೆ ಎಂದು ಸಂತ್ರಸ್ತೆ ದೂರು ಕೊಟ್ಟಿದ್ದು, ಬಿಎಂಟಿಸಿ ಬಸ್ ಚಾಲಕನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.