Kadaba: ಔತಣಕೂಟದಲ್ಲಿ ಯುವಕ-ಯುವತಿ ಜತೆಗಿರುವ ಫೋಟೋ ತೆಗೆದ ಆರೋಪ- ಹಲ್ಲೆ, ಪ್ರಕರಣ ದಾಖಲು

Kadaba: ಯುವಕನೊಬ್ಬ ಯುವತಿಯೊಂದಿಗೆ ಇರುವ ಫೊಟೋವೊಂದನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ ಆರೋಪದಲ್ಲಿ ತಂಡವೊಂದು ಫೊಟೋ ತೆಗೆದ ವ್ಯಕ್ತಿಯ ಮನೆಗೆ ಬಂದು ಹಲ್ಲೆ ನಡೆಸಿದ ಘಟನೆಯೊಂದು ಕಡಬ ತಾಲೂಕಿನ ರೆಂಜಲಾಡಿ ಎಂಬಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Kanpur Crime News: ಕಾಳಿ ವೇಷ ಧರಿಸಿ ಮಕ್ಕಳ ಕಥಾನಕ ಪ್ರದರ್ಶನ; 11 ವರ್ಷದ ಬಾಲಕ ಸಾವು

ರೆಂಜಲಾಡಿಯ ಯುವತಿಯ ವಿವಾಹದ ಔತಣಕೂಟವು ಏ.29 ರಂದು ನಡೆದಿತ್ತು. ಯುವತಿಯೊಂದಿಗೆ ನಿಶಾಂತ್‌ ಎಂಬ ಯುವಕ ಇರುವ ಫೊಟೋವನ್ನು ಬಾಂತಾಂಜೆ ನಿವಾಸಿ ದಿವಾಕರ ಎಂಬ ವ್ಯಕ್ತಿ ಕ್ಲಿಕ್‌ ಮಾಡಿದ್ದಾರೆ ಎನ್ನುವುದು ಹಲ್ಲೆ ಮಾಡಿದವರ ಆರೋಪ. ಈ ವಿಚಾರ ಸಂಬಂಧ ರಾತ್ರಿ 11.30 ಕ್ಕೆ ನಿಶಾಂತ್‌ ತನ್ನ ಸಹಚರರಾದ ಜನಾರ್ದನ, ಲೋಕೇಶ, ರಮೇಶ, ಉದಯ, ಭುವನ, ಅಶ್ವಿತ್‌ ಅವರೊಂದಿಗೆ ದಿವಾಕರ ಅವರ ಮನೆಗೆ ಬಂದಿದ್ದು, ಅಲ್ಲಿ ಈ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Uppinangady: ಹೃದಯಾಘಾತದಿಂದ ಯುವಕ ಸಾವು

ಈ ಸಂದರ್ಭದಲ್ಲಿ ದಿವಕಾರ ಅವರ ಅತ್ತಿಗೆ ಭವ್ಯಶ್ರೀ ಜಗಳ ಬಿಡಿಸಲೆಂದು ಬಂದಾಗ, ಸ್ವಾತಿ ಮತ್ತು ರೇಷ್ಮಾ ಶೈನಿ ಎಂಬುವವರು ಭವ್ಯಶ್ರೀ ಅವರಿಗೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಗಲಾಟೆ ಕೇಳಿ ನೆರೆಮನೆಯ ಶಿವಪ್ಪ ಎಂಬಾತ ಕೂಡಾ ರಕ್ಷಣೆಗೆಂದು ಧಾವಿಸಿದ್ದು, ಅವರಿಗೂ ನಿಶಾಂತ್‌ ಹಾಗೂ ತಂಡ ಹಲ್ಲೆ ಮಾಡಿದೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.

ಗಾಯಗೊಂಡವರನ್ನು ನೆರೆಮನೆಯ ಬಾಬುಗೌಡ ಮತ್ತು ಪ್ರದೀಪ್‌ ಅವರು ಉಪಚರಿಸಿ ನಂತರ ಕಡಬ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ. ಕಡಬ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

Leave A Reply

Your email address will not be published.