ನೋವಿನ ಜೀವನದಿಂದ ರೋಸಿ ಹೋದ ಬಾಲಕನೊಬ್ಬ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಹೋದಾಗ ಕೋರ್ಟು ಆವರಣದಲ್ಲೇ ಸಾವು…

ತಿರುಪತಿ : ಪ್ರತಿದಿನ ನೋವಿನ ಜೀವನದಿಂದ ರೋಸಿ ಹೋದ ಬಾಲಕನೊಬ್ಬ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಬಂದಾಗ ಕೋರ್ಟ್ ಆವರಣದಲ್ಲೇ ಅಸುನೀಗಿದ ಘಟನೆ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ನಡೆದಿದೆ.

ಹರ್ಷವರ್ಧನ್ ಎಂಬ ಹತ್ತು ವರ್ಷಗಳ ಹುಡುಗನೇ ಹಾಗೆ ಕೋರ್ಟ್ ಆವರಣದಲ್ಲಿ ಮೃತಪಟ್ಟ ಬಾಲಕ.

ನಾಲ್ಕು ವರ್ಷಗಳ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚೌಡೆಪಲ್ಲಿ ಮಂಡಲದ ಡೆಚುಪಲ್ಲಿ ಗ್ರಾಮದಲ್ಲಿರುವ ತನ್ನ ಮನೆಯ ಟೆರೇಸ್‌ನಿಂದ ಬಿದ್ದು ತಲೆಗೆ ಗಾಯವಾಗಿತ್ತು. ಅಂದಿನಿಂದ ಅಸ್ವಸ್ಥನಾಗಿ ಹಾಸಿಗೆ ಹಿಡಿದ ಅತ ಮತ್ತೆಂದೂ ಎದ್ದು ಕೂರಲಿಲ್ಲ. ಅವನನ್ನು ಸಾಮಾನ್ಯ ಸ್ಥಿತಿಗೆ ತರಲು ಹೆತ್ತವರು ಮಾಡದ ಪ್ರಯತ್ನವಿಲ್ಲ. ಆದರೆ ಅವೆಲ್ಲ ವ್ಯರ್ಥವಾಗಿತ್ತು.

ತಿರುಪತಿಯ ದಯಾ ಆಸ್ಪತ್ರೆ ಮತ್ತು ತಮಿಳುನಾಡಿನ ವೆಲ್ಲೂರು ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಹರ್ಷವರ್ಧನನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಬಾಲಕನ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿರಲಿಲ್ಲ. ಹರ್ಷವರ್ಧನ್ ಚಿಕಿತ್ಸೆಗಾಗಿ ಆತನ ಪೋಷಕರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಇದೀಗ 4 ಲಕ್ಷ ರೂ.ಗಿಂತ ಹೆಚ್ಚಿನ ಸಾಲ ಮಾಡಿದ್ದರು.

ಮುಂದೆ ತಮ್ಮ ಮಗನ ಚಿಕಿತ್ಸೆಗೆ ಹೆಚ್ಚಿನ ಹಣ ಭರಿಸಬೇಕಾದ ಸ್ಥಿತಿಯಲ್ಲಿಲ್ಲದ ಕಾರಣ ಅವರು ದಯಾಮರಣ ಬೇಡಲು ಪುಂಗನೂರಿನ ನ್ಯಾಯಾಲಯದ ಆವರಣಕ್ಕೆ ಹೋಗಿದ್ದರು. ಆದರೆ ದಯಾಮರಣ ಅರ್ಜಿ ವಿಚಾರಣೆಗೂ ಮುನ್ನವೇ ದೇವರು ದಯೆ ತೋರಿಸಿದ್ದ. ಹುಡುಗ ಕೋರ್ಟ್ ಆವರಣದಲ್ಲೇ ಕೊನೆಯುಸಿರೆಲೆದಿದ್ದಾನೆ.

Leave A Reply

Your email address will not be published.