ನಾಯಿ ಚಪ್ಪಲಿ ಕಚ್ಚಿತೆಂದು ಬೈಕ್ ಗೆ ನಾಯಿಯನ್ನೇ ಕಟ್ಟಿ ದರ ದರ ಎಳೆದೊಯ್ದ ಧೂರ್ತ ,ಆರೋಪಿ ಬಂಧನ

ಮಂಗಳೂರು: ನಗರದಲ್ಲಿ ಇತ್ತೀಚೆಗೆ ಶ್ವಾನವೊಂದನ್ನು ಬೈಕ್ ಗೆ ಕಟ್ಟಿ ಎಳೆದೊಯ್ದು ಅನಾಗರಿಕರಂತೆ ವರ್ತಿಸಿರುವ ಘಟನೆ ಮಾಸುತ್ತಿರುವಾಗಲೇ ಇಂಥದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ನಾಯಿ ತನ್ನ ಚಪ್ಪಲಿ ಕಚ್ಚಿದೆ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಈ ಕುಕೃತ್ಯ ನಡೆಸಲಾಗಿದೆ.

ಕಲಬುರಗಿ ಮೂಲದ ಪ್ರಸ್ತುತ ಕೊಂಚಾಡಿ ಬಳಿಯ ವೈದ್ಯರ ಮನೆಯಲ್ಲಿ ತೋಟದ ಕೆಲಸಕ್ಕಿರುವ ಈರಯ್ಯ ಎಂಬಾತನೇ ಆರೋಪಿ.

ನಾಯಿ ತನ್ನ ಚಪ್ಪಲಿ ಕಚ್ಚಿ ಹಾಳು ಮಾಡಿರುವ ಕೋಪಕ್ಕೆ ನಾಯಿಯನ್ನೇ ಬೈಕಿಗೆ ಕಟ್ಟಿ ಕೊಂಚಾಡಿಯಿಂದ ಮೇರಿಹಿಲ್ ವರೆಗೆ ಅಂದರೆ ಸುಮಾರು 2 ಕಿ.ಮೀ. ಎಳೆದು ತಂದಿದ್ದಾನೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಈ ದೃಶ್ಯ ಅಪಾರ್ಟ್ ಮೆಂಟ್ ಒಂದರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ನೆರವಿಗೆ ಈತ ತನ್ನ ಮಗನನ್ನು ಬಳಸಿದ್ದಾನೆ.

ಈ ವಿಚಾರ ತಿಳಿದ ಎನಿಮಲ್ ಕೇರ್ ಟ್ರಸ್ಟ್ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತ ಸುಹಾನ್ ಆಳ್ವ, ಅಪಾರ್ಟ್‌ಮೆಂಟ್ ಸಿಸಿ ಟಿವಿ ಫೂಟೇಜ್ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಆರೋಪಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ ಡಿಸಿಪಿ ಹರಿರಾಂ ಶಂಕರ್ ಅವರಿಗೂ ದೂರು ನೀಡಿದ್ದಾರೆ.

ಡಿಸಿಪಿ ಹರಿರಾಂ ಶಂಕರ್ ಸೂಚನೆಯಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಜೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ನಾಯಿಯ ಕಾಲಿಗೆ ಗಾಯವಾಗಿ ರಕ್ತ ಹರಿದಿದ್ದು, ಬಳಿಕ ಆರೋಪಿ ನಾಯಿಯನ್ನು ಬಿಟ್ಟಿದ್ದಾನೆ. ಅದೃಷ್ಟವಶಾತ್ ಬಡಪಾಯಿ ಶ್ವಾನ ಜೀವಂತವಿದೆ.

Leave A Reply

Your email address will not be published.